ಜೆಡಿಎಸ್ ಗೆ ತಲೆ ಬಿಸಿ ತಂದ ಮಂಡ್ಯ ರೈತರ ಪ್ರತಿಭಟನೆಗಳು
Recommended Video
ಮಂಡ್ಯ, ಜುಲೈ.10: ಹಾಲು ಉತ್ಪಾದಕರು ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸುವ ಘಟನೆಗಳು ಬೇರೆ ರಾಜ್ಯಗಳಿಂದ ಈವರೆಗೆ ವರದಿಯಾಗುತ್ತಿದ್ದವು. ಆದರೆ ಸೋಮವಾರ ಜೆಡಿಎಸ್ ಭದ್ರಕೋಟೆ ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ರೈತರು ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.
ಅವರ ಆಕ್ರೋಶವಿದ್ದದ್ದು ರಾಜ್ಯದ ಆಡಳಿತಾರೂಢ ಜೆಡಿಎಸ್ ಪಕ್ಷದ ವಿರುದ್ಧ. ಪಕ್ಷದ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಸರಣಿ ರೈತ ಪ್ರತಿಭಟನೆಗಳು ಆರಂಭವಾಗಿರುವುದು ಪಕ್ಷದ ನಾಯಕರಿಗೆ ತಲೆಬಿಸಿ ತಂದಿಟ್ಟಿದೆ.
ಬಜೆಟ್ ಕುರಿತ ಆರೋಪಕ್ಕೆ ಸದನದಲ್ಲಿ ಉತ್ತರ ಕೊಟ್ಟ ಕುಮಾರಸ್ವಾಮಿ
ಸೋಮವಾರ ಸಂಜೆವರೆಗೆ ನಗರದಲ್ಲಿ ಪ್ರತಿಭಟನೆಗಳದ್ದೇ ಸುದ್ದಿ. ಒಂದೆಡೆ ಹಾಲಿಗೆ ರಾಜ್ಯದಲ್ಲೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್ಮುಲ್) ಅತಿ ಕಡಿಮೆ ದರ ನೀಡುವ ಮೂಲಕ ಹಾಲು ಉತ್ಪಾದಕರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ಹಾಲು ಉತ್ಪಾದಕರು ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದರು.
ಜನಸಾಮಾನ್ಯರು ಹಾಲನ್ನು ರಸ್ತೆಗೆ ಸುರಿದ ಘಟನೆ ನೋಡಿ ದಿಗ್ಬ್ರಾಂತರಾದರು. ಹಾಲು ಉತ್ಪಾದಕರು ಒಕ್ಕೂಟದ ನಾನಾ ಭ್ರಷ್ಟ ಪ್ರಕರಣಗಳನ್ನು ಪ್ರಸ್ತಾಪಿಸಿ, ಘೋಷಣೆ ಕೂಗಿದರು.
ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲೇ ಭುಗಿಲೆದ್ದಿತು ಸಿಎಂ ವಿರುದ್ಧ ಆಕ್ರೋಶ
ಇನ್ನೊಂದೆಡೆ ಸಂಪೂರ್ಣ ಸಾಲ ಮನ್ನಾ ಆಗ್ರಹಿಸಿ ಹಸಿರು ಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ತಡ ರಾತ್ರಿ ತನಕ ಪ್ರತಿಭಟನೆ ಮುಂದುವರೆದಿತ್ತು. ಒಟ್ಟಾರೆ ರೈತರ ಆಕ್ರೋಶಕ್ಕೆ ಮಂಡ್ಯದಲ್ಲಿ ಜೆಡಿಎಸ್ ನಾಯಕರು ಈ ಮಳೆಗಾಲದಲ್ಲೂ ಬೆವರುತ್ತಿದ್ದಾರೆ.