ಭೂಮಿ ತಂಪು ಮಾಡಿ ರೈತನ ಹೊಟ್ಟೆಗೆ ಬರೆ ಎಳೆದ ಆಲಿಕಲ್ಲು ಮಳೆ
ಮಂಡ್ಯ, ಏಪ್ರಿಲ್ 21:ಬಿಸಿಲ ಝಳದಿಂದ ಬಸವಳಿದಿದ್ದ ಜನ ಮುಗಿಲತ್ತ ದೃಷ್ಠಿ ನೆಟ್ಟಿದ್ದರು. ಭೂಮಿ ಒಣಗಿ ನೀರು ಮೇವಿಗಾಗಿ ಜನ ಪರದಾಡುವಂತಾಗಿತ್ತು. ಯಾವಾಗ ಮಳೆ ಸುರಿಯುತ್ತದೆಯೋ ಎಂದು ಜನ ಕಾಯುತ್ತಿದ್ದರು. ಜನರ ಸಂಕಟ ವರುಣನಿಗೆ ಕೇಳಿಸಿತೋ ಏನೋ ಮಳೆ ಧೋ ಎಂದು ಸುರಿದಿತ್ತು. ಜನ ಜಾನುವಾರು ಖುಷಿಯಿಂದ ಬೀಗಿದ್ದರು.
ಆದರೆ ಬರೀ ಮಳೆ ಸುರಿದಿದ್ದರೆ ಎಲ್ಲರೂ ಖುಷಿ ಪಡುತ್ತಿದ್ದರೇನೋ ಆದರೆ ಆಗಿದ್ದೇ ಬೇರೆ ಮಳೆ ಜತೆಗೆ ಆಲಿಕಲ್ಲು ಬಿತ್ತು. ಈ ಆಲಿಕಲ್ಲು ಭೂಮಿಯನ್ನು ತಣ್ಣಗೆ ಮಾಡಿತಾದರೂ ರೈತನ ಹೊಟ್ಟೆಗೆ ಮಾತ್ರ ಬರೆ ಎಳೆದಿದೆ. ಏಪ್ರಿಲ್ ಮೇ ತಿಂಗಳಲ್ಲಿ ಸುರಿಯುವ ಮಳೆ ಆಲಿಕಲ್ಲಿನೊಂದಿಗೆ ಸುರಿಯವುದು ಹೊಸತೇನಲ್ಲ. ಅದರಂತೆ ಈ ಬಾರಿಯೂ ಸುರಿದಿದೆ.
ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಸಿದ್ಧವಿಲ್ಲ: ಕಾರಣ ಇಲ್ಲಿದೆ
ಆದರೆ ತರಕಾರಿ, ಇನ್ನಿತರ ಬೆಳೆಗಳನ್ನು ಬೆಳೆದ ರೈತರಿಗೆ ಮಾತ್ರ ಈ ಮಳೆ ಹಾನಿ ಮಾಡಿದೆ. ಕಾರಣ ಆಲಿಕಲ್ಲು ತರಕಾರಿ ಮೇಲೆ ಬಿದ್ದ ಪರಿಣಾಮ ಎಲ್ಲವೂ ಹಾಳಾಗಿದೆ. ಇದರಿಂದ ತರಕಾರಿ ಬೆಳೆದು ಒಂದಷ್ಟು ಹಣ ಸಂಪಾದಿಸಬಹುದು ಎಂದು ನಂಬಿದ್ದ ರೈತನಿಗೆ ಹೊಡೆತ ಬಿದ್ದಂತಾಗಿದೆ.
ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಬೂದಿಗುಂಬಳ ಬೆಳೆದ ರೈತನ ಕಣ್ಣಲ್ಲೀಗ ನೀರು ಚಿಮ್ಮತೊಡಗಿದೆ. ಕಾರಣ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಇದೀಗ ಆಲಿಕಲ್ಲು ಬಿದ್ದ ಪರಿಣಾಮ ನಾಶವಾಗುವಂತಾಗಿದೆ.
ಮೂರು ರಾಜ್ಯಗಳಲ್ಲಿ ಭೀಕರ ಚಂಡಮಾರುತಕ್ಕೆ 64 ಮಂದಿ ಬಲಿ
ಹರಿಹರಪುರ ಗ್ರಾಮದ ರೈತ ಸ್ವಾಮಿ ಎಂಬುವರು ತಮಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೂದುಗುಂಬಳ ಬೆಳೆಯನ್ನು ಬೆಳೆದಿದ್ದರು. ಇದಕ್ಕೆ ಸುಮಾರು ಎರಡು ಲಕ್ಷ ರೂಪಾಯಿ ಖರ್ಚಾಗಿತ್ತು. ಬಳ್ಳಿ ಚೆನ್ನಾಗಿ ಹಬ್ಬಿ ಹೂ ಬಿಟ್ಟು ಕಾಯಿಗಳಾಗಿತ್ತು.
ದಟ್ಟ ಕಾನನಕ್ಕೆ ಉಲ್ಲಾಸ ತುಂಬುವಂಥ ಮಳೆಗೆ ಬೆಂದ ಬೆಂಗಳೂರು ಕೂಡ ಕಾಯುತ್ತಿದೆ
ಆದರೆ ರೈತ ಸ್ವಾಮಿ ನಿರೀಕ್ಷೆ ಮಾಡಿದಂತೆ ಯಾವುದು ಆಗಲೇ ಇಲ್ಲ. ಆಲಿಕಲ್ಲಿನೊಂದಿಗೆ ಸುರಿದ ಮಳೆಗೆ ಬೂದುಗುಂಬಳ ಕಾಯಿ ರಂಧ್ರವಾಗಿ ಕೊಳೆತು ಹೋಗುತ್ತಿದೆ. ದೊಡ್ಡ ಗಾತ್ರದ್ದು ಮತ್ತು ಚಿಕ್ಕ ಮಿಡಿಗಳು ಕೂಡ ಆಲಿಕಲ್ಲಿಗೆ ಹಾಳಾಗಿವೆ. ಇದರಿಂದ ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸಾಲ ಮಾಡಿ ಬೆಳೆ ಬೆಳೆದ ರೈತ ಸ್ವಾಮಿ ಆಲಿಕಲ್ಲು ಮಳೆಯಿಂದಾದ ಅನಾಹುತದಿಂದ ಆತಂಕಕ್ಕೀಡಾಗಿದ್ದಾರೆ. ಮಾಡಿದ ಸಾಲ ತೀರಿಸುವುದು ಹೇಗೆಂದು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಇದು ಕೇವಲ ರೈತ ಸ್ವಾಮಿ ಒಬ್ಬರ ಕತೆಯಲ್ಲ. ಇಂತಹ ಪರಿಸ್ಥಿತಿಗೆ ಹಲವು ರೈತರು ಸಿಲುಕಿದ್ದಾರೆ.