ದೇವೇಗೌಡರೇ ವಿರುದ್ಧವಾಗಿ ನಿಂತರೂ ಗೆಲುವು ನನ್ನದೇ: ಜಮೀರ್ ಅಹಮದ್
ಮದ್ದೂರು, ಫೆಬ್ರವರಿ 26: ದೇವೇಗೌಡ ಸೇರಿದಂತೆ ಜಮ್ಮು- ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಅವರನ್ನು ತಂದು ನಿಲ್ಲಿಸಿದರೂ ಚಾಮರಾಜಪೇಟೆಯಲ್ಲಿ ನನ್ನ ಗೆಲುವು ನಿಶ್ಚಿತ. ನಾನೇನಾದರೂ ಅಲ್ಲಿ ಸೋತರೆ ನನ್ನ ತಲೆ ಕತ್ತರಿಸಿ ಮಾಧ್ಯಮಕ್ಕೆ ಕೊಡುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಮತ್ತೊಮ್ಮೆ ಸವಾಲು ಹಾಕಿದರು.
ಪಟ್ಟಣದ ರಾಂ ರಹೀಂ ನಗರದಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಭೆ ಉದ್ಘಾಟಿಸಿ ಮಾತನಾಡಿ, ನಾನು ಚಾಮರಾಜಪೇಟೆ ಬಿಟ್ಟು ಎಲ್ಲಿಯೂ ಸ್ಪರ್ಧಿಸುವುದಿಲ್ಲ. ರಾಮನಗರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾನೇನು ಕುಮಾರಸ್ವಾಮಿ ಅಲ್ಲ. ನಾನು ಅಲ್ಲೇ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಟಿಕೆಟ್ ಸಿಕ್ಕಲಿಲ್ಲ ಎಂದರೆ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡಲು ಸಿದ್ಧ ಎಂದು ಹೇಳಿದರು.
ಚೆಲುವರಾಯಸ್ವಾಮಿ ಮನೆಯಲ್ಲಿ ಸಿದ್ದರಾಮಯ್ಯ ಭೋಜನ, ಮಾತುಕತೆ!
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 25ರಿಂದ 30 ಸ್ಥಾನಗಳಲ್ಲಿ ಗೆಲ್ಲುವುದೇ ಕಷ್ಟವಾಗಿದ್ದು, ಬಿಎಸ್ ಪಿ ಜತೆ ಜೆಡಿಎಸ್ ಮೈತ್ರಿಯಿಂದ ಯಾವುದೇ ಪ್ರಯೋಜನವಿಲ್ಲ. ರಾಜ್ಯದಲ್ಲಿ ಬಿಎಸ್ ಪಿ ಕಳೆದ ಚುನಾವಣೆಯಲ್ಲಿ 1 ಸಾವಿರಕ್ಕಿಂತ ಹೆಚ್ಚು ಮತ ಯಾವ ಕ್ಷೇತ್ರದಲ್ಲೂ ಪಡೆದಿಲ್ಲ ಎಂದು ಲೇವಡಿ ಮಾಡಿದರು.
160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು
ಸಿದ್ದರಾಮಯ್ಯ ಅವರು ಮಾಸ್ ಲೀಡರ್ ಆಗಿದ್ದು, ಅವರನ್ನು ಸೋಲಿಸುವುದು ಅಷ್ಟು ಸುಲಭವೇನಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ. ರಾಜ್ಯದ ಜನತೆಗೆ ನೆಮ್ಮದಿ ಮುಖ್ಯ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ 160ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದ್ದು, ಮತ್ತೆ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ರಾಜ್ಯಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸೇರ್ಪಡೆ
ಶಾಸಕ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಜೆಡಿಎಸ್ ಶಾಸಕರು ಈಗಾಗಲೇ ಕಾಂಗ್ರೆಸ್ನಲ್ಲಿದ್ದೇವೆ. ರಾಜ್ಯಸಭೆ ಚುನಾವಣೆ ಮಾರ್ಚ್ 23ರಂದು ನಿಗದಿಯಾಗಿದ್ದು, ಇದಾದ ಬಳಿಕ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರುತ್ತೇವೆ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಬೇಡ ಎಂದರು.
ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸಿ
ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅಥವಾ ಮಧು ಜಿ.ಮಾದೇಗೌಡ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೇ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಶ್ರಮಿಸಬೇಕು. ಈ ವಿಚಾರದಲ್ಲಿ ಯಾವುದೇ ಒಡಕು ಬೇಡ ಎಂದು ಚಲುವರಾಯಸ್ವಾಮಿ ಹೇಳಿದರು.
ರಾಜ್ಯಸಭೆ ಚುನಾವಣೆಯ ಗಡುವು
ರಾಜ್ಯಸಭಾ ಚುನಾವಣೆ ನಂತರ ಕಾಂಗ್ರೆಸ್ ಗೆ ಸೇರ್ಪಡೆ ಆಗುವಂತೆ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ ಎಂಬ ಜೆಡಿಎಸ್ ಬಂಡಾಯ ಶಾಸಕರ ಮಾತಿನಲ್ಲೂ ರಾಜಕೀಯ ಲೆಕ್ಕಾಚಾರ ಇದೆ. ಈ ಹಿಂದೆ ರಾಜ್ಯ ಬಜೆಟ್ ಅಧಿವೇಶನದ ನಂತರ ಕೈ ಪಕ್ಷ ಸೇರುವುದಾಗಿ ಹೇಳಿದ್ದರು. ಇದೀಗ ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಚುನಾವಣೆ ಮೇಲೆ ಗಡುವು ಹೇಳುತ್ತಿದ್ದಾರೆ.