ಕೈಕೊಟ್ಟ ಶುಂಠಿ ಬೆಳೆ, ಕಂಗಾಲದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ
ಮಂಡ್ಯ, ನವೆಂಬರ್ 26: ಶುಂಠಿ ಬೆಳೆ ಕೈಕೊಟ್ಟು ನಷ್ಟವಾದ ಹಿನ್ನೆಲೆಯಲ್ಲಿ ರೈತರೊಬ್ಬರು ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದ ಬಳಿಯ ಪುರ ಗ್ರಾಮದಲ್ಲಿ ನಡೆದಿದೆ.
ಮೊಬೈಲ್ ನೀಡಲಿಲ್ಲ ಎಂದು ನೇಣು ಹಾಕಿಕೊಂಡ ಯುವಕ
ಪುರ ಗ್ರಾಮದ ಲಕ್ಷ್ಮಣಗೌಡ (60) ಆತ್ಮಹತ್ಯೆ ಮಾಡಿಕೊಂಡ ರೈತ. ತಮಗೆ ಸೇರಿದ 1 ಎಕರೆ ಜಮೀನನ್ನು ಬೇರೆಯವರಿಗೆ ನಂಬಿಕೆ ಆಧಾರದಲ್ಲಿ ಕ್ರಯ ಮಾಡಿ, 2.60 ಲಕ್ಷ ರುಪಾಯಿ ಸಾಲವಾಗಿ ಪಡೆದಿದ್ದರು. ಅಲ್ಲದೆ 3 ಲಕ್ಷ ರುಪಾಯಿಗಳಷ್ಟು ಕೈ ಸಾಲ ಮಾಡಿ, ಶುಂಠಿ ಬೆಳೆದಿದ್ದರು.
ಈ ಶುಂಠಿ ಬೆಳೆಯನ್ನು ನೀರಿನ ಆಶ್ರಯವಿಲ್ಲದೆ ಮಳೆ ಮತ್ತು ಹಳ್ಳದ ನೀರನ್ನು ನಂಬಿ ಬೆಳೆದಿದ್ದರು. ಆದರೆ ಅವರಂದುಕೊಂಡಂತೆ ನಡೆಯಲಿಲ್ಲ. ಸಕಾಲದಲ್ಲಿ ಮಳೆ ಅಗಲಿಲ್ಲ. ನೀರು ಹಾಯಿಸಲು ವ್ಯವಸ್ಥೆಯೇ ಇರಲಿಲ್ಲ. ಹೀಗಾಗಿ ನೀರು ದೊರೆಯದೆ ಶುಂಠಿ ಬೆಳೆ ಒಣಗಿತು. ಸಾಲ ಮಾಡಿ ಬಂಡವಾಳ ಹಾಕಿದ್ದ ಹಣ ಮಣ್ಣು ಪಾಲಾಗಿತ್ತು. ಇದರಿಂದ ಲಕ್ಷಾಂತರ ರುಪಾಯಿ ನಷ್ಟವಾಗಿತ್ತು.
ಹಣ ಕಳೆದುಕೊಂಡಿದ್ದರಿಂದ ಮನ ನೊಂದಿದ್ದ ಲಕ್ಷ್ಮಣಗೌಡ ಶುಂಠಿ ಬೆಳೆ ರಕ್ಷಣೆಗೆ ತಂದಿದ್ದ ಕ್ರಿಮಿನಾಶಕದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದ ಮನೆಯವರು ತಕ್ಷಣ ಅವರನ್ನು ಕೆ.ಆರ್.ನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರಾದರೂ ಅದಕ್ಕೆ ಸ್ಪಂದಿಸದೆ ಮೃತಪಟ್ಟಿದ್ದಾರೆ.