ಮಂಡ್ಯದಲ್ಲಿ ಭತ್ತದ ಬಂಪರ್ ಬೆಳೆ; ಖರೀದಿಗೆ ಸರ್ಕಾರದ ನಿರಾಸಕ್ತಿ
ಮಂಡ್ಯ, ಜೂನ್ 30 : ಭತ್ತವನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆಯಲ್ಲಿ ಒಂದಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪಸ್ತುತ ವರ್ಷ ಭತ್ತ ಮತ್ತು ರಾಗಿ ಬಂಪರ್ ಬೆಳೆ ಬಂದಿದೆ. ಬೇಸಿಗೆ ಹಂಗಾಮಿನಲ್ಲಿ ಉತ್ತಮ ಫಸಲು ಕೈಸೇರಿದ್ದರೂ ರೈತರ ಮೊಗದಲ್ಲಿ ಸಂಭ್ರಮವಿಲ್ಲ. ಭತ್ತ ಖರೀದಿಗೆ ಸರಕಾರ ನಿರಾಸಕ್ತಿ ವಹಿಸಿರುವುದರಿಂದ ದಲ್ಲಾಳಿಗಳಿಗೆ ಭರ್ಜರಿ ಲಾಭವಾಗುತ್ತಿದೆ.
ಈ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯ 17169 ಹೆಕ್ಟೇರ್ ಪ್ರದೇಶದಲ್ಲಿ 13,73,520ಕ್ವಿಂಟಾಲ್ ಭತ್ತದ ಫಸಲು ಬಂದಿದ್ದರೆ,2357 ಹೆಕ್ಟೇರ್ ಪ್ರದೇಶದಲ್ಲಿ 51854 ಕ್ವಿಂಟಾಲ್ ರಾಗಿ ಬೆಳೆ ಬಂದಿದೆ. ಪ್ರತಿ ಹೆಕ್ಟೇರ್ಗೆ ಭತ್ತ 80 ಕ್ವಿಂಟಾಲ್ನಂತೆ ದೊರಕಿದ್ದರೆ, ರಾಗಿ ಪ್ರತಿ ಹೆಕ್ಟೇರ್ಗೆ 22 ಕ್ವಿಂಟಾಲ್ನಷ್ಟು ರೈತರ ಕೈಸೇರಿದೆ.
ಮಂಡ್ಯ ರೈತರ ಜೀವನಾಡಿ ಮೈಶುಗರ್ ಕಾರ್ಖಾನೆ ಆ.15 ರಂದು ಪುನರಾರಂಭ: ಗೋಪಾಲಯ್ಯ
ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿದಿದ್ದರಿಂದ ರೈತರ ಬೆಳೆಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಪ್ರತಿ ವರ್ಷ ನಾಲೆಯ ನೀರಿಗಾಗಿ ಕಾದು ಕೂರುತ್ತಿದ್ದ ರೈತರಿಗೆ ವರುಣ ಈ ಬಾರಿ ಕೃಪೆ ತೋರಿದ. ಉತ್ತಮ ಮಳೆಯಿಂದ ಬೆಳೆಗಳಿಗೆ ಸಮೃದ್ಧ ನೀರು ದೊರಕಿತು. ರೈತರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಬೆಳೆಯನ್ನು ಕೈಸೇರಿಸಿಕೊಳ್ಳುವುದಕ್ಕೆ ಕಾತರರಾಗಿದ್ದರು.
ಬೆಳೆ ಕಟಾವಿಗೆ ಬಂದ ಸಮಯದಲ್ಲಿ ಮುಂಗಾರು ಚುರುಕುಗೊಂಡು ರೈತರಲ್ಲಿ ಆತಂಕ ಸೃಷ್ಟಿಸಿದರೂ, ಅದು ಹೆಚ್ಚು ದಿನ ಇರಲಿಲ್ಲ. ಮಳೆ ಕ್ಷೀಣಿಸಿ ರೈತರ ಬೆಳೆ ಕಟಾವಿಗೆ ಅನುವು ಮಾಡಿಕೊಟ್ಟಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಮಂಡ್ಯ; ತೆಂಗು ಬಿಟ್ಟು ಅಡಿಕೆ ಬೆಳೆಯತ್ತ ರೈತರ ಚಿತ್ತ
ದಳ್ಳಾಳಿಗಳಿ ಜೇಬಿಗೆ ಸೇರುತ್ತಿದೆ ಲಾಭದ ಹಣ
ಜಿಲ್ಲೆಯಲ್ಲಿ ಭತ್ತ ಉತ್ತಮ ಫಸಲು ಬಂದಿದ್ದರೂ ಬೆಳೆಗಾರರಿಗೆ ಮಾತ್ರ ಲಾಭ ನೋಡುವ ಅದೃಷ್ಟವಿಲ್ಲ. ಜಿಲ್ಲಾಡಳಿತ ಖರೀದಿ ಕೇಂದ್ರಗಳನ್ನು ತೆರೆದು ಭತ್ತ, ರಾಗಿ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಈ ಪರಿಸ್ಥಿತಿಯ ಅನುಕೂಲ ಪಡೆಯುತ್ತಿರುವ ದಲ್ಲಾಳಿಗಳು ರೈತರ ಬೆಳೆ ಗದ್ದೆಯಲ್ಲಿರುವಾಗಲೇ ಅದನ್ನು ಕೊಂಡುಕೊಂಡು ಭರ್ಜರಿ ಲಾಭವನ್ನು ಜೇಬಿಗಿಳಿಸುತ್ತಿದ್ದಾರೆ.
