ಮಂಡ್ಯ ಜಿಲ್ಲೆಯಲ್ಲಿ ದೇಶ ವಿಭಜನೆಯ ಕರಾಳ ದಿನದ ಛಾಯಾಚಿತ್ರಗಳ ಪ್ರದರ್ಶನ
ಮಂಡ್ಯ, ಆಗಸ್ಟ್, 13: ನಗರದ ಸಾರಿಗೆ ಬಸ್ ನಿಲ್ದಾಣ ಆವರಣದಲ್ಲಿ ಸ್ವಾತಂತ್ರ್ಯ ಸಂದರ್ಭದಲ್ಲಿ ಆದ ಕರಾಳ ನೆನಪು ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶ ವಿಭಾಗದ ಕರಾಳದ ನೆನಪು ಛಾಯಾಚಿತ್ರಗಳ ಪ್ರದರ್ಶನಕ್ಕೆ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದೇಶ ವಿಭಜನೆಯ ಸಂದರ್ಭದಲ್ಲಿ ಅಪಾರ ಪ್ರಮಾಣದ ಸಾವು, ನೋವುಗಳು ಆಗಿದ್ದವು. ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಆ ಸಂದರ್ಭದಲ್ಲಿ ಲಕ್ಷಾಂತರ ಜನರು ರೈಲು, ಹಡಗು, ವಾಹನಗಳ ಮೇಲೆ ಸಂಚರಿಸುತ್ತಿದ್ದು, ಅದೇ ದೃಶ್ಯಗಳನ್ನು ಇಂದು ಪ್ರದರ್ಶಿಸಲಾಗಿದೆ. ಇವುಗಳನ್ನು ಇಂದಿನ ಯುವಜನತೆ ವೀಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ಭಾರತ ವಿಭಜನೆಯು ಮನುಕುಲದ ಇತಿಹಾಸದಲ್ಲಿಯೇ ಎಂದೂ ಕೇಳರಿಯದ ಬಲವಂತ ಮಹಾ ಮಾನವ ವಲಸೆಯ ವ್ಯಾಕುಲದ ಕಥೆಯಾಗಿದೆ. ಲಕ್ಷಾಂತರ ಜನರು ತಮಗೆ ಗೊತ್ತಿಲ್ಲದ ಜಾಗಗಳಿಗೆ ಜೀವನ ಕಟ್ಟಿಕೊಳ್ಳಲು, ಹೊರಟ ಘಟನೆಗಳನ್ನು ಈ ಪ್ರದರ್ಶನ ನೆನಪಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ನಗರಸಭೆ ಆಯುಕ್ತ ಆರ್. ಮಂಜುನಾಥ್ ಅವರು ಮಾತನಾಡಿ, "ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಂತಹ ಸಂದರ್ಭದಲ್ಲಿ ದೇಶ ವಿಭಜನೆ ಆಯಿತು. ಆ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತಿದ್ದರು. ಅಂದಿನ ಕಾಲದಲ್ಲಿ ಸಂಚಾರದ ವ್ಯವಸ್ಥೆ ಸರಿ ಇರಲಿಲ್ಲ. ಆದ ಕಾರಣ ವಲಸೆ ಹೋಗುವಂತಹ ಸಂದರ್ಭದಲ್ಲಿ ಮಳೆ, ಗಾಳಿ, ಬಿಸಿಲಿಗೆ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಆ ಘಟನೆಯನ್ನು ಜನಸಾಮಾನ್ಯರು ನೆನಪು ಮಾಡಿಕೊಂಡು ಗೌರವ ಸಲ್ಲಿಸಬೇಕು ಎಂಬ ಮೂಲ ಉದ್ದೇಶದಿಂದ ಛಾಯಾಚಿತ್ರ ಪ್ರದರ್ಶನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ," ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ್ಯೆ ಮೀನಾಕ್ಷಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ ವಿಭಾಗ) ರುದ್ರೇಗೌಡ, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು, ನಗರಸಭಾ ಸದಸ್ಯರುಗಳಾದ ನಾಗೇಶ್, ಶ್ರೀಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.