ನಾಲೆಯಲ್ಲಿ ಹರಿದು ಬಂದ ನೀರು: ನಿಟ್ಟುಸಿರು ಬಿಟ್ಟ ಮಂಡ್ಯದ ರೈತರು
ಮಂಡ್ಯ, ಜೂನ್ 23: ಮೃಗಶಿರಾ ಮಳೆ ಅಬ್ಬರಿಸಿದ ಕಾರಣ ಜೂನ್ ತಿಂಗಳಲ್ಲೇ ಹೆಚ್ಚಿನ ಪ್ರಮಾಣದ ನೀರು ಕೆಆರ್ಎಸ್ ಜಲಾಶಯಕ್ಕೆ ಹರಿದು ಬರುವ ಮೂಲಕ ಕಳೆದ ವರ್ಷ ಈ ವೇಳೆಗೆ ತಳ ಸೇರಿದ್ದ ನೀರಿನ ಮಟ್ಟ ಈ ಬಾರಿ ಗಣನೀಯವಾಗಿ ಏರಿಕೆಯಾಗಿರುವುದು ರೈತರಿಗೆ ಸಂತಸ ತಂದಿದೆ.
ಕೊಡಗಿನಲ್ಲಿ ಮಳೆಗಾಲದ ಆರಂಭದಲ್ಲಿಯೇ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಕಾವೇರಿ ಧುಮ್ಮಿಕ್ಕಿ ಹರಿದಿದ್ದು ವಿಶೇಷವಾಗಿದೆ. ಸದ್ಯ ಕೆಆರ್ಎಸ್ ಜಲಾಶಯದಲ್ಲಿ 105 ಅಡಿಯಷ್ಟು ನೀರಿರುವುದರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದು ರೈತರು ಹರ್ಷ ಪಡುವಂತಾಗಿದೆ.
20 ವರ್ಷಗಳ ನಂತರ ಜೂನ್ನಲ್ಲಿ 100ರ ಗಡಿ ದಾಟಿದ ಕೆಆರ್ಎಸ್
ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಬರ ಆವರಿಸಿದ ಕಾರಣದಿಂದಾಗಿ ಯಾವುದೇ ರೀತಿಯ ಬೆಳೆ ಬೆಳೆಯಲಾಗದೆ ಕಣ್ಣೀರಿಟ್ಟಿದ್ದ ರೈತ ಈ ಬಾರಿ ನಾಲೆಗಳ ಮೂಲಕ ತಮ್ಮ ಜಮೀನಿಗೆ ಹರಿದು ಬರುತ್ತಿರುವ ನೀರು ನೋಡಿ ಖುಷಿ ಪಡುತ್ತಿರುವುದಲ್ಲದೆ, ಬೆಳೆ ಬೆಳೆಯಲು ಎಲ್ಲ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.
ಈ ಹಿಂದೆ ನೀರಿನ ಅಭಾವವಿರುವ ಕಾರಣದಿಂದಾಗಿ ಭತ್ತದ ಕೃಷಿ ಮಾಡದಂತೆ ರೈತರಿಗೆ ಸಲಹೆ ನೀಡಲಾಗಿತ್ತು. ಆದರೆ ಇದೀಗ ನಾಲೆಗಳಿಗೆ ನೀರು ಹರಿಸಿದ್ದರಿಂದ ರೈತರು ಭತ್ತ ಬೆಳೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. 124 ಅಡಿ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಸದ್ಯ 105 ಅಡಿ ನೀರು ಸಂಗ್ರಹ ವಾಗಿದ್ದು, ಸುಮಾರು ಏಳೂವರೆ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೊಡಗಿನಲ್ಲಿ ಮಳೆಯ ಆರ್ಭಟ ತಗ್ಗಿದ್ದು, ಸಣ್ಣ ಪ್ರಮಾಣದಲ್ಲಿ ಮಳೆ ಬರುತ್ತಿರುವುದರಿಂದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.
ಇದೀಗ ಆರಿದ್ರಾ ಮಳೆ ಆರಂಭವಾಗಿದ್ದು, ಈ ಮಳೆ ಅಬ್ಬರಿಸುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. ಜಲಾಶಯದಿಂದ ಈಗ ನಾಲೆಗಳಿಗೆ 3106 ಕ್ಯೂಸೆಕ್ ಹಾಗೂ ನದಿಗೆ 352ನೀರು ಬಿಡಲಾಗಿದೆ. ಇನ್ನು ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯ ಬಗ್ಗೆ ನೋಡುವುದಾದರೆ ಮಳೆಯ ಪ್ರಮಾಣ ಕ್ಷೀಣಿಸಿರುವುದು ಕಂಡು ಬಂದಿದೆ.
ಏನೀ ಅನ್ಯಾಯ, ಕೇಂದ್ರದ ಕಾವೇರಿ ನಿಯಂತ್ರಣ ಸಮಿತಿಯಲ್ಲಿ ಕನ್ನಡಿಗರಿಲ್ಲ
ಆದರೂ ಮಳೆ ಚಿಕ್ಕದಾಗಿ ಸುರಿಯುತ್ತಿದ್ದ, ಶನಿವಾರ(ಜೂ.23) ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದೊಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 7.90 ಮಿ.ಮೀ. ಆಗಿದೆ. ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯ ಬಗ್ಗೆ ನೋಡುವುದಾದರೆ ಈ ಬಾರಿ 1162.77ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 499.62 ಮಿ.ಮೀ ಮಳೆಯಾಗಿದ್ದನ್ನು ಸ್ಮರಿಸಬಹುದಾಗಿದೆ.
ಕಳೆದ ವರ್ಷದ ಮಳೆಗೆ ಹೋಲಿಕೆ ಮಾಡಿದ್ದೇ ಆದರೆ ಈ ಬಾರಿ ಮುಂಗಾರು ಆರಂಭದಲ್ಲೇ ಅಬ್ಬರಿಸಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆ ಸುರಿಯುವುದು ಮಾಮೂಲಿಯಾಗಿರುವುದರಿಂದ ಮಳೆ ಹೆಚ್ಚಳವಾದಷ್ಟು ಬೇಗ ಕೆಆರ್ಎಸ್ ಜಲಾಶಯ ಬೇಗ ಭರ್ತಿಯಾಗುವುದು ಖಚಿತವಾಗಿದೆ.
100 ಅಡಿ ತಲುಪಿದ ಕೆಆರ್ಎಸ್ ನೀರಿನ ಮಟ್ಟ
ಕೊಡಗಿನಲ್ಲಿರುವ ಪುಟ್ಟ ಜಲಾಶಯ, ಚಿಕ್ಲಿಹೊಳೆ ಜಲಾಶಯ ಈಗಾಗಲೇ ಭರ್ತಿಯಾಗಿದೆ. 2,859 ಅಡಿಗಳ ಗರಿಷ್ಟ ಮಟ್ಟವನ್ನು ಹೊಂದಿರುವ ಹಾರಂಗಿ ಜಲಾಶಯದಲ್ಲಿ 2835.51 ಅಡಿಯಷ್ಟು ನೀರಿದೆ. ಮಳೆ ಪ್ರಮಾಣ ಹೆಚ್ಚಿದ್ದೇ ಆದರೆ ಈ ಜಲಾಶಯ ಕೂಡ ಬಹುಬೇಗ ಭರ್ತಿಯಾಗಲಿದೆ.