ಭಾರೀ ಮಳೆಗೆ ರಂಗನತಿಟ್ಟು ಪಕ್ಷಿಧಾಮ ಮುಳುಗುತ್ತಿದೆಯೇ..?
Recommended Video
ಮಂಡ್ಯ, ಜುಲೈ 16: ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಪಕ್ಷಿಕಾಶಿ ಎಂದೇ ಪ್ರಸಿದ್ಧಿ ಪಡೆದ ರಂಗನತಿಟ್ಟು ಮುಳುಗುವ ಭೀತಿ ಎದುರಿಸುತ್ತಿದೆ.
ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 123.27(ನೆಲಮಟ್ಟದಿಂದ) ಅಡಿ ತಲುಪಿದ್ದು ಐದು ವರ್ಷಗಳ ಬಳಿಕ ಜಲಾಶಯ ಭರ್ತಿಯಾಗಿದೆ! ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್ ಎಸ್ ನ ಗರಿಷ್ಠ ಮಟ್ಟ 124.80 ಅಡಿ. ಕಾವೇರಿ ನದಿ ಪಾತ್ರದಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಇದೀಗ ಈ ಭಾಗದ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ.
ಕೆಆರ್ಎಸ್ನಿಂದ 50 ಸಾವಿರ ಕ್ಯುಸೆಕ್ ನೀರು ಹೊರಕ್ಕೆ, ಪ್ರವಾಹ ಭೀತಿ
ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮ ಕರ್ನಾಟಕದ ಪ್ರಮುಖ ಪ್ರವಾಸೀ ತಾಣಗಳಲ್ಲೊಂದು. ತರಹೇವಾರಿ ವಲಸೆ ಪಕ್ಷಿಗಳನ್ನು ಹೊಂದಿರುವ ಈ ಪಕ್ಷಿಧಾಮ ಮುಳುಗುವ ಭೀತಿ ಎದುರಿಸುತ್ತಿರುವುದರಿಂದ ಪಕ್ಷಿಗಳೂ ತೊಂದರೆ ಅನುಭವಿಸಬೇಕಾಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ಹರಿಯುವ ಕಾವೇರಿ ನದಿಯ ನಡುವಲ್ಲಿ ಚಿಕ್ಕ ಚಿಕ್ಕ ದ್ವೀಪಗಳಿದ್ದು ಇಲ್ಲೆಲ್ಲ ವಲಸೆ ಪಕ್ಷಿಗಳು ವಾಸಿಸುತ್ತವೆ. ಆದರೆ ಹಲವು ಚಿಕ್ಕ ಚಿಕ್ಕ ದ್ವೀಪಗಳು ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಈಗಾಗಲೇ ಮುಳುಗಿವೆ!
ಈ ಕುರಿತು ಪ್ರತಿಕ್ರಿಯೆ ನೀಡಿದ ವನ್ಯಜೀವಿ ವಾರ್ಡನ್ ನವೀನ್ ಕುಮಾರ್, 'ರಂಗನತಿಟ್ಟು ಪಕ್ಷಿಧಾಮದಲ್ಲಿ ಚೆಕ್ ಡ್ಯಾಮ್ ಗಳಿವೆ. ಇದು ನೀರಿನ ಒತ್ತಡವನ್ನು ನಿಯಂತ್ರಿಸುತ್ತದೆ. ಯಾರೂ ಗಾಬರಿ ಪಡುವ ಅಗತ್ಯವಿಲ್ಲ. ಅಕಸ್ಮಾತ್ ಪ್ರವಾಹ ಸ್ಥಿತಿ ಎದುರಾದರೆ ನಾವು ಸಣ್ಣ ಸಣ್ಣ ದ್ವೀಪದ ಸುತ್ತ ಮರಳಿನ ಬ್ಯಾಗುಗಳನ್ನು ಇಟ್ಟು ಮಣ್ಣಿನ ಸವಕಳಿ ಆಗದಂತೆ ನೋಡಿಕೊಳ್ಳುತ್ತೇವೆ. ಕೆಲವು ಸಣ್ಣ ಪುಟ್ಟ ಪಕ್ಷಿಗಳನ್ನು ಕಳೆದುಕೊಳ್ಳಬೇಕಾಗಬಹುದು. ಆದರೆ ಶೇ.90 ರಷ್ಟು ಪಕ್ಷಿಗಳನ್ನು ನಾವು ರಕ್ಷಿಸುವ ಭರವಸೆ ನೀಡುತ್ತೇವೆ' ಎಂದಿದ್ದಾರೆ.
ಸದ್ಯಕ್ಕೆ ಕೆಆರ್ ಎಸ್ ಉತ್ತರ ಉದ್ಯಾನವನಕ್ಕೆ ಸಂಚಾರ ನಿರ್ಬಂಧಿಸಲಾಗಿದೆ. ರಂಗನತಿಟ್ಟುವಿನಲ್ಲಿ ಸಹ ದೋಣಿ ವಿಹಾರವನ್ನು ಸದ್ಯಕ್ಕೆ ನಿಷೇಧಿಸಲಾಗಿದೆ.