5 ರುಪಾಯಿ ನಾಣ್ಯಗಳನ್ನೇ ಠೇವಣಿ ಕಟ್ಟಿದ ವೈದ್ಯ, ಮಂಡ್ಯದಲ್ಲಿ ನಾಮಪತ್ರ
ಮಂಡ್ಯ, ಏಪ್ರಿಲ್ 23 : ಮಂಡ್ಯದಲ್ಲಿ 5 ರುಪಾಯಿ ವೈದ್ಯ ಎಂದೇ ಖ್ಯಾತಿ ಪಡೆದ ಡಾ.ಶಂಕರೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಾಮಪತ್ರ ಸಲ್ಲಿಸುವ ವೇಳೆ 5 ರುಪಾಯಿ ನಾಣ್ಯಗಳ ಗಂಟನ್ನು ಠೇವಣಿಯಾಗಿ ಕಟ್ಟಿ ಎಲ್ಲರ ಗಮಸ ಸೆಳೆದಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಕೆಲವು ಅಭ್ಯರ್ಥಿಗಳು ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿ, ಠೇವಣಿ ಕಟ್ಟಿರುವ ಸುದ್ದಿ ಕೇಳಿ ಬರುತ್ತಿರುವಾಗಲೇ ಇವರು 5 ರುಪಾಯಿಗಳ ನಾಣ್ಯಗಳನ್ನು ಒಳಗೊಂಡ 10 ಸಾವಿರ ರುಪಾಯಿ ಠೇವಣಿ ಹಣವನ್ನು ನೀಡಿದ್ದಾರೆ. ಚೀಲಗಳಲ್ಲಿ ತುಂಬಿಸಿಕೊಂಡು ತಂದಿದ್ದ ನಾಣ್ಯವನ್ನು ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಈ ವೇಳೆ 10 ಸಾವಿರ ರುಪಾಯಿ ಮೌಲ್ಯದ 5 ರುಪಾಯಿಯ ನಾಣ್ಯಗಳನ್ನು ಸ್ವೀಕರಿಸಿದ ಚುನಾವಣಾಧಿಕಾರಿ, ಬಳಿಕ ಆ ನಾಣ್ಯಗಳನ್ನು ನೋಟುಗಳನ್ನಾಗಿ ಪರಿವರ್ತಿಸಿಕೊಂಡರು. ಯಾವುದೇ ಪಕ್ಷಗಳ ಹಂಗಿಗೆ ಒಳಗಾಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ಇವರು 1.5 ಕೋಟಿ ರುಪಾಯಿಯಷ್ಟು ಆಸ್ತಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. 91.51 ಲಕ್ಷ ರುಪಾಯಿ ಮೌಲ್ಯದ ಸ್ಥಿರಾಸ್ತಿ, 2.66 ಲಕ್ಷ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ನಾಮಪತ್ರ ಸಲ್ಲಿಸುವ ವೇಳೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಇವರು ಶಿವಳ್ಳಿ ಗ್ರಾಮದಲ್ಲಿ 5 ಎಕರೆ ಕೃಷಿ ಜಮೀನು, ನಗರದ ಬಂದೀಗೌಡ ಬಡಾವಣೆಯಲ್ಲಿ ಒಂದು ಮನೆ ಹೊಂದಿದ್ದಾರೆ. ಒಂದು ಷೆವರ್ಲೆ ಬೀಟ್ ಕಾರು, ಒಂದು ಹೋಂಡಾ ಆಕ್ಟಿವಾ ಸ್ಕೂಟರ್ ಅವರ ಬಳಿ ಇರುವುದಾಗಿ ಘೋಷಿಸಿದ್ದಾರೆ.
ಪತ್ನಿ ರುಕ್ಮಿಣಿ ಗೌಡ ಹೆಸರಿನಲ್ಲಿ 12.79 ಲಕ್ಷ ಚರಾಸ್ತಿ ಇದೆ. 450 ಗ್ರಾಂ ಚಿನ್ನ, ಒಂದು ಹೋಂಡಾ ಆಕ್ಟಿವಾ ಸ್ಕೂಟರ್ ಹೊಂದಿದ್ದಾರೆ. ಪುತ್ರಿ ಉಜ್ವಲಾ ಹೆಸರಿನಲ್ಲಿ 94 ಸಾವಿರ ಇದೆ. ಯಾವುದೇ ಸಾಲ ಇಲ್ಲ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವುದು ನಾಮಪತ್ರ ಸಲ್ಲಿಕೆ ವೇಳೆ ಕಂಡು ಬಂದಿದೆ.