ಕೆಂಪಯ್ಯನದೊಡ್ಡಿ ಶಾಲೆಗೆ ಶಿಕ್ಷಣ ಸಚಿವರು ಭೇಟಿ ನೀಡಿದ್ದೇಕೆ?
ಮಂಡ್ಯ, ಜುಲೈ 26: ಕೊರೊನಾ ವೈರಸ್ ರೋಗವು ಶಿಕ್ಷಣ ಕ್ಷೇತ್ರದ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಿದ್ದು, ವಿದ್ಯಾರ್ಥಿಗಳು ಶಾಲೆಗೆ ತೆರಳದೆ ಮನೆಯಲ್ಲಿಯೇ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶಗಳಲ್ಲಿರುವ ಮಕ್ಕಳಿಗೆ ಹಲವು ರೀತಿಯ ಸೌಲಭ್ಯಗಳಿರುವುದರಿಂದ ಅದನ್ನು ಬಳಸಿಕೊಂಡು ಕಲಿಯುತ್ತಿದ್ದಾರೆಯಾದರೂ ಹಳ್ಳಿಗಳಲ್ಲಿರುವ ಬಹುತೇಕ ಮಕ್ಕಳು ವಿವಿಧ ಕಾರಣಗಳಿಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇದನ್ನರಿತ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕೆಂಪಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಮಕ್ಕಳ ಮನೆ ಬಾಗಿಲಿಗೆ ಹೋಗಿ ಬೋಧನೆ ಮತ್ತು ಕಲಿಕಾ ಚಟುವಟಿಕೆಗಳನ್ನು ಹೇಳಿಕೊಡುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡುತ್ತಿದ್ದಾರೆ.
ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್ ದಿನಾಂಕ ಪ್ರಕಟ
ಶಿಕ್ಷಕರ ಈ ಕಾರ್ಯವನ್ನರಿತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಕೆಂಪಯ್ಯನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಸಾಲಿನ ತರಗತಿಗಳ ಪ್ರವಚನಗಳು ನಡೆಯುತ್ತಿಲ್ಲ ಹೀಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದ್ದು, ಇಂತಹ ಸಂದರ್ಭದಲ್ಲಿ ಕೆಂಪಯ್ಯನದೊಡ್ಡಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರ ಕರ್ತವ್ಯ ನಿಷ್ಠೆ ಹಾಗೂ ವೃತ್ತಿ ಪರತೆಯನ್ನು ನಾವು ಗೌರವಿಸಬೇಕಾಗಿದ್ದು, ಇಂತಹ ಆದರ್ಶನೀಯ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಶಾಲೆ ಪುನಾರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಮಾರಕ ಕೊರೊನಾ ವೈರಸ್ ನಿಂದಾಗಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಆಗುತ್ತೊ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಎಳೆದು, ನಿಗದಿತ ಅವಧಿಯಲ್ಲಿ ನಡೆಸಲಾಗಿದೆ. ಮುಂದೂಡಲ್ಪಟ್ಟು ತದನಂತರ ಜೂನ್ನಲ್ಲಿ ಪರೀಕ್ಷೆ ನಡೆಸಲಾಯಿತು. ಇಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲ್ಲ ಮಕ್ಕಳು ನಿರ್ಭೀತರಾಗಿ ಪರೀಕ್ಷೆಯನ್ನು ಎದುರಿಸಿ ರಾಜ್ಯಕ್ಕೆ ಗೌರವ ತಂದುಕೊಟ್ಟ ನಮ್ಮ ಶಾಲಾ ಮಕ್ಕಳಿಗೆ ಸಲ್ಲಬೇಕು.
ಇದು ಕೇವಲ ಪರೀಕ್ಷೆ ಆಗಿರದೆ ಒಂದು ನಾಡಹಬ್ಬವಾಗಿ ಸಂಭ್ರಮದಿಂದ ನಡೆಸಲು ಸಹಕರಿಸಿದ ಸಾರಿಗೆ, ಆರೋಗ್ಯ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇದೇ ವೇಳೆ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ, ಮಂಡ್ಯ ತಾಲೂಕಿನ ಗಡಿ ಗ್ರಾಮವಾದ ಕೆಂಪಯ್ಯನದೊಡ್ಡಿ ಗ್ರಾಮಕ್ಕೆ ಹೆಸರಾಂತ ಶಿಕ್ಷಣ ಸಚಿವರು ಭೇಟಿ ನೀಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದ್ದು, ಶಾಲೆಯ ಶಿಕ್ಷಕರ ವೃತ್ತಿಪರತೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.