ಈ ಬಾರಿ ಕೆಆರ್ ಎಸ್ನಲ್ಲಿ ನೀರಿಗಿಲ್ಲ ಬರ, ಭಯಪಡಬೇಕಾಗಿಲ್ಲ ಜನ
ಮಂಡ್ಯ, ಏಪ್ರಿಲ್ 25: ಈ ಬಾರಿಯ ಬೇಸಿಗೆಯನ್ನು ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕೆ.ಆರ್.ಎಸ್. ಜಲಾಶಯದ ನೀರನ್ನು ಬಳಸುವ ಎಲ್ಲರೂ ನೆಮ್ಮದಿಯಾಗಿ ಕಳೆಯಬಹುದು. ಏಕೆಂದರೆ, ಬೇಸಿಗೆ ಕಳೆಯುವುದಕ್ಕೆ ಇನ್ನೂ ಒಂದೂವರೆ ತಿಂಗಳಿದ್ದು, ಅಲ್ಲಿಯವರೆಗೆ ಯಾವುದೇ ರೀತಿಯಲ್ಲಿಯೂ ಕುಡಿಯುವ ನೀರಿಗೆ ತೊಂದರೆ ಉಂಟಾಗುವುದಿಲ್ಲ.
ಕಳೆದ ವರ್ಷ ಕೊಡಗು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಸುರಿದ ಮಳೆಗೆ ಕೆಆರ್ ಎಸ್ ಜಲಾಶಯ ಭರ್ತಿಯಾಗುವುದರೊಂದಿಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಕೆಲವು ವರ್ಷಗಳಿಂದ ಭರ್ತಿಯಾಗದ ಜಲಾಶಯ ಭರ್ತಿಯಾಗಿತ್ತು. ಹೀಗಾಗಿ ಜಲಾಶಯದ ವ್ಯಾಪ್ತಿಯ ಜನ ನೆಮ್ಮದಿಯುಸಿರು ಬಿಟ್ಟಿದ್ದರು.
100 ಅಡಿಗೆ ಕುಸಿದ ಕೆಆರ್ಎಸ್ ನೀರಿನ ಮಟ್ಟ
ಈ ಬಾರಿ ಕೊಡಗಿನಲ್ಲಿ ತಡವಾಗಿ ಮಳೆ ಸುರಿಯುತ್ತಿದೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಮಳೆ ಬರುತ್ತಿತ್ತು. ಆದರೆ ಈ ಸಲ ತಡವಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಇದರಿಂದ ಕಾವೇರಿ ನದಿಯಲ್ಲಿ ಕುಸಿದಿದ್ದ ನೀರಿನ ಪ್ರಮಾಣ ನಿಧಾನವಾಗಿ ಚೇತರಿಕೆ ಕಾಣುವಂತಾಗಿದೆ.
ಜಲಾಶಯದಲ್ಲಿ ಸದ್ಯಕ್ಕೆ 91.68 ಅಡಿಯಷ್ಟು ನೀರಿದೆ
ಮೇ ತಿಂಗಳಲ್ಲಿ ಮಳೆ ಸುರಿದಿದ್ದೇ ಆದರೆ ನೀರಿಗೆ ಅಭಾವ ಕಾಣಿಸದು. ವಾಡಿಕೆಯಂತೆ ಜೂನ್ ನಿಂದ ಮುಂಗಾರು ಆರಂಭವಾಗಬೇಕು. ಹಾಗೇನಾದರೂ ಆದರೆ ಕೆ.ಆರ್.ಎಸ್ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೆ, ನೀರಿನ ಸಮಸ್ಯೆ ಕಾಣಿಸಿಕೊಳ್ಳದು. ಈಗಿನ ಬೇಸಿಗೆಯನ್ನು ನಿಭಾಯಿಸುವುದಕ್ಕೆ ಅಗತ್ಯವಿರುವಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಅಲ್ಲದೆ ಬೆಳೆಗಳಿಗೂ ಹರಿಸಲು ಸಾಧ್ಯವಾಗುವಷ್ಟು ನೀರು ಜಲಾಶಯದಲ್ಲಿ ಇರುವ ಕಾರಣ ತೊಂದರೆ ಪಡುವ ಅಗತ್ಯ ಇಲ್ಲ. 124 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯಕ್ಕೆ 91.68 ಅಡಿಯಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 73.53 ಅಡಿಯಷ್ಟೇ ನೀರಿತ್ತು. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷದ ಬೇಸಿಗೆಯಲ್ಲಿ 18.35 ಅಡಿ ನೀರು ಹೆಚ್ಚು ಸಂಗ್ರಹ ಆಗಿರುವುದು ನೆಮ್ಮದಿ ತಂದಂತಾಗಿದೆ.
