ನನ್ನನ್ನು ಬೆಂಬಲಿಸಿದವರಿಗೆ ಕಿರುಕುಳ: ಸುಮಲತಾ ಆರೋಪ
ಮಂಡ್ಯ, ಏಪ್ರಿಲ್ 23: ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅವರು, ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸಿದ ಕೆಲವರಿಗೆ ಜೆಡಿಎಸ್ ಪಕ್ಷದ ಮುಖಂಡರು ಕಿರುಕುಳ ನೀಡುತ್ತಿದ್ದಾರೆ. ಪೊಲೀಸರು ಉದ್ದೇಶಪೂರ್ವಕವಾಗಿ ದೂರು ಸಹ ಸ್ವೀಕರಿಸುತ್ತಿಲ್ಲ ಎಂದು ಹೇಳಿದರು.
ತಮ್ಮ ಬಳಿ ಅಳಲು ತೋಡಿಕೊಂಡ ಬೆಂಬಲಿಗರಿಗೆ ಸಮಾಧಾನ ಪಡಿಸಿದ ಸುಮಲತಾ ಅವರು, ತಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡುವುದಾಗಿ ಹೇಳಿದರು.
ನನಗೆ ಬೆಂಬಲಿಸಲು ಬಂದ ನಟರಿಗೆ ಸಿಎಂ ಅವರು ಸ್ವತಃ ಬೆದರಿಕೆ ಹಾಕಿದ್ದಾರೆ. ನಟರು ಪಶ್ಚಾತಪಡುತ್ತಾರೆ ಎಂದು ಹೇಳಿದ್ದಾರೆ, ಯಾವ ರೀತಿಯ ಪಶ್ಚಾತಾಪ ಅನುಭವಿಸುತ್ತಾರೆ ಎಂದು ಸಿಎಂ ಸ್ಪಷ್ಟಪಡಿಸಬೇಕು ಎಂದು ಸುಮಲತಾ ಒತ್ತಾಯಿಸಿದರು.
ಲೋಕಸಮರದಲ್ಲಿ ಸಾಥ್ ನೀಡಿದವರಿಗೆ ಥ್ಯಾಂಕ್ಸ್ ಎಂದ ಸುಮಲತಾ
ನಾನು ಸಿಂಗಪುರಕ್ಕೆ ಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹರಿಬಿಡಲಾಗಿದೆ. ನಾನು ಮಂಡ್ಯದಲ್ಲಿ ಇದ್ದೇನೆ, ನನಗೆ ಮಂಡ್ಯವೇ ಸಿಂಗಪುರ. ಏಪ್ರಿಲ್ 29ಕ್ಕೆ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಆಚರಿಸುತ್ತೇವೆ ಎಂದು ಅವರು ಇದೇ ಸಮಯದಲ್ಲಿ ಹೇಳಿದರು.
ಪಶ್ಚಾತ್ತಾಪ ಪಡುತ್ತೀರಾ: 'ಜೋಡೆತ್ತು'ಗಳಿಗೆ ಕುಮಾರಸ್ವಾಮಿ ವಾರ್ನಿಂಗ್
ಮಂಡ್ಯದಲ್ಲಿ ಅತಿ ಹೆಚ್ಚು ಮತದಾನ ಆಗಿರುವುದು ವಿಶೇಷವಾಗಿ ಮಹಿಳೆಯರ ಮತದಾನ ಕಳೆದ ಬಾರಿಗಿಂತಲೂ ಹೆಚ್ಚು ಆಗಿರುವುದು ನನ್ನ ಗೆಲುವಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.