ಕ್ವಿಂಟಾಲ್ಗೆ 600 ರೂ ನಷ್ಟ
ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 2040 ರೂ. ನಿಗದಿಪಡಿಸಿದೆ. ಆದರೆ, ದಲ್ಲಾಳಿಗಳು ಪ್ರತಿ ಕ್ವಿಂಟಾಲ್ಗೆ 1400 ರೂ.ನಂತೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರು 600 ರೂ. ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ.
ಮುಂಗಾರು ಆರಂಭ ಕಾಲದಲ್ಲಿ ಭತ್ತ ಒಣಗಿಸಲು ಸಾಧ್ಯವಾಗಿರುವುದಿಲ್ಲ. ಹಸಿ ಭತ್ತವನ್ನು ಕೊಂಡೊಯ್ದರೂ ಕೊಂಡುಕೊಳ್ಳುವುದೂ ಇಲ್ಲ. ಅದಕ್ಕಾಗಿ ಭತ್ತವನ್ನು ದಲ್ಲಾಳಿಗಳಿಗೆ ಮಾಡುತ್ತಿದ್ದೇವೆ ಎಂದು ಹನಿಯಂಬಾಡಿ ನಾಗರಾಜು ಎಂಬ ರೈತ ಹೇಳಿದ್ದಾರೆ.
ರೈತರಿಂದ ಕಡಿಮೆ ಬೆಲೆಗೆ ಭತ್ತವನ್ನು ಖರೀದಿಸುವ ದಲ್ಲಾಳಿಗಳು ಭತ್ತವನ್ನು ಒಣಗಿಸಿ ಅದನ್ನು ಪಾಲಿಶ್ ಮಾಡಿದ ಅಕ್ಕಿಯನ್ನು ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಂಪರ್ ಬೆಳೆ ಬೆಳೆದ ರೈತರಿಗೆ ಕವಡೆ ಕಾಸಿನಷ್ಟು ಹಣ ಸಿಕ್ಕರೆ ದುಪ್ಪಟ್ಟು ಹಣ ದಲ್ಲಾಳಿಗಳ ಪಾಲಾಗುತ್ತಿದೆ. ಆದರೂ ಇದರ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲ.
ಶಾಸಕರೂ ಸರಕಾರಕ್ಕೆ ಒತ್ತಡ ಏರುವ ಪ್ರಯತ್ನ ಮಾಡುತ್ತಿಲ್ಲ
ಜಿಲ್ಲಾಡಳಿತಕ್ಕೆ ಜವಾಬ್ದಾರಿಯೂ ಇಲ್ಲ, ರೈತರ ಬಗ್ಗೆ ಕಾಳಜಿಯೂ ಇಲ್ಲ. ಬೆಳೆ ಕಟಾವಿಗೆ ಬಂದ ಸಮಯದಲ್ಲಿ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಖರೀದಿ ಕೇಂದ್ರ ತೆರೆಯುವುದಕ್ಕೆ ಗಮನವನ್ನೇ ಹರಿಸಿಲ್ಲ. ತಣ್ಣನೆಯ ಹವೆ ಇರುವುದರಿಂದ ಭತ್ತ ಒಣಗಿಸಲಾಗದಂತಹ ಪರಿಸ್ಥಿತಿ ಇದೆ. ಆ ಭತ್ತವನ್ನು100 ರಿಂದ 200 ರೂ. ಕಡಿಮೆ ಬೆಲೆಗೆ ಖರೀದಿಸಿ ಎಪಿಎಂಸಿ ಗೋದಾಮುಗಳಲ್ಲಿ ಶೇಖರಿಸಿಟ್ಟು ಒಣಗಿಸುವ ಬಗ್ಗೆಯೂ ಆಲೋಚಿಸುತ್ತಿಲ್ಲ. ಜಿಲ್ಲೆಯ ಎಲ್ಲಾ ಶಾಸಕರೂ ಭತ್ತ-ರಾಗಿ ಕೇಂದ್ರ ತೆರೆಯುವ ಸಂಬಂಧ ಸರಕಾರದ ಮೇಲೆ ಒತ್ತಡ ಹೇರುವ ಸಣ್ಣ ಪ್ರಯತ್ನ ಮಾಡದಿರುವುದರಿಂದ ರೈತರು ಉತ್ತಮ ಫಸಲು ಪಡೆದುಕೊಂಡಿದ್ದರೂ ಲಾಭ ಕಾಣಲಾಗದ ಸ್ಥಿತಿ ತಲುಪಿದ್ದಾರೆ ಎಂದು ರೈತ ಮುಖಂಡ ಕೆ. ಎಸ್. ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಹಂಗಾಮಿನಲ್ಲಿ ಭತ್ತ-ರಾಗಿ ಉತ್ಪಾದನೆ ವಿವರ
ತಾಲೂಕು | ಭತ್ತ ವಿಸ್ತೀರ್ಣ (ಹೆಕ್ಟೇರ್) | ಉತ್ಪಾದನೆ (ಕ್ವಿಂಟಾಲ್) | ರಾಗಿ ವಿಸ್ತೀರ್ಣ (ಹೆಕ್ಟೇರ್) |
ಉತ್ಪಾದನೆ (ಕ್ವಿಂಟಾಲ್) |
ಮಂಡ್ಯ | 5885 | 470800 | 464 | 10208 |
ಮದ್ದೂರು | 3500 | 280000 | 476 | 10472 |
ಮಳವಳ್ಳಿ | 1984 | 158720 | 625 | 13750 |
ಶ್ರೀರಂಗಪಟ್ಟಣ | 2385 | 190800 | 265 | 5830 |
ಪಾಂಡವಪುರ | 3000 | 240000 | 265 | 6490 |
ಕೆ.ಆರ್.ಪೇಟೆ | 305 | 28800 | 222 | 4884 |
ನಾಗಮಂಗಲ | 110 | 8800 | 10 | 220 |
ಒಟ್ಟು | 17169 | 1373520 | 2357 | 51854 |