ಮಂಡ್ಯ: ಪಾರ್ಶ್ವವಾಯುವಿಗೆ ತುತ್ತಾಗಿ ಬಂದ ಸಾಲಗಾರನಿಗೆ ಮನೆಯಲ್ಲಿ ಆಶ್ರಯ ನಿರಾಕರಣೆ
ಮಂಡ್ಯ, ಮಾರ್ಚ್ 22: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕಾಡು ಕೊತ್ತನಹಳ್ಳಿ ಗ್ರಾಮದಲ್ಲಿ ಪಾರ್ಶ್ವವಾಯು ಕಾಯಿಲೆಗೆ ತುತ್ತಾದ ವ್ಯಕ್ತಿಯೊಬ್ಬರಿಗೆ ಮನೆಯಲ್ಲಿ ಆಶ್ರಯ ನಿರಾಕರಿಸಿದ ಘಟನೆ ನಡೆದಿದೆ.
ಆದರೆ, ಮನೆಯವರಿಂದ ಆಶ್ರಯ ನಿರಾಕಣೆಗೆ ಸ್ವತಃ ಆತನೇ ಕಾರಣನೂ ಆಗಿದ್ದಾನೆಂದು ತಿಳಿದುಬಂದಿದೆ. ಕೊತ್ತನಹಳ್ಳಿ ಗ್ರಾಮದ ಶಿವರಾಮು (55) ಎಂಬಾತನಿಗೆ ಸಾಲ ಮಾಡುವ ಚಟ. ಸಾಲ ಮಾಡಿ ಸಾಲಗಾರರ ಕಾಟದಿಂದ ಮುಕ್ತನಾಗಲು ಗ್ರಾಮದಲ್ಲಿದ್ದ 5 ಎಕರೆ ಜಮೀನನ್ನು ಮಾರಿ, ಊರಿನಲ್ಲೇ ಹೆಂಡತಿ ಮಕ್ಕಳನ್ನು ಬಿಟ್ಟು 15 ವರ್ಷದ ಹಿಂದೆಯೇ ಬೆಂಗಳೂರು ಸೇರಿಕೊಂಡಿದ್ದನು.
ಯುವತಿಗೆ ಕಪಾಳಮೋಕ್ಷ ಪ್ರಕರಣ; ವರದಿ ಕೇಳಿದ ಮಂಡ್ಯ ಎಸ್ಪಿ
ಹೀಗಿರುವಾಗಲೇ ಆತ ಕಳೆದ ಒಂದು ವರ್ಷದಿಂದ ಪಾರ್ಶ್ವವಾಯುಗೆ ತುತ್ತಾಗಿದ್ದು, ನಡೆದಾಡಲು ಆಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಆತ ಹೇಗೋ ಕಳೆದ ನಾಲ್ಕು ದಿನಗಳ ಹಿಂದೆ ಊರಿಗೆ ಬಂದಿದ್ದು, ತನ್ನ ಮನೆಯ ಬಳಿ ಸಾಯಲು ಅವಕಾಶ ಮಾಡಿಕೊಡಿ ಎಂದು ಪತ್ನಿ ಹಾಗೂ ತನ್ನ ಓರ್ವ ಪುತ್ರ ಮತ್ತು ಪುತ್ರಿಯನ್ನು ಕೇಳಿಕೊಂಡಿದ್ದಾನೆ.
ಆದರೆ, ಇಲ್ಲಿದ್ದಾಗಲೇ ನಮ್ಮನ್ನು ಸಾಯಿಸಿ ಬದುಕಿದ್ದ ನೀನು ಈಗ ಎಷ್ಟು ಗೋಗರೆದರೂ ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೆಂಡತಿ ಮತ್ತು ಮಕ್ಕಳು ಹೇಳುತ್ತಿದ್ದಾರೆ.
""ಹೆತ್ತ ತಂದೆ ಎಂಬುದನ್ನೂ ನೋಡದೆ ಮನೆಗೆ ಸೇರಿಸಿಕೊಳ್ಳದ ಮಕ್ಕಳಿಗೆ ಅಪ್ಪನ ಕಂಡರೆ ಯಾಕಿಷ್ಟು ದ್ವೇಷ ಎಂದರೆ, ಶಿವರಾಮು ಆಗ 5 ಎಕರೆಗೂ ಹೆಚ್ಚಿನ ಜಮೀನು ಹೊಂದಿದ್ದರು. ಪತ್ನಿ ಪ್ರಭಾವತಿ, ಮಗ ಅಕ್ಷಯ್, ಮಗಳು ಅಮೃತರ ಜೊತೆ ನೆಮ್ಮದಿಯಾಗಿ ಬದುಕಬಹುದಿತ್ತು. ಆದರೆ ಕೈ ತುಂಬಾ ಸಾಲ ಮಾಡಿಕೊಂಡು ಹದಿನೈದು ವರ್ಷಗಳ ಹಿಂದೆಯೇ ಜಮೀನನ್ನು ಮಾರಾಟ ಮಾಡಿ ಹೆಂಡತಿ ಮಕ್ಕಳು ಇರುವ ಮನೆ ಮೇಲೂ ಸಾಲ ತೆಗೆದುಕೊಂಡು ಬೆಂಗಳೂರನ್ನು ಸೇರಿಕೊಂಡಿದ್ದನು.''
""ನಂತರ ಮನೆ ಕಡೆ ತಿರುಗಿಯೂ ನೋಡಿಲ್ಲ. ಆದರೆ ಪತ್ನಿ ಮತ್ತು ಮಕ್ಕಳು ದುಡಿದು ಸಾಲ ತೀರಿಸಿ ಮತ್ತೆ ಮನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಕ್ಕಳನ್ನು ಜವಾಬ್ದಾರಿಯಿಂದ ಬೆಳೆಸಬೇಕಾದ ಅಪ್ಪನೇ, ಇದ್ದ ಆಸ್ತಿ ಎಲ್ಲವನ್ನೂ ಕಳೆದು ಈಗ ನಡೆದಾಡಲು ಆಗದಂತಹ ಸ್ಥಿತಿಯಲ್ಲಿ ಬಂದು ಆಶ್ರಯ ಕೊಡಿ ಎಂದರೆ ಹೇಗೆ ಆಗುತ್ತದೆ? ಇಷ್ಟು ವರ್ಷ ನಾವು ಅಪ್ಪ ಇಲ್ಲ ಎಂದೇ ಬದುಕಿದ್ದೇವೆ. ಮುಂದೆಯೂ ಹಾಗೆಯೇ ಬದುಕುತ್ತೇವೆ'' ಎಂದು ಶಿವರಾಮು ಮಗಳು ಅಮೃತ ಹೇಳಿದ್ದಾರೆ.
ಶಿವರಾಮು ಅಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಆಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದರು. ಆದರೆ ಅಲ್ಲಿ ಕಳೆದ ಹಲವು ತಿಂಗಳುಗಳಿಂದ ಪ್ರತಿ ತಿಂಗಳಿಗೆ 10 ಸಾವಿರ ರೂ. ಹಣ ಕಟ್ಟಲಾಗದ್ದರಿಂದ ಆಶ್ರಮದವರು ಕಳೆದ ನಾಲ್ಕು ದಿನಗಳ ಹಿಂದೆ ಕೊತ್ತನಹಳ್ಳಿ ಗ್ರಾಮಕ್ಕೆ ಕರೆತಂದು ಬಿಟ್ಟು ಹೋಗಿದ್ದಾರೆ. ಇನ್ನೇನು ಮಕ್ಕಳು ಮಡದಿ ಎಲ್ಲರೂ ಇದ್ದಾರೆ. ತನ್ನ ಮನೆಯಲ್ಲಿ ಸಾಯಬಹುದು ಎಂದುಕೊಂಡಿದ್ದ ಶಿವರಾಮುಗೆ ನಿರಾಶೆ ಕಾದಿದೆ.
Recommended Video
ಈ ವೇಳೆ ಗ್ರಾಮದ ಕೆಲವರು ಸೇರಿಕೊಂಡು ತಮ್ಮದೇ ಮನೆಯ ಜಗುಲಿಯ ಮೇಲೆ ಆಶ್ರಯ ನೀಡಿದ್ದಾರೆ. ತಾನು ಆಗ ತಪ್ಪು ಮಾಡಿದ್ದೀನಿ ಈಗ ತನ್ನ ಬಳಿ ಏನೂ ಇಲ್ಲ. ಮನೆಯಲ್ಲಿ ನಾನು ಕೊನೆಯ ದಿನಗಳನ್ನು ಕಳೆಯಲು ಅವಕಾಶ ನೀಡಿ ಎಂದು ಮಕ್ಕಳಲ್ಲಿ ಮನವಿ ಮಾಡುತ್ತಿದ್ದರೂ ಈತನನ್ನು ಕ್ಷಮಿಸಲು ಮನೆಯವರು ಸಿದ್ಧರಿಲ್ಲ.