ಮಂಡ್ಯ ತ್ರಿವಳಿ ಕೊಲೆ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಸನ್ಮಾನ
ಮಂಡ್ಯ, ಸೆಪ್ಟೆಂಬರ್ 16: ಜಿಲ್ಲೆಯ ಗುತ್ತಲಿನ ಅರ್ಕೇಶ್ವರ ದೇವಸ್ಥಾನದಲ್ಲಿ ದರೋಡೆ ಮತ್ತು ಮೂರು ಕೊಲೆ ಮಾಡಿದ ಆರೋಪಿಗಳನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಅಪಾಯವನ್ನೂ ಲೆಕ್ಕಿಸದೆ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡರು ಇಂದು ಸನ್ಮಾನಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪೊಲೀಸ್ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, "ಸೈನಿಕರು ಹೇಗೆ ತಮ್ಮ ಪ್ರಾಣದ ಹಂಗನ್ನು ತೊರೆದು ರಾಷ್ಟ್ರದ ರಕ್ಷಣೆ ಮಾಡುತ್ತಾರೋ ಹಾಗೆಯೇ ಸಮಾಜದ ಸ್ವಾಸ್ತ್ಯ ಕಾಯುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹಳ ಪ್ರಮುಖ" ಎನ್ನುತ್ತಾ ಜಿಲ್ಲೆಯ ದೇವಸ್ಥಾನದಲ್ಲಿ ನಡೆದ ಕೊಲೆಯ ಪ್ರಕರಣವನ್ನು ಭೇದಿಸಿ ಜಿಲ್ಲೆಯ ಜನರಲ್ಲಿ ವಿಶ್ವಾಸ ತುಂಬಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಶ್ಲಾಘಿಸಿದರು.
ಮಂಡ್ಯ ತ್ರಿವಳಿ ಕೊಲೆ ಆರೋಪಿಗಳ ಮೇಲೆ ಶೂಟೌಟ್: ಐವರ ಬಂಧನ
ಇದೇ ಸಂದರ್ಭ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, "ಮಂಡ್ಯ ಜಿಲ್ಲೆಯಲ್ಲಿನ ಅರ್ಕೇಶ್ವರ ದೇವಾಲಯದ ಘಟನೆಯು ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಸಂದರ್ಭದಲ್ಲಿ ಪ್ರಾಣದ ಹಂಗನ್ನು ತೊರೆದು ಈ ಪ್ರಕರಣದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ" ಎಂದು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಶುಭ ಕೋರಿದರು. ಈ ಪ್ರಕರಣವನ್ನು 72 ಗಂಟೆಗಳಲ್ಲೇ ಭೇದಿಸಿ ಸಮಾಜಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದರು.
ಈ ವೇಳೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಪರಶುರಾಮ್, ಅಪರ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Recommended Video
ಸೆಪ್ಟೆಂಬರ್ 11ರಂದು ಗುತ್ತಲಿನ ಅರ್ಕೇಶ್ವರ ದೇಗುಲದಲ್ಲಿ ಮಲಗಿದ್ದ ಮೂವರು ಅರ್ಚಕರು/ಕಾವಲುಗಾರರ ಮೇಲೆ ರಾತ್ರೋರಾತ್ರಿ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ದೇವಸ್ಥಾನದ ಹುಂಡಿ ಹಣವನ್ನು ಕಳವು ಮಾಡಿದ್ದರು. ಘಟನೆ ನಡೆದ ಮೂರು ದಿನಗಳ ಒಳಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಹಲ್ಲೆಯೂ ನಡೆದಿತ್ತು. ಆರೋಪಿಗಳ ಮೇಲೆ ಶೂಟೌಟ್ ನಡೆಸಲಾಗಿತ್ತು.