ಡಿವೈಎಸ್ಪಿ ಹನುಮಂತಪ್ಪ ಆತ್ಮಹತ್ಯೆ ಹಿಂದಿನ ರಹಸ್ಯ ಬಯಲು!
ಮಂಡ್ಯ, ಡಿಸೆಂಬರ್ 28: ಬೆಂಗಳೂರಿನ ವಿಜಯನಗರ ಎಂಸಿ ಲೇಔಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಗೂ, ಮಳವಳ್ಳಿ ತಾಲೂಕಿನ ಶಿವನಸಮುದ್ರ ಸಮೀಪ ಅ.28 ರಂದು ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಪ್ರಕರಣಕ್ಕೂ ಸಂಬಂಧವಿರುವುದು ಇದೀಗ ಬೆಳಕಿಗೆ ಬಂದಿದೆ.
Recommended Video
ಅಪರಿಚಿತ ಮಹಿಳೆಯ ಜಾಡು ಹಿಡಿದು ಹೋದ ಬೆಳಕವಾಡಿ ಪೊಲೀಸರಿಗೆ ನಿವೃತ್ತ ಡಿವೈಎಸ್ಪಿಯೊಬ್ಬರು ಮಹಿಳೆಯನ್ನು ಕೊಲೆ ಮಾಡಿರುವುದು ದೃಢಪಟ್ಟ ಬೆನ್ನಲ್ಲೇ, ಆರೋಪಿ ನಿವೃತ್ತ ಡಿವೈಎಸ್ಪಿ ಹನುಮಂತಪ್ಪ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಇವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತಾದರೂ ಇದೀಗ ಇದರ ಹಿಂದಿನ ರಹಸ್ಯ ಬಯಲಾಗಿದೆ.
ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಡಿವೈಎಸ್ಪಿ ಆತ್ಮಹತ್ಯೆಗೆ ಶರಣು
ಚಿಕ್ಕ ಮುತ್ತತ್ತಿ ಬಳಿಯ ನಾಲಾ ಸೇತುವೆ ಮೇಲೆ ಅ.28 ರಂದು ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಉಸಿರುಗಟ್ಟಿಸಿ ಸಾವಿಗೀಡಾಗಿದೆ ಎಂದು ಶವದ ಪಂಚನಾಮೆ ವರದಿ ಬಂದಿತ್ತು. ವರದಿ ಆದರಿಸಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಮೈಸೂರಿನ ಎನ್.ಆರ್. ಮೊಹಲ್ಲ ಪೊಲೀಸ್ ಠಾಣೆಯ ಡಿ ಗ್ರೂಪ್ ನೌಕರೆ ಸರಸ್ವತಿ ಮೃತ ಮಹಿಳೆ ಎಂದು ತಿಳಿದು ತನಿಖೆ ಮುಂದುವರಿಸಿದಾಗ ತಮ್ಮದೇ ಇಲಾಖೆಯ ನಿವೃತ್ತ ಪೊಲೀಸ್ ಅಧಿಕಾರಿ ಹನುಮಂತಪ್ಪ ಕೊಲೆ ಆರೋಪಿ ಎಂದು ದೃಢಪಟ್ಟಿತ್ತು.
ಹನುಮಂತಪ್ಪ ಎಸಿಪಿಯಾಗಿ ಎನ್.ಆರ್ ಮೊಹಲ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮೃತ ಸರಸ್ವತಿ ಜತೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅಧಿಕಾರಿ ನಿವೃತ್ತಿಯಾದ ನಂತರದ ದಿನಗಳಲ್ಲಿ ಬೆಂಗಳೂರಿನಲ್ಲಿ ವಾಸವಿದ್ದು, ಆಗಿಂದಾಗ್ಗೆ ಮೈಸೂರಿಗೆ ಬಂದು ಸರಸ್ವತಿಯೊಡನೆ ಸಂಬಂಧ ಮುಂದುವರಿಸಿದ್ದರು.
ಅ.27 ರಂದು ಮೈಸೂರಿಗೆ ಆಗಮಿಸಿದ್ದ ಹನುಮಂತಪ್ಪ ಸರಸ್ವತಿಯನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಚಾಮುಂಡಿ ಬೆಟ್ಟ ಸೇರಿದಂತೆ ಇತರೆಡೆಗಳಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಯಾವುದೋ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಹನುಮಂತಪ್ಪ ಸರಸ್ವತಿಯನ್ನು ಕಾರಿನಲ್ಲೇ ಉಸಿರು ಕಟ್ಟಿಸಿ ಕೊಲೆ ಮಾಡಿದ್ದರು. ನಂತರ ತಾಲೂಕಿನ ಶಿವನಸಮುಂದ್ರ ಬಳಿಯ ಕೆರೆಯೊಂದಕ್ಕೆ ಶವವನ್ನು ಹಾಕಲು ಬಂದಿದ್ದಾಗ ಸಾಧ್ಯವಾಗದೇ ರಸ್ತೆ ಬದಿಯಲ್ಲೇ ಬಿಸಾಡಿ ತೆರಳಿದ್ದರು.
ಈ ಸಂಬಂಧ ಅಪರಿಚಿತ ಶವ ಪ್ರಕರಣ ದಾಖಲಿಸಿಕೊಂಡಿದ್ದ ಬೆಳಕವಾಡಿ ಪೊಲೀಸರಿಗೆ ಹನುಮಂತಪ್ಪ ಕರೆ ಮಾಡಿ ಮೃತ ಮಹಿಳೆ ನಮಗೆ ಗೊತ್ತಿರುವುದಾಗಿ ಆಕೆಯ ಸಂಬಂಧಿಕರನ್ನು ಕಳಿಸುತ್ತೇನೆ ನಿಯಮಾನುಸಾರು ಶವವನ್ನು ವಾರಸುದಾರರಿಗೆ ಒಪ್ಪಿಸುವಂತೆ ತಿಳಿಸಿದ್ದರು. ಅದರಂತೆ ಠಾಣೆಗೆ ಬಂದಿದ್ದ ಮೃತಳ ಸಂಬಂಧಿಕರು ಹನುಮಂತಪ್ಪ ಹಾಗೂ ಸರಸ್ವತಿಗೂ ಇದ್ದ ಅಕ್ರಮ ಸಂಬಂಧದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿ ಹನುಮಂತಪ್ಪನವರೆ ಕೊಲೆ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದರು.
ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದು, ನಿವೃತ್ತ ಪೊಲೀಸ್ ಅಧಿಕಾರಿಯೇ ಕೊಲೆ ಮಾಡಿರುವುದು ಖಚಿತವಾದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲು ಪೊಲೀಸರ ತಂಡ ಬೆಂಗಳೂರಿಗೆ ತೆರಳಿದ್ದರು. ಈ ವಿಷಯ ತಿಳಿದ ಹನುಮಂತಪ್ಪ ಮಾನಕ್ಕೆ ಹೆದರಿ ಬೆಂಗಳೂರಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸ್ ಮೂಲಗಳಿಂದ ಇದೀಗ ರಹಸ್ಯ ಬಯಲಾಗಿದೆ.