ಮಂಡ್ಯ ನಗರದ ಹಲವೆಡೆ ಬೃಹತ್ ಮರಗಳ ಹನನ; ಪರಿಸರ ಪ್ರೇಮಿಗಳ ಅಸಮಾಧಾನ
ಮಂಡ್ಯ, ಆಗಸ್ಟ್ 23: ನಗರದ ಕೆಲವು ಬಡಾವಣೆಗಳಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ಮರಗಳನ್ನು ಕೆಳಕ್ಕೆ ಉರುಳಿಸಲಾಗುತ್ತಿದೆ. ರಸ್ತೆ ಕಾಮಗಾರಿಗಳಿಗೆ ಹಾನಿಯಾಗುತ್ತದೆ ಎಂಬ ಉದ್ದೇಶದಿಂದ ಹಾಗೂ ತಡೆಗೋಡೆ ನಿರ್ಮಾಣಕ್ಕೆಂದು ಬೃಹದಾಕಾರವಾಗಿ ಬೆಳೆದಿದ್ದ ಮರಗಳನ್ನು ಕಟಾವು ಮಾಡಿ ಧರೆಗೆ ಉರುಳಿಸಲಾಗುತ್ತಿರುವುದನ್ನು ಪರಿಸರ ಪ್ರೇಮಿಗಳು ಖಂಡಿಸಿದ್ದಾರೆ. ತೀವ್ರ ವಿರೋಧದ ನಡುವೆಯೂ ಮರಗಳನ್ನು ನೆಲಕ್ಕುರುಳಿಸಿರುವ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಪರಿಸರವಾದಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಮಂಡ್ಯ ನಗರದ 100 ಅಡಿ ರಸ್ತೆ, ಅಶೋಕ ನಗರ, ಬನ್ನೂರು ರಸ್ತೆ ಸೇರಿದಂತೆ ವಿವಿಧೆಡೆ ಬೆಳೆದು ನಿಂತಿರುವ ಮರಗಳನ್ನು ನೆಲಕ್ಕುರಿಳಿಸಿದ್ದಾರೆ. ಕಟ್ಟಡ ಕಟ್ಟುವ ಉದ್ದೇಶದಿಂದಲೇ ಮರಗಳನ್ನು ಕಡಿಯುತ್ತಿರುವುದು ದುರಂತ, ಬದಲಿಗೆ ಮರಗಳನ್ನು ಕಡಿಯುವುದಾದರೆ ಇವರಿಗೆ ರಾಜಕೀಯ ಪ್ರಭಾವ ಅಥವಾ ಒತ್ತಡ ಇರಬಹುದೇ? ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ದಸರಾ ಮಹೋತ್ಸವ: ಗಜಪಡೆ ಸುರಕ್ಷತೆಗೆ ಸಿಸಿ ಕ್ಯಾಮೆರಾ 'ಕಣ್ಗಾವಲು'
ಈ ಘಟನೆಯು, 'ಕಳ್ಳನಿಗೆ ಒಂದು ಪಿಳ್ಳೆ ನೆವ' ಎಂಬಂತೆ ವಿದ್ಯುತ್ ಲೈನ್ಗಳ ಮೇಲೆ ಬೀಳುತ್ತಿದೆ, ತಗಲುತ್ತಿವೆ ಎಂಬ ಇತ್ಯಾದಿ ಕಾರಣಗಳನ್ನು ನೀಡಿ ಮರಗಳ ಬುಡಕ್ಕೆ ಕೊಡಲಿ ಇಡಲಾಗುತ್ತಿದ್ದು, ತಕ್ಷಣವೇ ಇದನ್ನು ನಿಲ್ಲಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಸಂಪೂರ್ಣ ಮರವನ್ನೆ ಕೆಡವುತ್ತಿರುವುದಕ್ಕೆ ಆಕ್ರೋಶ
ವಿದ್ಯುತ್ ತಂತಿಗಳಿಗೆ ಸೋಕುತ್ತಿದ್ದರೆ ಅಂತಹ ಮರಗಳ ಕೊಂಬೆಗಳನ್ನು ಮಾತ್ರ ಕಡಿಯಬೇಕು. ಕಟಾವು ಮಾಡುವ ಸಂದರ್ಭದಲ್ಲಿ ಸೆಸ್ಕಾಂ ಮತ್ತು ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ನೌಕರರು ಸ್ಥಳದಲ್ಲಿರಬೇಕು. ಆಗಮಾತ್ರ ಪರಿಸರಕ್ಕೆ ನ್ಯಾಯ ಕೊಟ್ಟಂತಾಗುತ್ತದೆ. ಏಕಾಏಕಿ ಬೃಹದಾಕಾರದ ಮರಗಳನ್ನೇ ಕಡಿಯುವ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕು. ಈ ರೀತಿ ಮರಗಳನ್ನು ಕಟಾವು ಮಾಡುವವರಿಗೆ ಸಸಿಗಳನ್ನು ನೆಡುವ ಶಿಕ್ಷೆ ವಿಧಿಸಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.
ಬೆಂಗಳೂರು: ಕೊತ್ತನೂರು ಕೆರೆಯಲ್ಲಿ ಮೀನುಗಳ ಮಾರಣಹೋಮ- ಕಾರಣವೇನು?
