ಮಂಡ್ಯ ತ್ರಿವಳಿ ಕೊಲೆ ಪ್ರಕರಣ; ಬಲೆಗೆ ಬಿದ್ದ ಐವರು ಆರೋಪಿಗಳು
ಮಂಡ್ಯ, ಸೆಪ್ಟೆಂಬರ್ 14: ಮಂಡ್ಯ ಜಿಲ್ಲೆಯ ಗುತ್ತಲಿನ ಅರ್ಕೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 11ರಂದು ನಡೆದ ಮೂವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಅಧೀಕೃತವಾಗಿ ಪ್ರಕಟಣೆ ಹೊರಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣದ ಅಭಿ (22), ರಘು (20)ಆಂಧ್ರ ಮೂಲದ ವಿಜಿ (25), ಮದ್ದೂರಿನ ಅರೆಕಲ್ ದೊಡ್ಡಿಯ ಗಾಂಧಿ (28), ತೊಪ್ಪನಹಳ್ಳಿಯ ಮಂಜು (30) ಎಂಬುವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ಮಂಡ್ಯ ತ್ರಿವಳಿ ಕೊಲೆ ಆರೋಪಿಗಳ ಮೇಲೆ ಶೂಟೌಟ್: ಐವರ ಬಂಧನ
ಸೆಪ್ಟೆಂಬರ್ 11ರಂದು ರಾತ್ರಿ ಗುತ್ತಲಿನ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು, ಅಲ್ಲಿ ಮಲಗಿದ್ದ ಒಬ್ಬರು ಅರ್ಚಕ ಹಾಗೂ ಇಬ್ಬರು ಕಾವಲುಗಾರರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ದೇಗುಲದ ಹುಂಡಿಯ ಹಣವನ್ನು ಕಳ್ಳತನ ಮಾಡಿದ್ದರು, ಈ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಡ್ಯ ಡಿವೈಎಸ್ ಪಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಐದು ತನಿಖಾ ತಂಡಗಳನ್ನು ನೇಮಿಸಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಸೆಪ್ಟೆಂಬರ್ 13ರಂದು ಅಭಿ ಹಾಗೂ ರಘು ಎಂಬುವರನ್ನು ಬಂಧಿಸಿದ್ದರು. ಇಬ್ಬರಿಂದಲೂ 1,75,000ರೂಗಳ ಹುಂಡಿ ಹಣ ವಶಪಡಿಸಿಕೊಂಡು ಉಳಿದ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದರು.
ಇಬ್ಬರು ಆರೋಪಿಗಳೊಂದಿಗೆ ಇಂದು ಬೆಳಿಗ್ಗೆ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಎನ್.ವಿ ಮಹೇಶ್ ಹಾಗೂ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಶರತ್ ಕುಮಾರ್ ರವರ ನೇತೃತ್ವದ ತಂಡ ಮದ್ದೂರಿನ ಸಾದೊಳಲು ಸಮೀಪ ಆರೋಪಿಗಳನ್ನು ಬಂಧಿಸಲು ಮುಂದಾದ ವೇಳೆ ಮೂವರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
Recommended Video
ಕಾರ್ಯಾಚರಣೆ ವೇಳೆ ಪಿಎಸ್ಐ ಶರತ್ ಕುಮಾರ್ ಹಾಗೂ ಸಿಬ್ಬಂದಿ ಅನಿಲ್ ಕುಮಾರ್, ಎಎಸ್ಐ ಕೃಷ್ಣ ಕುಮಾರ್ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.