ಮಂಡ್ಯದ ಭವಾನಿಕೊಪ್ಪಲು ಜನರ ನಿದ್ದೆಗೆಡಿಸಿವೆ ಮೂರು ಚಿರತೆಗಳು
ಮಂಡ್ಯ, ಮೇ 11: ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಜನರ ನಿದ್ದೆಗೆಡಿಸಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಕೊರೊನಾದೊಂದಿಗೆ, ಚಿರತೆಗಳ ಭಯವೂ ಶುರುವಾಗಿದೆ.
ಮಂಡ್ಯ ತಾಲೂಕಿನ ಬಸರಾಳು ಹೋಬಳಿ ಭವಾನಿ ಕೊಪ್ಪಲು ಗ್ರಾಮದ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ರಾತ್ರಿ ವೇಳೆಯಲ್ಲಿ ಕಾಣಿಸಿಕೊಂಡಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಯಗೊಂಡಿದ್ದಾರೆ. ರೈತರು ಜಮೀನಿಗೆ ತೆರಳಲು ಹೆದರುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಸಮೀಪದ ಕಾಡುಗಳಿಂದ ಬರುವ ಚಿರತೆಗಳು ಎಲ್ಲೆಂದರಲ್ಲಿ ಅಡ್ಡಾಡುತ್ತಾ ಪ್ರಾಣಿಗಳಿಗಾಗಿ ಹುಡುಕಾಟ ನಡೆಸುತ್ತಿವೆ. ಊರೊಳಗೆ ನುಗ್ಗಿ ಮೇಕೆ, ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿಬಿಡಬಹುದು ಎಂಬ ಭಯ ಜನರನ್ನು ಕಾಡುತ್ತಿದೆ. ಹೀಗಾಗಿ ಚಿರತೆಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮನೆಯಲ್ಲಿ ಮಲಗಿದ್ದ ಮಗುವನ್ನು ಎಳೆದೊಯ್ದು ಕೊಂದು ತಿಂದ ಚಿರತೆ
ಭವಾನಿ ಕೊಪ್ಪಲು ಗ್ರಾಮದ ಯುವಕರು ರಾತ್ರಿ ವೇಳೆ ಗರುಡನಹಳ್ಳಿಯಿಂದ ತಮ್ಮ ಗ್ರಾಮದತ್ತ ಬೈಕ್ ನಲ್ಲಿ ಮರಳುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿವೆ. ಇದನ್ನು ನೋಡಿದ ಯುವಕರು ಗ್ರಾಮದ ಜನಕ್ಕೆ ವಿಷಯ ತಿಳಿಸಿದ್ದಾರೆ. ಸದಾ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು, ಮಕ್ಕಳು, ಮಹಿಳೆಯರು ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ. ಜತೆಗೆ ಮೊಬೈಲ್ ನಲ್ಲಿ ಚಿರತೆಗಳ ಚಿತ್ರವನ್ನು ಸೆರೆ ಹಿಡಿದಿರುವುದರಿಂದಾಗಿ ಅದನ್ನು ನೋಡಿದ ಬಹಳಷ್ಟು ಮಂದಿ ಜಮೀನಿನಲ್ಲಿ ಹೇಗೆ ಕೆಲಸ ಮಾಡುವುದೆಂಬ ಚಿಂತೆಯಲ್ಲಿದ್ದಾರೆ.
ಈ ಕುರಿತಂತೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿರುವ ಗ್ರಾಮಸ್ಥರು, ಈ ಹಿಂದೆ ಕೂಡ ಚಿರತೆಗಳು ದಾಳಿ ಮಾಡಿದ್ದವು. ಆಗ ಅರಣ್ಯ ಇಲಾಖೆಗೆ ತಿಳಿಸಿದರೂ ಅವುಗಳನ್ನು ಸೆರೆಹಿಡಿಯುದೆ ನಿರ್ಲಕ್ಷ ವಹಿಸಿದ್ದಾರೆ. ಈಗಲಾದರೂ ಚಿರತೆ ಓಡಾಡುವ ಜಾಡನ್ನು ಪತ್ತೆಹಚ್ಚಿ ಬೋನುಗಳನ್ನಿಟ್ಟು ಸೆರೆಹಿಡಿಯುವ ಮೂಲಕ ಗ್ರಾಮಸ್ಥರ ಭಯವನ್ನು ದೂರ ಮಾಡಬೇಕೆಂದು ಮನವಿ ಮಾಡಿದ್ದಾರೆ.