ನವೀನ್ ಬಂಧನ : ಎಸ್ಐಟಿ ವಿರುದ್ಧ ಕೇಸು ಹಾಕುವ ಎಚ್ಚರಿಕೆ!
ಮಂಡ್ಯ, ಏಪ್ರಿಲ್ 25 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಮದ್ದೂರು ತಾಲೂಕು ಕದಲೂರು ಗ್ರಾಮದ ನವೀನ್ ಅವರನ್ನು ಎಸ್ಐಟಿ ಬಂಧಿಸಿದೆ. ನವೀನ್ ಬಂಧಿಸಿ 3ತಿಂಗಳು ಕಳೆದರೂ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿದೆ.
ಆದ್ದರಿಂದ, ಎಸ್ಐಟಿ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಲು ತೀರ್ಮಾನಿಸಿರುವುದಾಗಿ ಕದಲೂರು ಗ್ರಾಮದ ಮುಖಂಡ ಭೈರೇಗೌಡ ತಿಳಿಸಿದ್ದಾರೆ. ನವೀನ್ ಬಂಧನಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲು ಎಸ್ಐಟಿಗೆ ಇದುವರೆಗೆ ಸಾಧ್ಯವಾಗಿಲ್ಲ ಎಂದು ದೂರಿದರು.
ಮದ್ದೂರಿನಲ್ಲಿದ್ದ ಗೌರಿ ಲಂಕೇಶ್ ಹಂತಕರ ಸುಳಿವು ಹಿಡಿದ ಎಸ್ ಐಟಿ!
'ನವೀನ್ ಮೇಲೆ ಹೊರಿಸಿರುವ ಆರೋಪಗಳು ಸುಳ್ಳಾಗಿದ್ದು, ಎಸ್ಐಟಿ ಬಳಿ ಸಾಕ್ಷ್ಯಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ. ಇಲ್ಲವಾದರೆ ಅವರನ್ನು ಬಿಡುಗಡೆ ಮಾಡಲಿ. ಇಲ್ಲವಾದರೆ 15 ದಿನಗಳೊಳಗೆ ಹೈಕೋರ್ಟ್ನಲ್ಲಿ ಎಸ್ಐಟಿ ವಿರುದ್ಧ ದೂರು ನೀಡುತ್ತೇನೆ' ಎಂದು ಭೈರೇಗೌಡ ಹೇಳಿದರು.
'ನವೀನ್ ಮತ್ತು ಅವರ ಕುಟುಂಬ ಇಂತಹ ಸಮಾಜ ವಿರೋಧಿ ಕೃತ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ನವೀನ್ ಅವರು ಸಾಮಾಜಿಕ ಹೋರಾಟ ಮಾಡುತ್ತಾ ಬಂದಿದ್ದು, ಹಿಂದೂಪರ ಚಿಂತನೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದರು' ಎಂದರು.
'ನವೀನ್ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಗೌರಿ ಲಂಕೇಶ್ ಹತ್ಯೆಗೂ ಅವರಿಗೂ ಯಾವುದೇ ಸಂಬಂಧವಿರಲು ಸಾಧ್ಯವಿಲ್ಲ. ಎಸ್ಐಟಿಯವರು ಹೊಟ್ಟೆ ಮಂಜ ಎಂದು ಹೇಳುತ್ತಿದ್ದಾರೆ. ಆ ಹೆಸರಿನವರು ಯಾರೂ ಇಲ್ಲ' ಎಂದು ಸ್ಪಷ್ಟಪಡಿಸಿದರು.
ಗೌರಿ ಹತ್ಯೆ ಶಂಕಿತನ ಮಂಪರು ಪರೀಕ್ಷೆ ಕುರಿತು ಎಸ್ಐಟಿಯಿಂದ ಪತ್ರ
'ನವೀನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಗುಜರಾತ್ಗೆ ಕರೆದೊಯ್ದು ಅನಾರೋಗ್ಯದ ಕಾರಣದಿಂದ ವಾಪಸ್ ಕರೆತಂದಿದ್ದಾರೆ. ಮೊದಲು ಒಂದು ಮಂಪರು ಪರೀಕ್ಷೆ ಮಾಡಿಸುವುದಾಗಿ ಹೇಳಿದ್ದರು. ನಂತರ ನಾಲ್ಕು ಮಂಪರು ಪರೀಕ್ಷೆ ಮಾಡುವುದಾಗಿ ಹೇಳಿದರು. ನವೀನ್ನ ಆರೋಗ್ಯದ ದೃಷ್ಟಿಯಿಂದ ಮಂಪರು ಪರೀಕ್ಷೆ ಮಾಡಲಾಗಿಲ್ಲ' ಎಂದರು.
'ಕೆಲ ರಾಜಕೀಯ ಪ್ರಭಾವ ಹಾಗೂ ಚುನಾವಣೆಯಿಂದಾಗಿ ನವೀನ್ ಅವರನ್ನು ಅಕ್ರಮವಾಗಿ ಬಂಧನ ಮಾಡಲಾಗಿದೆ ಎಂಬ ಗುಮಾನಿ ಇದೆ. ನವೀನ್ ನಿಜವಾದ ಆರೋಪಿಯಾಗಿದ್ದರೆ ಶಿಕ್ಷೆಯಾಗಲಿ. ಇಲ್ಲವಾದಲ್ಲಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ' ಎಂದು ಅವರು ಒತ್ತಾಯಿಸಿದರು.