ಮಳವಳ್ಳಿ ನೀಲಗಿರಿ ತೋಪಿಗೆ ಕಾಡಾನೆಗಳ ಲಗ್ಗೆ: ರೈತರಲ್ಲಿ ಆತಂಕ
ಮಳವಳ್ಳಿ, ಜುಲೈ 24: ಅರಣ್ಯದಿಂದ ಆಹಾರ ಅರಸಿ ನಾಡಿನತ್ತ ಬರುತ್ತಿರುವ ಕಾಡಾನೆಗಳನ್ನು ನೋಡಲು ಜನ ಮುಗಿ ಬೀಳುತ್ತಿರುವ ಕಾರಣದಿಂದಾಗಿ ಅವುಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಪರದಾಡುವ ಪರಿಸ್ಥಿತಿ ಡಿ.ಹಲಸಹಳ್ಳಿ ಗ್ರಾಮದ ನೀಲಗಿರಿ ತೋಪಿನ ಬಳಿ ಉಂಟಾಗಿದೆ.
ಈ ವ್ಯಾಪ್ತಿಯಲ್ಲಿ ಆನೆಗಳು ಜಮೀನಿಗೆ ನುಗ್ಗಿ ರೈತರು ಬೆಳೆದ ಬೆಳೆಯನ್ನು ತಿಂದು ತುಳಿದು ನಾಶ ಮಾಡುತ್ತಿರುವುದು ಮಾಮೂಲಿ ಸಂಗತಿ. ಮತ್ತೆ ಬುಧವಾರ ಡಿ.ಹಲಸಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಕಾಣಿಸಿಕೊಂಡ ಕಾಡಾನೆಗಳು ಕೆಲಕಾಲ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿವೆ.
ಕುದುರೆಮುಖ ಗೇಟ್ ಬಳಿ ರಾತ್ರೋರಾತ್ರಿ ಪ್ರತ್ಯಕ್ಷವಾಯ್ತು ಆನೆ
ಕಾಡಾನೆಗಳು ತಾಲೂಕಿನ ಧನಗೂರು ಅರಣ್ಯ ಪ್ರದೇಶದಿಂದ ಕುರಿ ಫಾರಂ ಮಾರ್ಗವಾಗಿ ಡಿ.ಹಲಸಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯನ್ನು ದಾಟಿಕೊಂಡು ನೀಲಗಿರಿ ತೋಪಿಗೆ ಬಂದಿದ್ದು, ಇಲ್ಲಿನ ಮಹದೇವಮ್ಮ, ಪುಟ್ಟಮ್ಮ, ನಾಗರಾಜು, ಶಿವಮಾದು ಎಂಬುವವರಿಗೆ ಸೇರಿದ ನೀಲಗಿರಿ ತೋಪಿನಲ್ಲಿ ಸೇರಿಕೊಂಡಿವೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಅವುಗಳನ್ನು ಕಾಡಿಗೆ ಅಟ್ಟಲು ಮುಂದಾದರು. ಆದರೆ ಅಷ್ಟರಲ್ಲೇ ಜನ ಜಮಾಯಿಸಿದ್ದರಿಂದ ಕಾರ್ಯಾಚರಣೆಗೆ ತೊಡಕಾಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರನ್ನು ನಿಯಂತ್ರಿಸಲು ಕ್ರಮ ಕೈಗೊಂಡರು. ಅರಣ್ಯ ಇಲಾಖೆ ವಲಯ ಅಧಿಕಾರಿ ಎಸ್.ಬಿ.ನಂದೀಶ್ ಧನಗೂರು ಅರಣ್ಯ ಪ್ರದೇಶದಿಂದ ಏಳು ಕಾಡಾನೆಗಳು ಬಂದಿದ್ದು, ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯವನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಕಾಡಿನಿಂದ ನಾಡಿಗೆ ಬಂದು ಜಾರಿ ಬಿದ್ದ ಕಾಡಾನೆ
ಮುತ್ತತ್ತಿ ಬಸವನಬೆಟ್ಟ ಧನಗೂರು ಅರಣ್ಯ ಪ್ರದೇಶಗಳಿಂದ ಕಾಡಾನೆಗಳು ಆಹಾರವನ್ನು ಆರಿಸಿ ಬರುವುದು ಸಾಮಾನ್ಯವಾಗಿದೆ. ಕೆಲವು ದಿನಗಳ ಹಿಂದೆ ಮಳವಳ್ಳಿ ಸಮೀಪ ನಾಲ್ಕು ಕಾಡಾನೆಗಳು ಲಗ್ಗೆಯಿಟ್ಟು ಹಲವಾರು ಫಸಲುಗಳನ್ನು ತಿಂದು ತುಳಿದು ಬೆಳೆ ನಾಶಪಡಿಸಿದ್ದವು. ಇದೀಗ ಮತ್ತೆ ಏಳು ಕಾಡಾನೆಗಳು ಬಂದು ನೀಲಗಿರಿ ತೋಪಿನಲ್ಲಿರುವ ತೇಗದ ಮರ ಸೇರಿದಂತೆ ಹಲವು ಮರಗಳನ್ನು ಮುರಿದು ನಾಶಪಡಿಸಿವೆ. ಇದರಿಂದ ರೈತರು ನಷ್ಟಕ್ಕೊಳಗಾಗಿದ್ದಾರೆ.
ಮಡಿಕೇರಿ, ಚಾಮರಾಜನಗರದಲ್ಲಿ ಮಿತಿಮೀರುತ್ತಿದೆ ಕಾಡಾನೆ ಹಾವಳಿ
ಕಾಡಾನೆಗಳ ಹಾವಳಿ ಹೀಗೆಯೇ ಮುಂದುವರೆದರೆ ರೈತರು ಕೃಷಿ ಮಾಡುವುದೇ ಕಷ್ಟವಾಗಲಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡು ರೈತರ ಕೃಷಿ ಬೆಳೆಯನ್ನು ರಕ್ಷಿಸುವಂತೆ ಇಲ್ಲಿನ ರೈತರು ಮನವಿ ಮಾಡಿದ್ದಾರೆ.