ಮುಂಬರುವ ವಿಧಾನಸಭಾ ಚುನಾವಣೆಗೆ ರೈತಸಂಘದಿಂದ ಅಖಾಡ ತಯಾರು!
ಮಂಡ್ಯ, ಜನೆವರಿ 4: ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘ ರಾಜಕೀಯವಾಗಿ ಗಟ್ಟಿಯಾಗಿ ಬೇರೂರುವ ಪ್ರಯತ್ನಕ್ಕೆ ಮುಂದಾಗಿದ್ದು, ಅದರಂತೆ ಪಾಂಡವಪುರ ತಾಲೂಕಿನಲ್ಲಿ ಗ್ರಾ.ಪಂ ಚುನಾವಣೆ ಮೂಲಕ ಅಖಾಡ ತಯಾರು ಮಾಡಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಿದ್ಧ ಮಾಡುತ್ತಿರುವ ರಾಜಕೀಯ ವೇದಿಕೆ ಎಂಬುದರಲ್ಲಿ ಎರಡು ಮಾತಿಲ್ಲ.
ಗ್ರಾ.ಪಂ ಚುನಾವಣೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಪಾಂಡವಪುರದಲ್ಲಿ ರೈತ ಸಂಘದ ಮುಖಂಡರು ಚುನಾವಣೆಗೆ ರೈತ ಸಂಘದ ಬೆಂಬಲಿತರನ್ನು ಕಣಕ್ಕಿಳಿಸಲು ತಯಾರು ಮಾಡಿಕೊಂಡು ನೇರವಾಗಿ ಹಳ್ಳಿಗಳಿಗೆ ತೆರಳಿ ಕಾರ್ಯಕರ್ತರನ್ನು ಸಂಘಟಿಸಿ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಎಲ್ಲೆಡೆ ಗ್ರಾಮ ಸಮಿತಿಗಳನ್ನು ರಚಿಸಿ ಆ ಮೂಲಕ ತಳಮಟ್ಟದಿಂದಲೇ ರೈತ ಸಂಘವನ್ನು ಗಟ್ಟಿಗೊಳಿಸುವ ಯತ್ನ ಮಾಡಿದ್ದರು. ರೈತಸಂಘವು ಮೊದಲಿಗೆ ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಕ್ಷೇತ್ರವಾಗಿದ್ದ ಪಾಂಡವಪುರದಿಂದಲೇ ರೈತ ಸಂಘವನ್ನು ಸದೃಢ ಮಾಡುವ ಪಣ ತೊಟ್ಟಿದ್ದು, ಅದರಂತೆ ಈ ಕ್ಷೇತ್ರವನ್ನೇ ಗುರಿಯಾಗಿಸಿಕೊಂಡು ಸಂಘ ತಾಲೂಕಿನಲ್ಲಿ ಭದ್ರವಾಗಿ ನೆಲೆಯೂರಬೇಕಾದರೆ ಗ್ರಾಮೀಣ ಮಟ್ಟದಲ್ಲಿ ಮೊದಲು ಸಂಘಟನೆಯಾಗಬೇಕು.
ಹಳ್ಳಿಗಳಲ್ಲಿ ರೈತರ ಸಂಘಟನೆ
ಈ ಸಂಘಟನೆ ಯಶಸ್ವಿಯಾಗಬೇಕಾದರೆ ಪ್ರತಿ ಗ್ರಾಮದಲ್ಲಿಯೂ ರೈತ ಸಂಘವನ್ನು ಪ್ರತಿನಿಧಿಸುವ ಒಬ್ಬ ಪ್ರತಿನಿಧಿಯಿರಬೇಕು. ಆ ಪ್ರತಿನಿಧಿ ಗ್ರಾಮ ಪಂಚಾಯಿತಿ ಸದಸ್ಯನಾದರೆ ರೈತಸಂಘ ಇನ್ನಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂಬ ಉದ್ದೇಶವನ್ನಿಟ್ಟುಕೊಂಡು ರೈತ ಸಂಘ ಅಖಾಡಕ್ಕಿಳಿದಿತ್ತು. ಇದೀಗ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿರುವುದು ಗಮನಾರ್ಹವಾಗಿದೆ. ಹಾಗೆ ನೋಡಿದರೆ ಪಾಂಡವಪುರದಲ್ಲಿ ಅರ್ಥಾತ್ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಾರಮ್ಯ ಸಾಧಿಸಿದೆ. ಇಲ್ಲಿ ಜೆಡಿಎಸ್ನ ಸಿ.ಎಸ್.ಪುಟ್ಟರಾಜು ಅವರು ಶಾಸಕರಾಗಿದ್ದಾರೆ. ಹೀಗಾಗಿ ರೈತ ಸಂಘಕ್ಕೆ ಪ್ರಮುಖ ವಿರೋಧ ಪಕ್ಷವಾಗಿರುವುದು ಜೆಡಿಎಸ್. ಆದ್ದರಿಂದ ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಜೆಡಿಎಸ್ಗೆ ಟಾಂಗ್ ನೀಡುವ ಎಲ್ಲ ಲಕ್ಷಣಗಳು ಈಗಿನಿಂದಲೇ ಕಾಣಿಸುತ್ತಿದೆ.
