ಮಾಜಿ ಸಚಿವ ಚಲುವರಾಯಸ್ವಾಮಿ ಅಣ್ಣನ ಮಗನಿಂದ ರೈತನ ಮೇಲೆ ಹತ್ಯೆ ಯತ್ನ?
ಮಂಡ್ಯ, ಸೆಪ್ಟೆಂಬರ್ 5: ಮಂಡ್ಯದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಅಣ್ಣನ ಮಗ ದರ್ಪ ಮೆರೆದಿದ್ದು, ರೈತ ಕುಟುಂಬದ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಇಡೀ ಕುಟುಂಬವನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಇಂದು ನಡೆದಿದೆ.
ನಾಗಮಂಗಲದ ಇಜ್ಜಲಘಟ್ಟ ಗ್ರಾಮದಲ್ಲಿ ಕಲ್ಲು ಕ್ವಾರೆ ನಡೆಸಲು ಮರಿಗೌಡ ಕುಟುಂಬ ಜಮೀನು ನೀಡಲಿಲ್ಲ ಎಂಬ ಕಾರಣಕ್ಕಾಗಿ ಹೀಗೆ ನಡೆದುಕೊಳ್ಳಲಾಗಿದೆ. ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಅಣ್ಣನ ಮಗ ಉಮೇಶ್ ಜಮೀನಿನಲ್ಲಿ ಟ್ರ್ಯಾಕ್ಟರ್ ಹರಿಸಿ ಬೆಳೆಯನ್ನು ಹಾನಿ ಮಾಡಿದ್ದು, ರೈತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಇಜ್ಜಲಘಟ್ಟದಲ್ಲಿ ಮರಿಗೌಡ ಅವರ ಜಮೀನನ ಪಕ್ಕದ ಜಮೀನಿನಲ್ಲಿ ಕಲ್ಲು ಕ್ವಾರೆ ಮಾಡಲು ಉಮೇಶ್ ಎಂಬುವವರು ಭೂಮಿ ಖರೀದಿಸಿದ್ದರು. ಕ್ವಾರೆ ನಡೆಸಲು ಮತ್ತಷ್ಟು ಜಮೀನು ಬೇಕು ಎಂದಾಗ ಮರಿಗೌಡ ಅವರ ಬಳಿ ಜಮೀನು ಕೊಡುವಂತೆ ಉಮೇಶ್ ಕೇಳಿದ್ದ ಎನ್ನಲಾಗಿದೆ. "ಜಮೀನಿನಲ್ಲಿ ತೆಂಗಿನ ಗಿಡ ನೆಟ್ಟಿದ್ದೇನೆ. ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಂಡಿದ್ದೇನೆ. ಹಾಗಾಗಿ ಜಮೀನನ್ನು ಬಿಟ್ಟುಕೊಡುವುದಿಲ್ಲ" ಎಂದು ಮರಿಗೌಡ ಅವರು ಉಮೇಶ್ ಗೆ ಹೇಳಿದ್ದರು.
ಇದಕ್ಕೆ ಕೋಪಗೊಂಡ ಉಮೇಶ್ ತನ್ನ ಬೆಂಬಲಿಗರೊಂದಿಗೆ ಇಂದು ಬೆಳಿಗ್ಗೆ ಮರಿಗೌಡರ ಜಮೀನಿಗೆ ನುಗ್ಗಿ ತೆಂಗಿನ ಸಸಿಗಳನ್ನು ಕಿತ್ತು ಹಾಕಿ, ಹನಿ ನೀರಾವರಿ ಪೈಪ್ ಗಳನ್ನು ಧ್ವಂಸ ಮಾಡಿದ್ದಾನೆ. ಮರಿಗೌಡ, ಅವರ ಪತ್ನಿ, ಮಗಳು ಇದನ್ನು ತಡೆಯಲು ಮುಂದಾದಾಗ ಅವರೆಲ್ಲರ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲ್ಲಲು ಯತ್ನಿಸಿದ್ದಾನೆ. ನಂತರ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಆದರೆ ಈ ಬಗ್ಗೆ ಉಮೇಶ್ ಪ್ರತಿಕ್ರಿಯಿಸಿ, "ನನಗೂ ಈ ಘಟನೆಗೂ ಸಂಬಂಧವಿಲ್ಲ. ನಾನು ರಾಜಿ ಪಂಚಾಯ್ತಿ ಮಾಡಲೆಂದು ಸ್ಥಳಕ್ಕೆ ಹೋಗಿದ್ದೆ ಅಷ್ಟೇ. ನಾನು ಗಲಾಟೆ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ರೈತ ಕುಟುಂಬದ ಮೇಲೆ ದರ್ಪ ಮೆರೆದಿರುವ ದೃಶ್ಯವನ್ನು ಸ್ಥಳೀಯರು ಮೊಬೈಲಲ್ಲಿ ಸೆರೆ ಹಿಡಿದಿದ್ದಾರೆ. ಈ ಕುರಿತು ಸದ್ಯ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.