ಬಂದಾಗಲೆಲ್ಲಾ ರೇಗುತ್ತಿದ್ದವನು ಈ ಸಾರಿ ಯಾಕೋ ನಗುತ್ತಲೇ ಇದ್ದ:ಗುರುವಿನ ತಂದೆ ಹೊನ್ನಯ್ಯ
Recommended Video
ಮೈಸೂರು, ಫೆಬ್ರವರಿ 15: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮಂಡ್ಯದ ಯೋಧ ಗುರುವಿನ ಸಾವಿನ ಸುದ್ದಿ ಕೇಳಿ ತಂದೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮಗನ ಸಾವಿನ ಸುದ್ದಿ ಕೇಳಿದ ಬಳಿಕ ಕುಸಿದು ಬಿದ್ದ ಅವರಿಗೆ ಸದ್ಯ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಕೆ ಹೊಂದುತ್ತಿದ್ದಾರೆ.
"ನನ್ನ ಮಗ ಎಲ್ಲರ ಮೇಲೂ ಪ್ರೀತಿ ಇಟ್ಟುಕೊಂಡಿದ್ದನು. ಅವನೇ ಸಾಲ ಮಾಡಿ ನಮಗೆ ಹಾಗೂ ತಮ್ಮಂದಿರಿಗಾಗಿ ಮನೆ ಕಟ್ಟಿಸಿದ್ದನು. ನಮ್ಮಲ್ಲೆರನ್ನು ಪ್ರೀತಿ ಮಾಡುತ್ತಿದ್ದನು. ಅವನು ಯಾವಾಗಲೂ ಮನೆಗೆ ಬಂದಾಗಲೂ ಎಲ್ಲರ ಮೇಲೆ ರೇಗುತ್ತಲೇ ಇದ್ದನು. ಆದರೆ ಈ ಬಾರಿ ಯಾಕೋ ನಗುತ್ತಲೇ ಇದ್ದ. ಆಗಲೇ ನಾವು ತಿಳಿದುಕೊಳ್ಳಬೇಕಿತ್ತು. ನನ್ನ ಮಗನನ್ನು ಕೊಂದವರಿಗೆ ಘೋರ ಶಿಕ್ಷೆಯಾಗಬೇಕು. ನಾನು ಮತ್ತೆ ಯಾವಾಗ ಬರುತ್ತೀಯಾ ಎಂದು ಕೇಳಿದಾಗ, ಅಪ್ಪ ಈಗ ಹೋಗುತ್ತಿದ್ದೇನೆ. ಅವರು ಯಾವಾಗ ಕಳುಹಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದನು" ಎಂದು ಮಗನನ್ನು ನೆನೆದು ಹೊನ್ನಯ್ಯ ಕಣ್ಣೀರಿಟ್ಟರು.
ಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರು
"ನಾನು ಹುತಾತ್ಮನಾದರೆ ನಾನೇ ನಿಜವಾದ ಹೀರೋ. ನಿನಗೆ ಗೊತ್ತಾ ಅಮ್ಮಾ, ನಾನು ಹುತಾತ್ಮನಾದರೆ ಯಾವುದೇ ಪ್ರಧಾನಿಗೆ ಸಿಗದ ಮುಕ್ತಿ ದೊರಕುತ್ತದೆ ಎಂದಿದ್ದ. ಇದೀಗ ಮಗನೇ ಇಲ್ಲದ ಮೇಲೆ ಆ ಮುಕ್ತಿ ಇಟ್ಟುಕೊಂಡು ನಾವು ಏನೂ ಮಾಡಬೇಕು. ಗುರುವಿಗೆ ಮದುವೆ ಆಗಿ 8 ತಿಂಗಳು ಆಗಿತ್ತು. ನನ್ನ ಮಗ ಚೆನ್ನಾಗಿರಲಿ ಎಂದು ಮದುವೆ ಮಾಡಿದೆ. ಬಳಿಕ ಕೆಲಸಕ್ಕೆ ಹೋಗೋದು ಬೇಡ ಎಂದು ಹೇಳಿದ್ದೆ. ಆದರೆ ನಾನು ದೇಶ ಸೇವೆ ಮಾಡಬೇಕು ಎಂದು ಹಠದಲ್ಲಿ ರಜೆ ಮುಗಿಸಿಕೊಂಡು ಹೋದವನು ಹಿಂದಿರುಗಿ ಬರಲೇ ಇಲ್ಲ" ಎಂದು ಹುತಾತ್ಮ ಯೋಧ ಗುರು ತಾಯಿ ಚಿಕ್ಕ ತಾಯಮ್ಮ ಬಿಕ್ಕಿ ಬಿಕ್ಕಿ ಅಳುತ್ತಾರೆ.