ಕೆ.ಆರ್.ಪೇಟೆ ಹೇಮಾವತಿ ನದಿ ಪಾತ್ರದ ಜನಕ್ಕೆ ಪ್ರವಾಹದ ಎಚ್ಚರಿಕೆ!
ಮಂಡ್ಯ, ಆಗಸ್ಟ್ 9: ಹಾಸನ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಅರಕಲಗೂಡು ಸಮೀಪದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದ್ದು ಇದರಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಈಗಾಗಲೇ ಹೇಮಾವತಿ ನದಿ ತಗ್ಗುಪ್ರದೇಶಗಳನ್ನು ಆವರಿಸಿಕೊಂಡು ಹರಿಯುತ್ತಿರುವುದರಿಂದ ಬಹಳಷ್ಟು ಪ್ರದೇಶಗಳು ಜಲಾವೃತವಾಗಿವೆ. ಕೆಲವು ವಾರಗಳ ಹಿಂದಷ್ಟೆ ಈ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಅಲ್ಲದೆ ಈ ವ್ಯಾಪ್ತಿಯಲ್ಲಿ ಬೆಳೆದಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದವು. ಹೀಗಾಗಿ ರೈತರು ಜಲಾಶಯದಿಂದ ನೀರು ಹರಿಸುವಂತೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ ಎಂಟು ಸಾವಿರ ಕ್ಯೂಸೆಕ್ ನೀರನ್ನು ಹೇಮಾವತಿ ಜಲಾಶಯದಿಂದ ನದಿಗೆ ಬಿಟ್ಟಿತ್ತು.
ಕರ್ನಾಟಕದಲ್ಲಿ ತುಂಬಿ ತುಳುಕುತ್ತಿರುವ ಜಲಾಶಯಗಳಲ್ಲಿ ನೀರಿಷ್ಟಿದೆ?
ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಹೇಮಾವತಿ ನದಿ ಪಾತ್ರದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಪರಿಣಾಮ ಹೇಮಾವತಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ 2922.00 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2905.30 ಅಡಿಯಷ್ಟು ನೀರಿದ್ದು ಭರ್ತಿಯಾಗಲು ಕೇವಲ 16.70 ಅಡಿಯಷ್ಟು ಮಾತ್ರ ಬಾಕಿಯಿದೆ. ಮಳೆಯ ಕಾರಣ ಒಳ ಹರಿವು 48133 ಕ್ಯುಸೆಕ್ ಇದ್ದು, ಇದೇ ರೀತಿ ಮಳೆ ಮುಂದುವರೆದು ಒಳಹರಿವು ಹೆಚ್ಚಾದರೆ ಹೆಚ್ಚುವರಿ ನೀರನ್ನು ಯಾವಾಗ ಬೇಕಾದರೂ ನದಿಗೆ ಬಿಡುವ ಸಂಭವವಿದೆ. ತಗ್ಗುಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಈಗಾಗಲೇ ಈ ಪರಿಸ್ಥಿತಿಯನ್ನು ಅರಿತಿರುವ ಹೇಮಾವತಿ ಜಲಾಶಯ ಯೋಜನೆಯ ಇಂಜಿನಿಯರ್ ತಂಡ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹೇಮಾವತಿ ನದಿ ಪಾತ್ರದ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಡಂಗೂರ ಹೊಡೆಸುವ ಮೂಲಕ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ.
ಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ...
ಈ ಕುರಿತಂತೆ ಮಾಹಿತಿ ನೀಡಿರುವ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ಹೇಮಾವತಿ ಜಲಾನಯದ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಸುಮಾರು 50 ರಿಂದ 60 ಸಾವಿರ ಕ್ಯುಸೆಕ್ಸ್ ನೀರನ್ನು ನದಿ ಬಿಡುವ ಸಾಧ್ಯತೆಯಿದ್ದು, ಪರಿಣಾಮ ಕೆ.ಆರ್.ಪೇಟೆ ತಾಲೂಕಿನ ಸುಮಾರು 45 ಕಿ.ಮೀ ದೂರದಲ್ಲಿರುವ ಹೇಮಾವತಿ ನದಿ ಪಾತ್ರದ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
ಅಲ್ಲದೆ ಸಾರ್ವಜನಿಕರು ಈ ವೇಳೆ ನದಿಗೆ ಇಳಿಯುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಜಾನುವಾರುಗಳಿಗೆ ನೀರು ಕುಡಿಸುವುದು, ಈಜುವುದನ್ನು ಮಾಡಬಾರದು. ಪ್ರವಾಹ ಹೆಚ್ಚಾಗಿ ಯಾವುದೇ ಅಪಾಯ ಸೂಚನೆ ಕಂಡು ಬಂದಲ್ಲಿ ಕೂಡಲೇ ವಾಟ್ಸಪ್, ಫೇಸ್ಬುಕ್ ಮೂಲಕ ಮಾಹಿತಿಯನ್ನು ಹಂಚಿಕೊಂಡರೆ ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ತಾಲೂಕು ಆಡಳಿತವು ಸೂಕ್ತ ಕ್ರಮ ಕೈಗೊಳ್ಳಲಿದೆ. ಇದಲ್ಲದೆ ಪ್ರವಾಹದಿಂದ ಅಪಾಯದ ಪರಿಸ್ಥಿತಿ ಎದುರಾದರೆ ದಿನದ ಯಾವುದೇ ಕ್ಷಣದಲ್ಲಿಯಾದರೂ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08230-262989 ಅಥವಾ ಸಂಚಾರಿ ದೂರವಾಣಿ 8884504666 ಸಂಪರ್ಕಿಸಿ ಮಾಹಿತಿ ನೀಡುವಂತೆ ಹೇಳಿದ್ದಾರೆ.
ಮುಳುಗಿದ ಕೇರಳದಲ್ಲಿ ಏರುತ್ತಿದೆ ಸಾವಿನ ಲೆಕ್ಕ; ಜನಜೀವನ ಅಸ್ತವ್ಯಸ್ತ
ಎಲ್ಲೆಡೆಯೂ ಪ್ರವಾಹ ಪರಿಸ್ಥಿತಿಯಿರುವ ಕಾರಣ ಜನರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅಲ್ಲದೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸ್ಥಳಗಳಿಂದ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವುದು ಒಳ್ಳೆಯದಾಗಿದೆ. ಆಶ್ಲೇಷ ಮಳೆ ಯಾವಾಗ, ಯಾವ ರೀತಿ ಅಬ್ಬರಿಸುತ್ತದೆಯೋ ಎಂದು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನರಿತು ಜನರೇ ಮುಂಜಾಗ್ರತೆ ವಹಿಸುವುದು ಕ್ಷೇಮಕರವಾಗಿದೆ.