ತುಂಬಿದ ಮಡುವಿನಕೋಡಿ ಕೆರೆ: ಏರಿ ಒಡೆಯುವ ಆತಂಕ
ಕೃಷ್ಣರಾಜಪೇಟೆ, ಸೆಪ್ಟೆಂಬರ್ 14: ನಿರೀಕ್ಷೆಗೂ ಮೀರಿ ನೀರು ಹರಿದು ಬಂದಿದ್ದರಿಂದ ತಾಲೂಕಿನ ಮಡುವಿನಕೋಡಿ ಗ್ರಾಮದ ಕೆರೆ ಕೋಡಿ ಬಿದ್ದಿದ್ದು, ಕೆರೆಯ ಏರಿ ಒಡೆಯುವ ಆತಂಕ ಎದುರಾಗಿದೆ.
ಮಾಗಡಿಯಲ್ಲಿ ಕೆರೆ ಕಟ್ಟೆ ಒಡೆದು ಜಮೀನಿಗೆ ನುಗ್ಗಿದ ನೀರು
ಮಂದಗೆರೆ ಎಡದಂಡೆಯ ವಿತರಣಾ ನಾಲೆಯಿಂದ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಕೆರೆಯು ಒಂದೇ ದಿನದಲ್ಲಿ ಕೋಡಿ ಬಿದ್ದಿದ್ದು, ಕೆರೆ ಏರಿಯ ಮೇಲೆ ನೀರು ಹರಿಯುತ್ತಿದೆ. ಇದರಿಂದ ಗ್ರಾಮದ ಜನ ಖುಷಿ ಪಡುತ್ತಿದ್ದಾರೆ. ಆದರೆ ಈ ನೀರಿನಿಂದ ಕೆರೆಯ ಏರಿ ಎಲ್ಲಿ ಒಡೆದು ಹೋಗುತ್ತದೋ ಎಂಬ ಭಯವೂ ಕಾಡತೊಡಗಿದೆ.
ಚಿಕ್ಕೋಡಿಯಲ್ಲಿ ಮತ್ತೆ ನೀರಿನೊಂದಿಗೆ ಬಂತು ಮೊಸಳೆ
ಕೆರೆ ಏರಿ ಒಡೆದು ಹೋದರೆ ನೂರಾರು ಎಕರೆ ಕೃಷಿ ಭೂಮಿ ಹಾಗೂ ಅಡಿಕೆ, ತೆಂಗಿನ ತೋಟಗಳು ನಾಶವಾಗುವ ಭೀತಿ ಎದುರಾಗಿದೆ. ಈಗಾಗಲೇ ಕೆರೆಯಿಂದ ಏರಿ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕೃಷಿ ಭೂಮಿಗೆ ನುಗ್ಗಿ 50 ಎಕರೆಗೂ ಹೆಚ್ಚಿನ ಭೂಮಿಯು ಜಲಾವೃತವಾಗಿದೆ. ಈ ವಿಷಯ ತಿಳಿದ ಹೇಮಾವತಿ ಜಲಾಶಯ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರಣ್ಣ ಕಾಲುವೆಯಿಂದ ಕೆರೆಗೆ ಹರಿಯುವ ನೀರನ್ನು ಬೇರೆಡೆಗೆ ಹರಿಸಿದ್ದು, ಇದರಿಂದ ಸದ್ಯಕ್ಕೆ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಕೆರೆಯ ಏರಿಯನ್ನು ಬಲಪಡಿಸಿ ಒಡೆಯದಂತೆ ತಕ್ಷಣದಿಂದಲೇ ಗುಣಮಟ್ಟದ ಮಣ್ಣನ್ನು ಹಾಕಿಸಲು ಕ್ರಮಕೈಗೊಳ್ಳಲಾಗುವುದು ಎಂದು ವೀರಣ್ಣ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿರುವುದರಿಂದ ಕೆರೆ-ಕಟ್ಟೆಗಳು ತುಂಬುತ್ತಿವೆ. ಕಾಲುವೆಗಳಲ್ಲಿ ನೀರು ಹರಿದು ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ. ಅನ್ನದಾತನಾದ ರೈತನ ಮೊಗದಲ್ಲಿ ಮಂದಹಾಸ ಮೂಡಿದ್ದು, ಭೂಮಿಯನ್ನು ಹದಮಾಡಿಕೊಂಡು ಭತ್ತವನ್ನು ನಾಟಿ ಮಾಡುವ ಕೆಲಸಕ್ಕೆ ರೈತರು ಸಜ್ಜಾಗುತ್ತಿದ್ದಾರೆ.