ದುರುದ್ದೇಶದಿಂದ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಬಲಿಪಶು ಮಾಡಿದರು-ಶಿವರಾಮೇಗೌಡ
ಮಂಡ್ಯ, ಡಿಸೆಂಬರ್ 5: ನಾನೂ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹೋರಾಟ ಮಾಡಿ ಸುರೇಶ್ಗೌಡರನ್ನು ಈ ಕ್ಷೇತ್ರದ ಶಾಸಕರನ್ನಾಗಿ ಮಾಡಿದ್ದೇವೆ. ಆದರೆ, ಎಲ್ಲರನ್ನೂ ಕಡೆಗಣಿಸಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆರೋಪಿಸಿದ್ದಾರೆ.
ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಾಯಿಗೋನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುರೇಶ್ಗೌಡ ಕೇವಲ ಮೂರ್ನಾಲ್ಕು ಗುತ್ತಿಗೆದಾರರಿಗೆ ಮಾತ್ರ ಉಪಯೋಗವಾಗುವ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Hanuman Jayanti : ವಿಜೃಂಭಣೆಯ ಹನುಮಜಯಂತಿ, ಮಸೀದಿಗೆ ನುಗ್ಗಲು ಯತ್ನ, ಪೊಲೀಸರ ತಡೆ
ಶಾಸಕ ಸುರೇಶ್ಗೌಡ ಸಾವಿರಾರು ಮಂದಿ ಕಾರ್ಯಕರ್ತರನ್ನು ಬೀದಿಪಾಲು ಮಾಡಿದ್ದಾರೆ. ಹೀಗಾಗಿ ಮೂಲ ಕಾರ್ಯಕರ್ತರು ಜೆಡಿಎಸ್ ಮತ್ತು ಸುರೇಶ್ಗೌಡಿರಿಂದ ದೂರವಾಗಿ ಈಗ ನನ್ನೊಂದಿಗೆ ಉಳಿದಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ನನಗೆ ಅಧಿಕಾರ ಸಿಗದಂತೆ ಕುತಂತ್ರ ನಡೆಸಿದರು
ಮಾತು ಮುಂದುವರಿಸಿದ ಅವರು, ಕೇವಲ ಮೂರ್ನಾಲ್ಕು ಆಪ್ತ ಗುತ್ತಿಗೆದಾರರನ್ನು ಹತ್ತಿರ ಇಟ್ಟುಕೊಂಡು ಹಣ ಲೂಟಿ ಹೊಡೆಯುತ್ತಾ ದುಡಿದ ಕಾರ್ಯಕರ್ತರನ್ನು ದೂರ ತಳ್ಳಿದ್ದಾರೆ. ನಾನು ಎಂ.ಎಲ್.ಎ, ಎಂ.ಪಿ, ಎಂ.ಎಲ್.ಸಿ ಆಗದಂತೆ ಕುತಂತ್ರ ನಡೆಸಿ ಅಧಿಕಾರದಿಂದ ದೂರವಿಟ್ಟರು. ಅಲ್ಲದೇ ನನಗೆ ಎಂ.ಪಿ ಟಿಕೆಟ್ ಸಿಗುತ್ತದೆ ಎಂಬ ದುರುದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆತಂದು ಮಂಡ್ಯದಲ್ಲಿ ಬಲಿಪಶು ಮಾಡಿದರು. ತಾಲೂಕಿನ ಜನ ಸುರೇಶ್ಗೌಡ ಮತ್ತು ಚಲುವರಾಯಸ್ವಾಮಿ ಅವರ ಅಧಿಕಾರವನ್ನು ನೋಡಿದ್ದಾರೆ. ನನ್ನ ಅವಧಿಯ ಕೆಲಸಗಳನ್ನೂ ಸಹ ನೋಡಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎಂಬುದನ್ನು ಕ್ಷೇತ್ರದ ಜನರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಅಭಿವೃದ್ದಿಗಾಗಿ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಾರೆ
ಅಧಿಕಾರದಲ್ಲಿದ್ದವರು ಸಮರ್ಪಕವಾಗಿ ಕೆಲಸ ಮಾಡಿದ್ದರೆ, ಸಮಾಜ ಸೇವಕ ಫೈಟರ್ ರವಿ ಅವರು ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ತಾಲೂಕಿನಾದ್ಯಂತ ಏಕಕಾಲದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ನನ್ನ ಆಡಳಿತದ ಅವಧಿಯಲ್ಲಿ ಮಾಡಿದ್ದು ಬಿಟ್ಟರೆ, ನಂತರ ಬಂದವರು ಏನು ಮಾಡಿದ್ದಾರೆ ಎಂದು ಹೇಳಲಿ. ತಾಲೂಕಿನ ಅಭಿವೃದ್ದಿಗಾಗಿ ಜನರು ಈ ಬಾರಿ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಾರೆ. ನಾನು ಈ ಚುನಾವಣೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇನೆ. ನಿಮ್ಮೆಲ್ಲರ ಪಾದಕ್ಕೂ ನಾನು ನಮಸ್ಕರಿಸುತ್ತೇನೆ. ತಾಲೂಕಿನ ಜನರು ನನ್ನನ್ನು ಈ ಬಾರಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಿವರಾಮೇಗೌಡರನ್ನು ಬೆಂಬಲಿಸುವ ಎಂದ ಪಾಳ್ಯ ರಘು
ಈ ವೇಳೆ ಉಪಸ್ಥಿತರಿದ್ದ ಮುಖಂಡ ಪಾಳ್ಯ ರಘು ಮಾತನಾಡಿ, ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿರುವ ಎಲ್.ಆರ್.ಶಿವರಾಮೇಗೌಡ ಅವರ ಸೇವೆಯನ್ನು ತಾಲೂಕು ಕಂಡಿದೆ. ಅವರ ಅಭಿವೃದ್ಧಿ ಕಾರ್ಯಗಳು ಇಂದಿಗೂ ತಾಲೂಕಿನ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಭವಿಷ್ಯದಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ಶಿವರಾಮೇಗೌಡರನ್ನು ಬೆಂಬಲಿಸುವ ಜೊತೆಗೆ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಶಿವರಾಮೇಗೌಡರನ್ನು ಚುನಾವಣೆಯಲ್ಲಿ ಬೆಂಬಲಿಸಿ
ಕಾರ್ಯಕ್ರಮದಲ್ಲಿದ್ದ ತಾ.ಪಂ ಮಾಜಿ ಸದಸ್ಯ ಹೇಮರಾಜ್ ಮಾತನಾಡಿ, ಸುಮಾರು 22 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದರೂ ಸಹ ಜನರ ಮನಸ್ಸಿನಿಂದ ದೂರ ಉಳಿಯದೆ ಶಿವರಾಮೇಗೌಡರು ನಿರಂತರವಾಗಿ ಜನಸೇವೆಯನ್ನು ಮಾಡುತ್ತಿದ್ದಾರೆ. ಬೇರೆ ರಾಜಕಾರಣಿಗಳಾಗಿದ್ದರೆ ಜನರ ಬಳಿ ಬರುತ್ತಿರಲಿಲ್ಲ. ತಾಲೂಕಿನಲ್ಲಿ ಅಧಿಕಾರಿಗಳನ್ನು ನಿಯಂತ್ರಿಸಿ ಅವರಿಂದ ಜನಪರ ಕೆಲಸಗಳನ್ನು ಮಾಡಿಸುವ ನಾಯಕ ಯಾರಾದರೂ ಇದ್ದರೆ ಅದು ಶಿವರಾಮೇಗೌಡರು ಮಾತ್ರ. ಆದ್ದರಿಂದ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಿದರಕೆರೆ ಮಂಜೇಗೌಡ, ಪಾಳ್ಯ ರಘು, ಹೇಮರಾಜ್, ಚೇತನ್, ದೇವರಾಜು, ಪ್ರಕಾಶ್, ಬೊಮ್ಮೇನಹಳ್ಳಿ ನಾಗಣ್ಣ, ಬ್ರಹ್ಮದೇವನಹಳ್ಳಿ ಸೋಮ, ಪಿಟ್ಟೇಗೌಡ, ಕೃಷ್ಣಮೂರ್ತಿ, ಶಶಿ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.