ಮುಳುಗುವ ಭೀತಿಯಲ್ಲಿರುವ ಕಾವೇರಿ ನದಿ ನಡುಗಡ್ಡೆಯಲ್ಲೇ ಉಳಿದ ಸ್ವಾಮೀಜಿ
ಮಂಡ್ಯ, ಜುಲೈ 19: ಕೆಆರ್ ಎಸ್ ಜಲಾಶಯದಿಂದ ನದಿಗೆ ನೀರು ಬಿಟ್ಟ ಪರಿಣಾಮ ಶ್ರೀರಂಗಪಟ್ಟಣ ಬಳಿಯ ಗೌತಮಕ್ಷೇತ್ರದ ಸುತ್ತಲೂ ನೀರು ಆವರಿಸಿದೆ, ಆಶ್ರಮದಲ್ಲಿರುವ ಗಜಾನನಸ್ವಾಮೀಜಿ ಅವರು ಮಾತ್ರ ತಮ್ಮ ಆಶ್ರಮ ಬಿಟ್ಟು ಬರಲು ಒಪ್ಪದಿರುವುದು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ಪ್ರವಾಹದಿಂದ ನಡುಗಡ್ಡೆಯಲ್ಲಿ ಸಿಲುಕಿದ್ದ ಶ್ರೀ ಗಜಾನನ ಸ್ವಾಮೀಜಿ ಅವರ ಮನವೊಲಿಸಿ ಕರೆತರಲು ತಾಲೂಕು ಆಡಳಿತ ಎನ್ಡಿಆರ್ ಎಫ್ ಜತೆ ತೆರಳಿತ್ತು. ಆದರೆ ಸ್ವಾಮೀಜಿ ಅವರು ಯಾವುದೇ ಕಾರಣಕ್ಕೂ ಆಶ್ರಮ ಬಿಟ್ಟು ಬರಲ್ಲ ಎಂದು ಹೇಳಿದ ಮೇರೆಗೆ ಬರಿಗೈಲಿಯಲ್ಲಿ ಹಿಂತಿರುಗಿದೆ.
ಭಾರೀ ಮಳೆಗೆ ರಂಗನತಿಟ್ಟು ಪಕ್ಷಿಧಾಮ ಮುಳುಗುತ್ತಿದೆಯೇ..?
ಇದೀಗ ಕಾವೇರಿ ನದಿ ನೀರಿನ ಹೊರ ಹರಿವಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಗೌತಮ ಕ್ಷೇತ್ರದಲ್ಲೇ ಉಳಿದಿರುವ ಶ್ರೀ ಗಜಾನನ ಸ್ವಾಮೀಜಿ ಮತ್ತು ಅವರ 4 ಮಂದಿ ಶಿಷ್ಯರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಎನ್ಡಿಆರ್ ಎಫ್ ಪಡೆಯೊಂದಿಗೆ ತಹಸೀಲ್ದಾರ್ ನಾಗೇಶ್ ನೇತೃತ್ವದಲ್ಲಿ ಪೋಲೀಸ್ ಹಾಗೂ ಇತರೆ ಅಧಿಕಾರಿಗಳು ಬೋಟಿಂಗ್ ಮೂಲಕ ನಡುಗಡ್ಡೆಗೆ ತೆರಳಿದ್ದರು.
ಎನ್ಡಿಆರ್ ಎಫ್ ಪಡೆ ಸ್ಥಳ ಪರಿಶೀಲನೆ ನಡೆಸಿದೆ. ಬಳಿಕ ಸ್ವಾಮೀಜಿ ಅವರನ್ನು ಹೊರ ಬರುವಂತೆ ಮನವೊಲಿಸಲಾಯಿತು. ಆದರೆ ನಡುಗಡ್ಡೆಯಲ್ಲಿರುವ ಆಶ್ರಮ ಬಿಟ್ಟು ಹೊರ ಬರಲು ಗಜಾನನ ಸ್ವಾಮೀಜಿ ಮಾತ್ರ ಒಪ್ಪಲೇ ಇಲ್ಲ. ಅಷ್ಟೇ ಅಲ್ಲ ತನ್ನ ಜೀವಕ್ಕೇ ಏನೇ ತೊಂದರೆ ಆದರೂ ಅದಕ್ಕೆ ನಾನೇ ಜವಾಬ್ದಾರಿ ಎಂಬ ಪತ್ರವನ್ನು ತಹಸೀಲ್ದಾರ್ ಮೂಲಕ ಜಿಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!
ಕ್ಷೇತ್ರದಲ್ಲಿ ವಿದ್ಯುತ್, ನೀರು ಹಾಗೂ ಅಡುಗೆ ಮಾಡಿಕೊಂಡು ಊಟ ಮಾಡಲು ದವಸ-ಧಾನ್ಯಗಳ ಶೇಖರಣೆಯಿದ್ದು, ನನಗೆ ಯಾವುದೇ ತೊಂದರೆಯಿಲ್ಲ. ಇನ್ನು ಮುಂದೆ ಪ್ರವಾಹ ಹೆಚ್ಚಾದರೂ ಆಶ್ರಮಕ್ಕೆ ಯಾವುದೇ ತೊಂದರೆಯಿಲ್ಲ. ಆದ್ದರಿಂದ ಯಾವುದೇ ರೀತಿಯ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ ಎನ್ನಲಾಗಿದೆ.