ಮಂಡ್ಯದ ಜಿಲ್ಲೆಯಲ್ಲಿ ರೈಸ್ಮಿಲ್ ಮೇಲೆ ದಾಳಿ: ಲಾರಿ ಸಮೇತ ಅಕ್ರಮ ಅಕ್ಕಿ ವಶ
ಮಂಡ್ಯ, ಆಗಸ್ಟ್, 19: ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಆಹಾರ ಮತ್ತು ನಾಗರೀಕರ ಪೂರೈಕೆ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ.
ವಿ.ವಿ.ನಗರದಲ್ಲಿರುವ ಜೈಶಂಕರ್ ರೈಸ್ಮಿಲ್ ಆವರಣದಲ್ಲಿ ಪಡಿತರ ಅಕ್ಕಿ ತುಂಬಿದ್ದ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೈಸ್ಮಿಲ್ ಮಾಲೀಕರು ಕೆಲವೊಂದು ಬಿಲ್ಗಳನ್ನು ತೋರಿಸಿದ್ದಾರೆ. ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ನಕಲಿ ಬಿಲ್ ಎಂಬ ಸಂಶಯ ಬಂದಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಕುಗ್ಗಿದ ಬೇಡಿಕೆ: ಭಾರತೀಯ ಅಕ್ಕಿ ರಫ್ತು ದರದಲ್ಲಿ ಇಳಿಕೆ
"ಸುಮಾರು 60 ಟನ್ ತೂಕವಿರುವ 120 ಚೀಲಗಳಲ್ಲಿ ತುಂಬಿರುವ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಯದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಕ್ಕಿಯ ಸ್ಯಾಂಪಲ್ನ್ನು ಸಹ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಇದು ಪಡಿತರ ಅಕ್ಕಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ," ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಎಂ.ಪಿ. ಕೃಷ್ಣಕುಮಾರ್ ತಿಳಿಸಿದರು.
ನಿಖರ ಮಾಹಿತಿ ಮೇರೆಗೆ ಬೆಳಗ್ಗೆ 5 ಗಂಟೆ ವೇಳೆ ದಾಳಿ ನಡೆಸಿದ ಅಧಿಕಾರಿಗಳು, ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಪರಿಶೀಲಿಸಿ ಲಾರಿ ಸಮೇತ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಲಾರಿ ಚಾಲಕ ಒಂದು ಮಾಹಿತಿಯನ್ನು ನೀಡಿದ್ದರೆ, ಕ್ಲೀನರ್ ಮತ್ತು ಮಾಲೀಕ ಮತ್ತೊಂದು ಹೇಳಿಕೆ ನೀಡಿದ್ದಾರೆ. ಹೇಳಿಕೆಗಳು ಬೇರೆ ಇದ್ದುದರಿಂದ ಅನುಮಾನಗೊಂಡ ಅಧಿಕಾರಿಗಳು ಲಾರಿ ಸಮೇತ ಅಕ್ಕಿಯನ್ನು ವಶಕ್ಕೆ ಪಡೆದರು.
ಪಡಿತರ ಅಲ್ಲಿ ಸಾಗಣೆ ಬಗ್ಗೆ ಮಾಲೀಕರ ಸ್ಪಷ್ಟನೆ
ಮರೀಗೌಡ ಬಡಾವಣೆಯಲ್ಲಿರುವ ಸೋಮೇಶ್ವರ ರೈಸ್ಮಿಲ್ನಿಂದ ಅಕ್ಕಿ ತರಲಾಗಿದೆ ಎಂದು ಅಧಿಕಾರಿಗಳ ಮೂಲಗಳು ಹೇಳುತ್ತಿವೆ. ಜೊತೆಗೆ ತಮಿಳುನಾಡಿನಿಂದಲೂ ಅಕ್ಕಿ ಬಂದಿರುವ ಬಗ್ಗೆ ಮಾಲೀಕರು ತಿಳಿಸಿದ್ದಾರೆ. ಅವರು ಅಕ್ಕಿಯನ್ನು ಖರೀದಿಸಿ ತಂದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಕೈಬರಹದ ಬಿಲ್ ಹಾಜರುಪಡಿಸಿರುವುದರಿಂದ ನಮಗೆ ಅದರ ಬಗ್ಗೆ ಸಂಶಯ ವ್ಯಕ್ತವಾಗಿದೆ. ಅವರು ಆನ್ಲೈನ್ ಬಿಲ್ನ್ನು ನೀಡಿಲ್ಲ. ಆದ್ದರಿಂದ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಈ ಬಿಲ್ ಕಳುಹಿಸಿ ಜಿಎಸ್ಟಿ ಪಾವತಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ಪಡಿತರ ಅಕ್ಕಿ ಎಂದು ತಿಳಿದುಬಂದಲ್ಲಿ ಸಂಬಂಧಿಸಿದ ರೈಸ್ ಮಿಲ್ ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಅಧಿಕಾರಿ ಅಮಾನತು
ಮಂಡ್ಯದಲ್ಲಿ ಪಡಿತರ ಅಕ್ಕಿ ದಂಧೆ ನಡೆಯುತ್ತಲೇ ಇದೆ. ಕಳೆದ ಹಲವಾರು ದಿನಗಳಿಂದಲೂ ಪಡಿತರ ಅಕ್ಕಿ ಒಂದಲ್ಲ ಒಂದು ರೈಸ್ಮಿಲ್ಗಳಲ್ಲಿ ಕಂಡುಬರುತ್ತಿದೆ. ಈ ಹಿಂದೆ ಸ್ವರ್ಣಸಂದ್ರ ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಗೋದಾಮಿನ ಮೇಲೆ ದಾಳಿ ಪೊಲೀಸರು ನಡೆಸಿ, ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಗೋದಾಮಿಗೆ ಮುದ್ರೆ ಹಾಕಿ ಜಿಲ್ಲಾ ಸಶಸ್ತ್ರ ಪೊಲೀಸರನ್ನು ಕಾವಲು ಇರಿಸಲಾಗಿತ್ತು. ಉನ್ನತ ಪೊಲೀಸ್ ಅಧಿಕಾರಿಗಳು ರೈಸ್ಮಿಲ್ ಮಾಲೀಕರೊಂದಿಗೆ ಶಾಮೀಲಾಗಿ ಪಡಿತರ ಅಕ್ಕಿಯನ್ನು ಸಾಗಿಸಿದ್ದರು ಎಂದು ಹೇಳಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತ್ತು ಮಾಡಲಾಗಿದ್ದು, ಇಲಾಖೆ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
ಆಮಿಷಗಳಿಗೆ ಕ್ಯಾರೆ ಅನ್ನದ ಅಧಿಕಾರಿಗಳು
ರೈಸ್ಮಿಲ್ ಮೇಲೆ ದಾಳಿ ನಡೆಸಿ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸುದ್ದಿಯನ್ನು ತಿಳಿಯುತ್ತಿದ್ದಂತೆ ರೈಸ್ ಮಾಲೀಕರ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಅವರು ಅಧಿಕಾರಿಗಳಿಗೆ ಆಸೆ, ಆಮಿಷಗಳ ಮೂಲಕ ಕಟ್ಟಿಹಾಕುವ ಪ್ರಯತ್ನವನ್ನೂ ಮಾಡಿದರು. ಇದಕ್ಕೆ ಕ್ಯಾರೆ ಅನ್ನದ ಅಧಿಕಾರಿಗಳು ಕಾನೂನು ಪ್ರಕಾರವೇ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೆಟ್ಟು ತಿಂದರೂ ಬುದ್ಧಿ ಕಲಿಯದ ಮಾಲೀಕ
ಈ ಹಿಂದೆ ತಹಶೀಲ್ದಾರ್ ಆಗಿದ್ದ ಚಂದ್ರಶೇಖರ್ ಅವರು ಸಹ ದಾಳಿ ನಡೆಸಿ ಇದೇ ರೈಸ್ಮಿಲ್ನಿಂದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಸಿಬ್ಬಂದಿಗಳು ರೈಸ್ಮಿಲ್ ಕಾಂಪೌಂಡ್ ಗೋಡೆ ಹಾರಿ ಪರಾರಿಯಾಗಿದ್ದರು. ಆದರೂ ಬಿಡದ ಚಂದ್ರಶೇಖರ್ ಶಂ.ಗಾಳಿ ಅವರು ಅಕ್ಕಿಯನ್ನು ವಶಕ್ಕೆ ಪಡೆದು ಪೊಲೀಸರ ಸುಪರ್ದಿಗೆ ವಹಿಸಿದ್ದು, ಎಫ್ಐಆರ್ ಸಹ ದಾಖಲಿಸಿದ್ದರು. ಮತ್ತೆ ಇಂತಹದ್ದೇ ಪ್ರಕರಣ ಮರುಕಳಿಸಿದ್ದು, ರೈಸ್ ಮಾಲೀಕರು ಹಳೇ ಚಾಳಿಯನ್ನೇ ಮುಂದುವರೆಸಿದ್ದಾರೆ.