"ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ"; ನಗುತ್ತಲೇ ತಿವಿದ ಡಿವಿಎಸ್
ಮಂಡ್ಯ, ಜನವರಿ 11: ರಾಜಕೀಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿರವರು ಬಿಡುಗಡೆ ಮಾಡಿರುವ ವಿಡಿಯೋ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿ.ಡಿಗಳು ರಾಜಕೀಯದಲ್ಲಿರುವ ಹಲವರಿಗೆ ತಮ್ಮ ರಾಜಕೀಯದ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆಯಾಗಿವೆ. ಯಾವುದೋ ಫೇಕ್ ಸಿಡಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡೋದು. ಆಮೇಲೆ ಅದರ ಹಿಂದೆ ಯಾರೂ ಹೋಗುವುದಿಲ್ಲ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿಗಳ ಸಂಖ್ಯೆ ನೋಡಿದ್ರೆ ಇಷ್ಟು ಹೊತ್ತಿಗೆ ಅದೆಷ್ಟೋ ಜನರು ಜೈಲಿಗೆ ಹೋಗಬೇಕಿತ್ತು" ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಎಚ್ ಡಿ ಕುಮಾರಸ್ವಾಮಿಗೂ, ಮಂಗಳೂರಿಗೂ ಏನು ಸಂಬಂಧ?
ಅಲ್ಲದೇ, "ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. "ಘಟನೆ ನಡೆದ ಕೆಲವು ದಿನಗಳಲ್ಲೇ ಸಿಡಿ ಬಿಡುಗಡೆ ಮಾಡಬಹುದಿತ್ತು. ಆದರೆ ತಮ್ಮ ರಾಜಕೀಯ ಮೆಟ್ಟಿಲು ಕುಸಿಯುತ್ತಿರುವ ಸಮಯದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಾಚರಣೆ ಇದು. ಇದರ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ" ಎಂದರು.
ವಕೀಲರ ಭವನದಲ್ಲಿ ಸಿಎಎ ಮತ್ತು ಎನ್ಆರ್ಸಿ ಕುರಿತು ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, "ಗೂಟದ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ಹೋದರೆ ಕೆಲವರಿಗೆ ನಿರಾಸೆಯಾಗುವುದು ಸಹಜ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ" ಎಂದರು.
ಸಿಡಿ ರಾಜಕೀಯ: ಬಿಜೆಪಿ ಶಾಸಕರ ವೈಯಕ್ತಿಕ ಸಿಡಿಗಳೂ ಇವೆಯಂತೆ
ಸಂಪುಟ ರಚನೆ ವಿಚಾರವಾಗಿಯೂ ಮಾತನಾಡಿ, "ನಾವು ಅನರ್ಹರಾಗಿದ್ದ ಶಾಸಕರಿಗೆ ಮಾತು ಕೊಟ್ಟಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ. ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗೆ ಬಿಟ್ಟಿದ್ದು" ಎನ್ನುವ ಮೂಲಕ ಎಲ್ಲಾ ನೂತನ ಶಾಸಕರಿಗೆ ಸಚಿವ ಸ್ಥಾನ ಸಿಗುವ ಕುರಿತಂತೆ ಪರೋಕ್ಷವಾಗಿ ಸುಳಿವು ನೀಡಿದರು.