ಮೇ ತಿಂಗಳ 8ರವರೆಗೆ ನೀರು ಹರಿಯಲಿದೆ
ಇನ್ನು ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿರುವ ಕಾರಣದಿಂದ ಜಲಾಶಯಕ್ಕೆ 169 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ವಿವಿಧ ಉದ್ದೇಶಕ್ಕೆ ಬೇಸಿಗೆ ಹಂಗಾಮಿನ ಬೆಳೆಗೂ ಸೇರಿದಂತೆ ಜಲಾಶಯದಿಂದ 3628 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈಗಾಗಲೇ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಏಪ್ರಿಲ್ 21ರಿಂದ ನೀರು ಹರಿದು ಹೋಗುತ್ತಿದ್ದು ಮೇ ತಿಂಗಳ 8ರವರೆಗೆ ನೀರು ಹರಿಯಲಿದೆ. ಜಲಾಶಯದಿಂದ ವಿಶ್ವೇಶ್ವರಯ್ಯ ಮುಖ್ಯ ನಾಲೆ ಮತ್ತು ಅದರ ಉಪ ನಾಲೆಗಳು (ಸಂಪರ್ಕ ನಾಲೆ ಹೊರತುಪಡಿಸಿ), ಎಡದಂಡೆ ಕೆಳಮಟ್ಟದ ನಾಲೆ, ಕಾವೇರಿ ಶಾಖಾ ನಾಲೆ ಹಳೆ ಮದ್ದೂರು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ, ಕೌಡ್ಲೆ ಉಪ ನಾಲೆ, (9ನೇ ವಿತರಣಾ ನಾಲೆವರೆಗೆ), ಕೆರಗೋಡು ಶಾಖಾ ನಾಲೆ (21ನೇ ವಿತರಣಾ ನಾಲೆವರೆಗೆ). ಹೊಸ ಮದ್ದೂರು ಶಾಖೆ ನಾಲೆ (31ನೇ ವಿತರಣಾ ನಾಲೆವರೆಗೆ), ಲೋಕಸರ ಶಾಖಾ ನಾಲೆ, ಹೆಬ್ಬಕವಾಡಿ ಹಾಗೂ ತುರುಗನೂರು ಶಾಖಾ ನಾಲೆ (5ನೇ ವಿತರಣಾ ನಾಲೆವರೆಗೆ) ನೀರನ್ನು ಹರಿಸಲಾಗುತ್ತಿದೆ.
ಕೆ ಆರ್ ಎಸ್ ನಲ್ಲಿ ಹೆಚ್ಚು ನೀರಿನ ಸಂಗ್ರಹ : ರೈತರ ಮೊಗದಲ್ಲಿ ಸಂತಸ
ರೈತರು ಬೆಳೆದಿರುವ ಬೆಳೆಗಳ ವಿವರ
ಬೇಸಿಗೆ ಹಂಗಾಮಿನಲ್ಲಿ ಫೆಬ್ರವರಿ 18ರ ವೇಳೆಗೆ ಜಿಲ್ಲೆಯ 1310 ಹೆಕ್ಟೇರ್ನಲ್ಲಿ ಭತ್ತ, 333 ಹೆಕ್ಟೇರ್ನಲ್ಲಿ ರಾಗಿ, 128 ಹೆಕ್ಟೇರ್ನಲ್ಲಿ ಮುಸುಕಿನ ಜೋಳ, 67 ಹೆಕ್ಟೇರ್ನಲ್ಲಿ ಉದ್ದು, 67 ಹೆಕ್ಟೇರ್ನಲ್ಲಿ ನೆಲಗಡಲೆ, 150 ಹೆಕ್ಟೇರ್ನಲ್ಲಿ ಕಬ್ಬು (ತನಿ), 661 ಹೆಕ್ಟರ್ ನಲ್ಲಿ ಕಬ್ಬು (ಕೂಳೆ) ಸೇರಿ 2717 ಹೆಕ್ಟೇರ್ನಲ್ಲಿ ಬೇಸಿಗೆ ಬೆಳೆ ಇದ್ದು, ಈ ಬೆಳೆಗಳ ರಕ್ಷಣೆಗೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.
ನೆಮ್ಮದಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಬಹುದು
ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಮಳೆ ಆರಂಭವಾಗಿ, ಜಲಾಶಯಕ್ಕೆ ಹರಿದು ಬರುವ ಕಾವೇರಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದೇ ಆದರೆ ಕುಡಿಯುವ ನೀರು ಮತ್ತು ರೈತರಿಗೂ ಬೆಳೆ ಬೆಳೆಯಲು ನೀರು ದೊರೆಯಲಿದೆ. ಈ ಬಾರಿ ನೀರಿಗೆ ತೊಂದರೆಯಾಗದಿದ್ದರೆ ರೈತರು ಕೂಡ ನೆಮ್ಮದಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ.