ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಬೇಡ, ಅಂಬರೀಶ್ ಮಗ ಸ್ಪರ್ಧಿಸಲಿ: ಬೇಡಿಕೆ
ಮಂಡ್ಯ, ಜನವರಿ 12: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವಂತೆ ಒತ್ತಡ ಒಂದೆಡೆಯಿಂದ ಮತ್ತೊಂದೆಡೆಯಿಂದ ಅಂಬರೀಶ್ ಅವರ ಪುತ್ರ ಅಭಿಶೇಕ್ ಅಂಬರೀಶ್ ಸ್ಪರ್ಧಿಸಲಿ ಎಂಬ ಒತ್ತಡವೂ ಬರುತ್ತಿದೆ.
ಮಂಡ್ಯದಿಂದ ನಿಖಿಲ್ ಗೆ ಟಿಕೆಟ್ ನೀಡಬೇಕೆಂಬ ಒತ್ತಡ ಇದೆ ಎಂದು ಇತ್ತೀಚೆಗಷ್ಟೆ ಸ್ವತಃ ಕುಮಾರಸ್ವಾಮಿ ಹೇಳಿದ್ದರು. ಅವರು ಹೇಳಿಕೆ ನೀಡಿದ ಮರುದಿನವೇ ಕಾಂಗ್ರೆಸ್ ಕಾರ್ಯಕರ್ತರು ಈ ಬೇಡಿಕೆ ಮುಂದಿಟ್ಟಿದ್ದಾರೆ.
ಇತ್ತೀಚೆಗಷ್ಟೆ ಮಂಡ್ಯದ ಗಂಡು ಅಂಬರೀಶ್ ಅವರು ಕಾಲವಾಗಿದ್ದು, ಅವರು ಇಷ್ಟು ಪ್ರತಿನಿಧಿಸುತ್ತಿದ್ದ ಜಿಲ್ಲೆ ಮಂಡ್ಯ ಹಾಗಾಗಿ ಅವರ ಮಗನಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡಬೇಕು. ಅಭಿಶೇಕ್ ಅಂಬರೀಶ್ಗೆ ಜೆಡಿಎಸ್ ಸಹ ಬೆಂಬಲ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಂಬರೀಶ್ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.
ನಿಖಿಲ್ ಸ್ಪರ್ಧೆಗೆ ಮಂಡ್ಯ ಕಾಂಗ್ರೆಸ್ ವಿರೋಧ
ಈ ಬಗ್ಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅರವಿಂದ ಕುಮಾರ್ ಮಾತನಾಡಿ, ನಿಖಿಲ್ ಸ್ಪರ್ಧೆಗೆ ನಮ್ಮ ವಿರೋಧವಿದೆ. ಮಂಡ್ಯದಿಂದ ಅಂಬರೀಶ್ ಅವರ ಪುತ್ರ ಅಭಿಷೇಕ್ಗೆ ಟಿಕೆಟ್ ನೀಡಲಿ. ಅವರಿಗೆ ಜೆಡಿಎಸ್ ಸಹ ಬೆಂಬಲ ನೀಡಲಿ ಎಂದಿದ್ದಾರೆ.
ಶಿವರಾಮೇಗೌಡ ಇತ್ತೀಚಿಗಷ್ಟೆ ಗೆದ್ದಿದ್ದಾರೆ
ಇತ್ತೀಚೆಗಷ್ಟೆ ನಡೆದ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಶಿವರಾಮೇಗೌಡ ಗೆದ್ದಿದ್ದಾರೆ. ಈಗ ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಯನ್ನು ಬದಲಾಯಿಸುವ ಮಾತನಾಡಲಾಗುತ್ತಿದೆ.
ಸುಮಲತಾಗೆ ಟಿಕೆಟ್ ಕೊಡುವ ಸಾಧ್ಯತೆ
ತಾವು ಬದುಕಿರುವವರೆಗೂ ಮಗ ರಾಜಕೀಯಕ್ಕೆ ಬರಬಾರದು ಎಂಬುದು ಅಂಬರೀಶ್ ಅವರ ಷರತ್ತಾಗಿತ್ತು. ಆದರೆ ಈಗ ಅವರು ಕಾಲವಾಗಿದ್ದಾರೆ. ಈಗ ಅಭಿಶೇಕ್ ಅವರು ರಾಜಕೀಯಕ್ಕೆ ಧುಮುಕಲು ಸಕಾಲ ಎನ್ನಲಾಗುತ್ತಿದೆ. ಅಭಿಶೇಕ್ ಅವರಾಗದಿದ್ದರೆ ಸುಮಲತಾ ಅವರಿಗಾದರೂ ಟಿಕೆಟ್ ಕೊಡಬೇಕು ಎಂಬ ಮಾತುಗಳು ಮಂಡ್ಯದಲ್ಲಿ ಕೇಳಿಬರುತ್ತಿವೆ.
ಮಂಡ್ಯ ಕೈತಪ್ಪಿದರೆ ಚಿಕ್ಕಬಳ್ಳಾಪುರದಿಂದ?
ಹಾಸನದಿಂದ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಚುನಾವಣೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹಾಗಾಗಿ ನಿಖಿಲ್ ಕುಮಾರಸ್ವಾಮಿ ಸಹ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಕೈತಪ್ಪಿದರೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.