ಹಳೇ ಮೈಸೂರು ವ್ಯಾಪ್ತಿಯಲ್ಲಿ ದಿನಕ್ಕೊಂದು ಆತ್ಮಹತ್ಯೆ ಸುದ್ದಿ
ಮಂಡ್ಯ, ಅಕ್ಟೋಬರ್ 24: ರಾಜ್ಯದ ಹಲವು ಕಡೆ ಕೇಳಿ ಬರುತ್ತಿದ್ದ ರೈತರ ಆತ್ಮಹತ್ಯೆ ಸುದ್ದಿಗಳು ವಿರಾಮ ಬಿದ್ದಿದ್ದರೂ ಹಳೇ ಮೈಸೂರು ವ್ಯಾಪ್ತಿಯ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ರೈತರು ಸಾಲಬಾಧೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ಸುದ್ದಿ ಮಾತ್ರ ಕಡಿಮೆಯಾಗಿಲ್ಲ.
ಇದೀಗ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ರೈತ ನಾಗರಾಜೇಗೌಡ(60) ಎಂಬುವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಟು ಎಕರೆ ಜಮೀನು ಹೊಂದಿದ್ದ ಇವರು ಕೃಷಿ ಮತ್ತು ಕೊಳವೆ ಬಾವಿ ಕೊರೆಸುವ ಉದ್ದೇಶದಿಂದ ಪಿಎಲ್ ಡಿ. ಬ್ಯಾಂಕಿನಲ್ಲಿ 4ಲಕ್ಷ ಟ್ರಾಕ್ಟರ್ ಸಾಲ, ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 55ಸಾವಿರ ಬೆಳೆ ಸಾಲ, ಶೀಳನೆರೆ ಡಿಸಿಸಿ ಬ್ಯಾಂಕಿನಲ್ಲಿ ಒಡವೆ ಮೇಲೆ 1.70ಲಕ್ಷ ರೂ ಸಾಲ ಮಾಡಿದ್ದರಲ್ಲದೆ, 2ಲಕ್ಷ ರೂ ಕೈ ಸಾಲ ಮಾಡಿ ಕಬ್ಬು ಮತ್ತು ರಾಗಿ ಬೆಳೆದಿದ್ದರು.
ಸಿಎಂ ಸಿದ್ದರಾಮಯ್ಯ ತವರಲ್ಲಿ ನಿಂತಿಲ್ಲ ರೈತರ ಆತ್ಮಹತ್ಯೆ
ಕಳೆದ ಬಾರಿ ಮಳೆಯ ಕೊರತೆಯಿಂದಾಗಿ ಐದು ಕೊಳವೆ ಬಾವಿಗಳ ಪೈಕಿ 4 ರಲ್ಲಿ ಅಂತರ್ಜಲ ಕುಸಿದು ನೀರು ಬರದಂತಾಗಿತ್ತು. ಸಾಲ ಮಾಡಿ ಬೆಳೆದ ಬೆಳೆ ಫಸಲಿಗೆ ಬರುವ ವೇಳೆಗೆ ಸಿಗದೆ ಒಣಗಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿತ್ತು.
ಇದರಿಂದ ಮನನೊಂದಿದ್ದ ಅವರು ಮಾಡಿದ ಸಾಲವನ್ನು ತೀರಿಸುವುದಾದರೂ ಹೇಗೆ ಎಂಬ ಆಲೋಚನೆಯಲ್ಲಿ ಮುಳುಗಿದ್ದರಲ್ಲದೆ, ಇದೇ ಕೊರಗಿನಲ್ಲಿ ಮನನೊಂದು ತಮ್ಮ ಜಮೀನಿನ ಬಳಿ ಇರುವ ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಬಿನಿ ಜಲಾಶಯದಿಂದ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಜಮೀನು ಸಿಗುತ್ತಾ?
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇತ್ತ ಬೆಳೆನಷ್ಟ, ಅತ್ತ ಸಾಲದ ಕಾಟ!
ಹಳೇ ಮೈಸೂರು ವ್ಯಾಪ್ತಿಯ ರೈತರು, ಬೆಳೆನಷ್ಟದಿಂದಾಗಿ ಇತ್ತ ಮಾಡಿದ ಸಾಲವನ್ನೂ ತೀರಿಸಲಾಗದೆ, ಅತ್ತ ಸಾಲಗಾರರ ಕಾಟವನ್ನೂ ತಾಳಲಾರದೆ ಭಯಗೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ರೈತರಿಗಿಲ್ಲ ನೆಮ್ಮದಿ
ಕಳೆದ ಮೂರು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ರೈತರು ಕೃಷಿ ಮಾಡದ ಪರಿಸ್ಥಿತಿಗೆ ಬಂದಿದ್ದರು. ಕೆರೆಕಟ್ಟೆಗಳು ತುಂಬದೆ, ಅಂತರ್ಜಲ ಬರಿದಾಗಿ ಕೊಳವೆ ಬಾವಿಯಲ್ಲೂ ನೀರು ಬಾರದಂತಾಗಿತ್ತು. ಆದರೆ ಈ ಬಾರಿ ಮಳೆಯಾಗಿರುವುದರಿಂದ ಸ್ವಲ್ಪ ನೆಮ್ಮದಿ ಬಂದಂತಾಗಿದೆ. ಆದರೆ ಮಾಡಿಟ್ಟ ಸಾಲದ ಬಡ್ಡಿ ಬೆಳೆಯುತ್ತಿದ್ದು, ಸಾಲ ನೀಡಿದವರು ಕೊಡುತ್ತಿರುವ ಕಾಟದಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ.
ಸಾಲ ತೀರಿಸುವುದಕ್ಕೆ ಎಷ್ಟು ವರ್ಷ ಬೇಕೋ!
ಕಳೆದ ಮೂರು ವರ್ಷಗಳಿಂದ ಬರದಿಂದ ತತ್ತರಿಸಿದ ರೈತರು ಅನುಭವಿಸಿದ ಕಷ್ಟ, ಮಾಡಿಟ್ಟ ಸಾಲಗಳನ್ನು ತೀರಿಸಲು ಇನ್ನೆಷ್ಟು ವರ್ಷಗಳನ್ನು ಸವೆಸಬೇಕೋ? ಹಲವರು ಸಾಲಮಾಡಿಕೊಂಡಿದ್ದರೂ ಹೇಗೋ ತೀರಿಸುತ್ತೇವೆಂಬ ಧೈರ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇನ್ನೂ ಕೆಲವರು ಸಾಲಗಾರರ ಕಾಟಕ್ಕೆ ಹೆದರಿ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ರೈತರಲ್ಲಿ ಧೈರ್ಯ ತುಂಬುವವರಿಲ್ಲ!
ರಾಜ್ಯದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿಯೇ ಹೆಚ್ಚಿನ ಜನರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮತಕ್ಕಾಗಿ ಇಲ್ಲಸಲ್ಲದ ಗಿಮಿಕ್ ಮಾಡುತ್ತಿರುವ ಆಡಳಿತರೂಢರಾಗಲೀ, ವಿರೋಧಪಕ್ಷದ ನಾಯಕರಾಗಲೀ ರೈತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ.