ಗೂಡೆಹೊಸಳ್ಳಿ ಏತ ನೀರಾವರಿ ಕಾಮಗಾರಿ ಆರಂಭ
ಮಂಡ್ಯ, ನವೆಂಬರ್ 07: ಬಹು ನಿರೀಕ್ಷಿತ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭಗೊಂಡಿರುವುದರಿಂದ ರೈತರು ಖುಷಿಯಾಗಿದ್ದಾರೆ.
ಹೇಮಾವತಿ ನದಿಯಿಂದ ನೀರು ತುಂಬಿಸುವ ಈ ಯೋಜನೆ ಆರಂಭವಾಗುತ್ತಿದ್ದಂತೆಯೇ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ರೈತರು ಸಂತಸಪಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಬರಪೀಡಿತವಾಗಿವೆ. ಇಲ್ಲಿನ ಕೆರೆ-ಕಟ್ಟೆಗಳು ತುಂಬದ ಕಾರಣ ರೈತರು ಪರದಾಡುವಂತಾಗಿತ್ತು. ಅಂತರ್ಜಲ ಮಟ್ಟವೂ ಕುಸಿತವಾಗಿದ್ದರಿಂದ ಕೊಳವೆ ಬಾವಿಗಳಲ್ಲಿ ನೀರು ಕೂಡ ಸಮರ್ಪಕವಾಗಿ ಬಾರದೆ ರೈತರು ಹತಾಶರಾಗಿದ್ದರು.
ಕಲಬುರಗಿ-ಬೀದರ್ ನಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 3000 ಕೋಟಿ ರೂ ಬಿಡುಗಡೆ
ಇದೀಗ 212 ಕೋಟಿ ರೂಪಾಯಿ ವೆಚ್ಚದ ಗೂಡೆಹೊಸಳ್ಳಿ ಪಕ್ಕದಲ್ಲಿ ಹೇಮಾವತಿ ನದಿಗೆ ಜಾಕ್ವೆಲ್ ನಿರ್ಮಿಸಿ ಪಂಪ್ ಮಾಡಿ ಭಾರೀ ಗಾತ್ರದ ಪೈಪುಗಳ ಮೂಲಕ ನದಿಯ ನೀರನ್ನು ಅಘಲಯ ದೊಡ್ಡಕೆರೆಗೆ ತುಂಬಿಸಿ ಅಲ್ಲಿಂದ ನೀರನ್ನು ಸಂತೇಬಾಚಹಳ್ಳಿ ಹೋಬಳಿಯ 40ಕ್ಕೂ ಹೆಚ್ಚಿನ ಕೆರೆಗಳು ಹಾಗೂ 10ಕ್ಕೂ ಹೆಚ್ಚಿನ ಕಟ್ಟೆಗಳಿಗೆ ನೀರು ಹಾಯಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇಲ್ಲಿನ ಕೆರೆ ಕಟ್ಟೆಗಳು ತುಂಬಿದ್ದೇ ಆದರೆ ರೈತರಿಗೆ ಕೃಷಿಗೆ ನೀರು ದೊರೆಯುವುದಲ್ಲದೆ, ಜನತೆಗೆ ಹಾಗೂ ಜಾನುವಾರುಗಳಿಗೂ ಅನುಕೂಲವಾಗಲಿದೆ.
ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆಗಾಗಿ ಕಳೆದ ನಾಲ್ಕು ದಶಕಗಳಿಂದ ಈ ವ್ಯಾಪ್ತಿಯ ಜನ ಹೋರಾಟ ಮಾಡಿಕೊಂಡು ಬಂದಿದ್ದರು. ಇದೀಗ ಯೋಜನೆ ಕಾರ್ಯಗತಗೊಳ್ಳುತ್ತಿರುವುದು ನೆಮ್ಮದಿ ತಂದಿದೆ.
Recommended Video
ಈಗಾಗಲೇ ಗೂಡೆಹೊಸಳ್ಳಿಯಿಂದ ಆರಂಭವಾಗುವ ಏತನೀರಾವರಿ ಕಾಮಗಾರಿಗೆ ಪೈಪ್ಲೈನ್ ನಿರ್ಮಾಣಕ್ಕಾಗಿ ಬೃಹದಾಕಾರದ ಪೈಪುಗಳನ್ನು ಅಘಲಯ ದೊಡ್ಡಕೆರೆಯ ಅಂಗಳಕ್ಕೆ ನೂರಾರು ಲಾರಿಗಳಲ್ಲಿ ತಂದು ಹಾಕಲಾಗಿದೆ. ಜತೆಗೆ ಅಘಲಯ ದೊಡ್ಡಕೆರೆಯ ಅಂಗಳ ಮತ್ತು ಗೂಡೆಹೊಸಳ್ಳಿ ಬಳಿಯ ಹೇಮಾವತಿ ನದಿಯ ಒಡಲಿನಲ್ಲಿ ಜಾಕ್ವೆಲ್ ನಿರ್ಮಾಣದ ಕಾಮಗಾರಿಯೂ ಆರಂಭಗೊಂಡಿದೆ. ಈ ಕಾಮಗಾರಿ ಶೀಘ್ರಗತಿಯಲ್ಲಿ ನಡೆದು ಯೋಜನೆ ಫಲಪ್ರದವಾದರೆ, ಮಳೆಯನ್ನೇ ನಂಬಿಕೊಂಡು ಬೇಸಾಯ ಮಾಡುತ್ತಿದ್ದ ಬರಪೀಡಿತ ಪ್ರದೇಶವಾದ ಸಂತೇಬಾಚಹಳ್ಳಿ ಹೋಬಳಿಯ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.