ಮರಗಳ ಉಳಿವಿಗೆ ಹೋರಾಟ ಅಗತ್ಯ
ಮಳೆ, ಗಾಳಿ ಸಂದರ್ಭದಲ್ಲಿ ಮರಗಳ ಕೊಂಬೆಗಳು ಬೀಳುತ್ತವೆ. ಅದನ್ನೇ ನೆಪಮಾಡಿಕೊಂಡು ಹತ್ತಾರು ವರ್ಷಗಳಿಂದ ಬೆಳೆದಿರುವ ಮರಗಳನ್ನೇ ಕಡಿಯುವುದು ತರವಲ್ಲ. ಇದು ಪ್ರಕೃತಿಯ ಮೇಲೆ ಆಗುವ ದೌರ್ಜನ್ಯ. ನಮ್ಮ ಮುಂದೆಯೇ ಇಂತಹ ಘಟನೆಗಳು ನಡೆಯುತ್ತಿದ್ದು, ನಿಲ್ಲಿಸಲು ಹೋದರೆ ನಮಗೆ ಪ್ರಶ್ನೆ ಮಾಡುತ್ತಾರೆ, ಇಂತಹವರಿಗೆ ಕಾನೂನಿನಡಿ ಕ್ರಮ ತೆಗೆದುಕೊಳ್ಳಬೇಕು. ಪರಿಸರವಾದಿಗಳ ಗಮನಕ್ಕೆ ತಂದು ಮರಗಳ ಉಳಿವಿಗೆ ಹೋರಾಟ ರೂಪಿಸಬೇಕಿದೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಒಣಗಿದ ಮರಗಳನ್ನು ಮಾತ್ರ ಕಡಿಯಲಿ
ತಮ್ಮ ಮನೆಯ ಹತ್ತಿರದ ದೊಡ್ಡದೊಡ್ಡ ಮರಗಳನ್ನು ರಾಜಕೀಯ ಪ್ರಭಾವ ಬಳಸಿಕೊಂಡು ಕಟಾವು ಮಾಡಿಸುವುದು ಸರಿಯಲ್ಲ, ಕೇವಲ ರಾಜಕಾರಣಿಗಳ ಮಾತಿಗೆ ಬೆಲೆಕೊಟ್ಟು ಮರಗಳನ್ನು ಹರಣ ಮಾಡುವುದು ಇನ್ನಾದರೂ ನಿಲ್ಲಬೇಕು. ಅವರ ಮನೆಯ ತಡೆಗೋಡೆಗಳಿಗೆ ಮತ್ತು ತಡೆಗೋಡೆ ನಿರ್ಮಾಣಕ್ಕೆಂದು ಇರುವ ಮರಗಳನ್ನು ಕಟಾವು ಮಾಡುವುದನ್ನು ತಪ್ಪಿಸಬೇಕಿದೆ. ನಗರದಾದ್ಯಂತ ಈಗಾಗಲೇ ಮರಗಳಲ್ಲಿ ಒಣಕೊಂಬೆಗಳು ಹೆಚ್ಚಿನ ಅಪಾಯ ತಂದೊಡ್ಡುತ್ತಿವೆ, ಅಂತಹವುಗಳನ್ನು ಮಾತ್ರ ಕಟಾವು ಮಾಡಿದರೆ ಅಪಾಯವಿಲ್ಲ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್. ರವೀಂದ್ರ ತಿಳಿಸಿದ್ದಾರೆ.
ಜನರಿಂದಲೇ ಮರ ಕಡಿಯುವಂತೆ ಅರ್ಜಿ
ನಗರದ ಕೆಲವು ಬೀದಿಗಳಲ್ಲಿ ಮರಗಳು ಅಪಾಯ ತಂದೊಡ್ಡುತ್ತಿವೆ ಎಂಬ ಅರ್ಜಿಗಳನ್ನು ಕೆಲವರು ಕೊಡುತ್ತಿದ್ದಾರೆ, ಮಳೆಯಿಂದ ಈಗಾಗಲೇ ನೆಲಕ್ಕೆ ಉರುಳಿರುವ ಮರಗಳನ್ನು ಹರಾಜು ಮಾಡಲಾಗಿದೆ. ಅಪಾಯ ಸ್ಥಿತಿಯೊಡ್ಡುತ್ತಿರುವ ಸ್ಥಳಗಳನ್ನು ಪರಿಶೀಲನೆ ಮಾಡಿ ಅಂತಹ ಮರಗಳ ಕೊಂಬೆಗಳನ್ನು ಕಟಾವು ಮಾಡಲಾಗುತ್ತಿದೆ. ಪ್ರಾಣಾಪಾಯ ಉಂಟು ಮಾಡುವ ಮರಗಳ ಕೊಂಬೆಗಳನ್ನು ಮಾತ್ರ ಕಟಾವು ಮಾಡಲಾಗುತ್ತಿದೆ. ಹಾಗಾಗಿ ಪರಿಸರ ಪ್ರೇಮಿಗಳು ಆತಂಕ ಪಡಬೇಕಿಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.