ಮಂಡ್ಯದಲ್ಲಿ ರೈತರೇಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ?
ಮಂಡ್ಯ, ಸೆಪ್ಟೆಂಬರ್ 6: ಹಳೇ ಮೈಸೂರು ವ್ಯಾಪ್ತಿಯಲ್ಲಿ ರೈತರ ಬದುಕು ಶೋಚನೀಯವಾಗಿದ್ದು, ಇದಕ್ಕೆ ಮೇಲಿಂದ ಮೇಲೆ ರೈತರು ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಗಳು ಸಾಕ್ಷಿಯಾಗಿದೆ.
ಮಂಡ್ಯ: ಕೈಕೊಟ್ಟ ಬೆಳೆ, ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಕಳೆದ ಎರಡು ವರ್ಷಗಳಿಂದ ಬರದ ಹಿನ್ನಲೆಯಲ್ಲಿ ಕೃಷಿಗೆ ನೀರು ಸಿಗದೆ ಬೆಳೆಬೆಳೆಯಲಾಗದೆ ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರು, ತಾವು ಮಾಡಿದ ಸಾಲ ತೀರಿಸಲು ಮತ್ತೆ ಸಾಲ ಮಾಡುತ್ತಿದ್ದು, ಬಡ್ಡಿ ಕಟ್ಟಲಾಗದೆ ವಿಲವಿಲ ಒದ್ದಾಡುತ್ತಿದ್ದಾರೆ.
ಸಣ್ಣ ರೈತರು ಕೃಷಿಭೂಮಿಯನ್ನು ಬಿಟ್ಟು ಗಾರೆಕೆಲಸ, ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಪಟ್ಟಣ ಸೇರಿ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಇನ್ನು ಕೆಲವು ರೈತರು ಕೃಷಿಗಾಗಿ ಸಾಲ ಮಾಡಿ ಬೋರ್ವೆಲ್ ತೋಡಿಸಿ ಅದರಲ್ಲಿ ನೀರು ಸಿಗದೆ ಮಾಡಿದ ಬೆಳೆ ಒಣಗಿ ನಾಶವಾಗಿ ಮಾಡಿದ ಸಾಲದ ಬಡ್ಡಿಯೂ ಕಟ್ಟಲಾಗದೆ ಸಾಲಗಾರರಿಗೆ ಮುಖ ತೋರಿಸಲಾಗದೆ, ಬ್ಯಾಂಕ್ ನೋಟೀಸ್ ಗಳಿಗೆ ಉತ್ತರ ಕೊಡಲಾಗದೆ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರಂತವಾಗಿ ಕಾಡುತ್ತಿದೆ.
ಕಳೆದೊಂದು ವರ್ಷದಿಂದ ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ದೊಡ್ಡದಾಗಿದೆ. ಮೇಲಿಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಯಾರೂ ಕೂಡ ರೈತರ ನೆರವಿಗೆ ಧಾವಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಕೂಡ ರೈತರ ಬಗ್ಗೆ ಯಾವುದೇ ರೀತಿಯ ಸಹಾಯಕ್ಕೆ ಧಾವಿಸದಿರುವುದರಿಂದ ಅನ್ಯ ಮಾರ್ಗವಿಲ್ಲದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಸಾಲ ಮನ್ನಾ ಘೋಷಣೆ ನಿರೀಕ್ಷೆ ಹುಸಿ, ಮಂಡ್ಯದಲ್ಲಿ ಇಬ್ಬರು ರೈತರ ಆತ್ಮಹತ್ಯೆ!
ಮಂಡ್ಯದಲ್ಲಿ ವಾರಕ್ಕೊಬ್ಬರಂತೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಅದರಲ್ಲೂ ಕೆ.ಆರ್.ಪೇಟೆ ತಾಲೂಕಿನಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಶ್ಯಾರಹಳ್ಳಿ ಗ್ರಾಮದಲ್ಲಿ ಪಟೇಲ್ ಕರೀಗೌಡ ಎಂಬುವರ ಪುತ್ರ ಬಾಲಕೃಷ್ಣ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಇವರು 4 ಎಕರೆ ಜಮೀನು ಹೊಂದಿದ್ದರು. ಕೃಷಿಗಾಗಿ ಕೊಳವೆ ಬಾವಿ ಕೊರೆಸಲು ಸಾರಂಗಿ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಹಾಗೂ ಕೆ.ಆರ್.ಪೇಟೆ ಸ್ಟೇಟ್ ಬ್ಯಾಂಕ್ ನಲ್ಲಿ 1 ಲಕ್ಷ ಸಾಲ ಮಾಡಿದ್ದರು. ಜೊತೆಗೆ 1 ಲಕ್ಷ ರೂ. ಕೈ ಸಾಲ ಮಾಡಿದ್ದರು ಎನ್ನಲಾಗಿದೆ.
ಕೃಷಿಗೆ ತಮ್ಮ ಜಮೀನಿನಲ್ಲಿದ್ದ ಸುಮಾರು 40 ವರ್ಷ ಹಳೆಯದಾದ ತೆರೆದ ಬಾವಿಯಿಂದಲೇ ನೀರನ್ನು ಬಳಸುತ್ತಿದ್ದರಾದರೂ ಈ ಬಾರಿ ಅಂತರ್ಜಲದ ಕೊರತೆಯಿಂದ ನೀರು ಬತ್ತಿಹೋಗಿತ್ತು. ಹೀಗಾಗಿ ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಯಿಸಿದ್ದರಾದರೂ ಅದರಲ್ಲಿ ನೀರು ಸಿಕ್ಕಿರಲಿಲ್ಲ. ಪರಿಣಾಮ ಲಕ್ಷಾಂತರ ರೂ. ನಷ್ಟವಾಗಿತ್ತಲ್ಲದೆ, ಬೆಳೆ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ಈ ನಡುವೆ ಮಾಡಿದ ಸಾಲಕ್ಕೆ ಬಡ್ಡಿಯೂ ಹೆಚ್ಚುತ್ತಾ ಹೋಯಿತಲ್ಲದೆ, ಸಾಲ ತೀರಿಸುವ ದಾರಿಯೇ ಕಾಣದಾಗಿತ್ತು. ಇದರಿಂದ ಭಯಗೊಂಡ ಅವರು ಜಾನುವಾರು ಕಟ್ಟುವ ಕೊಟ್ಟಿಗೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ರಾಣಿ ಅವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.