ಕೆ.ಆರ್.ಪೇಟೆಯಲ್ಲಿ ಗ್ರಾ.ಪಂ ಪ್ರವೇಶ ಮಾಡಿದ ಪತಿ-ಪತ್ನಿ
ಜ.8ರಂದು ರೈತ ಸಂಘದ ಶಕ್ತಿ ಪ್ರದರ್ಶನ
ಸದ್ಯ ರೈತಸಂಘ ನಿರೀಕ್ಷೆ ಮಾಡಿದಂತೆಯೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಮೂಲಾಗ್ರ ಯಶಸ್ಸು ಸಾಧಿಸಿದೆ. ಹೀಗಾಗಿ ರೈತ ಸಂಘದ ನಾಯಕರೆಲ್ಲರೂ ಸೇರಿ ಗೆದ್ದ ಗ್ರಾ.ಪಂ ಅಭ್ಯರ್ಥಿಗಳಿಗೆ ಜ.8ರಂದು ಅಭಿನಂದನಾ ಸಮಾರಂಭವನ್ನಿಟ್ಟುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರೈತಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ, ಮಹಿಳಾ ರಾಜ್ಯಾಧ್ಯಕ್ಷೆ ನಂದಿನಿ ಜಯರಾಮು, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಳ್ಳುವ ಮೂಲಕ ರೈತ ಸಂಘದ ಶಕ್ತಿ ಮಾಡಲಿದ್ದಾರೆ.
ರೈತ ಸಂಘಕ್ಕೆ ಜೆಡಿಎಸ್ ಟಾರ್ಗೆಟ್
ಈ ಕ್ಷೇತ್ರದಲ್ಲಿ ರೈತ ಸಂಘ ಬಲವಾದಷ್ಟು ಅದರ ಹೊಡೆತ ಜೆಡಿಎಸ್ ಮೇಲೆ ಬೀರಲಿದೆ. ಏಕೆಂದರೆ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಾಬಲ್ಯ ಅಷ್ಟೇನು ಇಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಚುನಾವಣೆಯಲ್ಲಿ ಮೇಲ್ಮಟ್ಟದಲ್ಲಿ ರೈತಸಂಘ ಮತ್ತು ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಳ್ಳದಿದ್ದರೂ ಸ್ಥಳೀಯವಾಗಿ ಮೈತ್ರಿಕೊಂಡು ಚುನಾವಣೆ ಎದುರಿಸಿದ್ದಾರೆ ಎನ್ನುವುದಂತು ಸತ್ಯ. ಈ ಪೈಕಿ ರೈತಸಂಘ ನೇರವಾಗಿ 6 ಗ್ರಾ.ಪಂಗಳಲ್ಲಿ ಅಧಿಕಾರ ಹಿಡಿಯಲಿದೆ. ರೈತಸಂಘ ಮತ್ತು ಕಾಂಗ್ರೆಸ್ ಮೈತ್ರಿಕೂಟ 6 ಹಾಗೂ ಬಿಜೆಪಿಯೊಂದಿಗಿನ ಮೈತ್ರಿಯಿಂದ 2 ಗ್ರಾ.ಪಂಗಳಲ್ಲಿ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ದುದ್ದ ಹೋಬಳಿಯ 11 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳು ಹೀಗೆ ಒಟ್ಟಾರೆ 20 ಕ್ಷೇತ್ರಗಳಲ್ಲಿ ರೈತಸಂಘ, ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯುವುದು ಖಾತ್ರಿಯಾಗಿದೆ.
Recommended Video
ದರ್ಶನ್ ಪುಟ್ಟಣ್ಣಯ್ಯಗೂ ಧೈರ್ಯ ತಂದಿದೆ
ಇದೆಲ್ಲದರ ನಡುವೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿರುವ ರೈತಸಂಘ ಬೆಂಬಲಿತ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದ್ದು, ಸೋತವರು ಧೃತಿಗೆಡದಂತೆ ಧೈರ್ಯ ತುಂಬುವ ನಿಟ್ಟಿನಲ್ಲಿಯೂ ಕಾರ್ಯಯೋಜನೆ ಆರಂಭವಾಗಿದೆ ಎನ್ನಲಾಗಿದೆ. ಒಟ್ಟಾರೆ ಹೇಳಬೇಕೆಂದರೆ ಈ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು ರೈತಸಂಘದ ಮತಗಳಿಕೆಯನ್ನು ಗಮನಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಲಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಧೈರ್ಯ ತಂದಿದ್ದಂತು ನಿಜ. ಆದರೆ ಮುಂದೇನಾಗುತ್ತೆ ಎಂಬುದನ್ನು ಮಾತ್ರ ಕಾಲವೇ ಹೇಳಬೇಕು.