ಬರದಿಂದ ಕಳೆಗುಂದಿದ ನಂದಿ ಬಸವೇಶ್ವರಸ್ವಾಮಿ ಜಾನುವಾರು ಜಾತ್ರೆ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶ್ರೀ ನಂದಿ ಬಸವೇಶ್ವರ ಜಾತ್ರೆಯಲ್ಲಿ ಬರದಿಂದಾಗಿ ದನಗಳು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ದನಗಳಿಲ್ಲದೇ ಜಾನುವಾರು ಜಾತ್ರೆ ಕಳೆಗುಂದಿದೆ.
ಮಂಡ್ಯ, ಜನವರಿ 22: ಇಲ್ಲಿನ ಮದ್ದೂರು ತಾಲೂಕಿನ ಶ್ರೀ ನಂದಿ ಬಸವೇಶ್ವರ ಸ್ವಾಮಿ ಜಾತ್ರೆ ಸಾಮಾನ್ಯವಾಗಿ ರೈತರು ಮತ್ತು ಜಾನುವಾರುಗಳಿಂದ ಕಳೆಗಟ್ಟಿರುತ್ತದೆ. ಆದರೆ ಈ ಬಾರಿ ಬರದಿಂದಾಗಿ ಅದ್ಯಾಕೋ ರೈತರಲ್ಲಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂಬ ಆಸಕ್ತಿಯೇ ಇಲ್ಲದಾಗಿದೆ. ಹೀಗಾಗಿ ಜಾನುವಾರು ಜಾತ್ರೆಯೂ ಕಳೆಗುಂದಿದೆ.
ರೈತರಿಂದಲೇ ನಡೆಯುವ ಜಾತ್ರೆಯಲ್ಲಿ ರೈತರಿಗೆ ಹೆಗಲುಕೊಟ್ಟು ದುಡಿಯುವ ದನಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಹೀಗಾಗಿ ಜಾತ್ರೆ ಎಂದ ಮೇಲೆ ದನಗಳ ಜಾತ್ರೆ ಇರಲೇ ಬೇಕೆಂದು ಹಿಂದಿನ ಕಾಲದವರು ವಿಶೇಷ ಸ್ಥಾನವನ್ನು ನೀಡಿದ್ದರು. ಜಾತ್ರೆಯಲ್ಲಿ ದನಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿತ್ತು.ರಾಸುಗಳನ್ನು ಖರೀದಿಸಬೇಕೆನ್ನುವವರು ಜಾತ್ರೆಗೆ ತೆರಳಿ ತಮಗಿಷ್ಟವಾದ ಜಾನುವಾರುಗಳನ್ನು ಖರೀದಿಸುತ್ತಿದ್ದರು. [ಬೀರೂರು ಜಾನುವಾರು ಜಾತ್ರೆಯಲ್ಲಿ 1,34,400ಕ್ಕೆ ಜೋಡಿ ಕರು ಸೇಲ್!]
ಇತ್ತೀಚಿನ ಯಾಂತ್ರಿಕ ಬದುಕಿನಲ್ಲೂ ದನಗಳ ಜಾತ್ರೆ ಮಾತ್ರ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಮಂಡ್ಯ ಜಿಲ್ಲೆ ಸುತ್ತ ಮುತ್ತ ಬರ ಆವರಿಸಿರುವುದರಿಂದ ಅದರ ಪರಿಣಾಮ ಜಾನುವಾರು ಜಾತ್ರೆಯ ಮೇಲೆಯೂ ಬಿದ್ದಿದೆ.
ಮೊದಲೆಲ್ಲ ದನಗಳಿಂದಲೇ ಕಳೆಕಟ್ಟುತ್ತಿದ್ದ ನಂದಿ ಬಸವೇಶ್ವರಸ್ವಾಮಿ ಜಾತ್ರೆ ಈ ಬಾರಿ ದನಗಳಿಲ್ಲದೆ ಕಳೆಗುಂದಿದೆ. ಜ. 15ರಿಂದ ಆರಂಭವಾಗಿರುವ ಜಾತ್ರೆಯು 25ರ ವರೆಗೆ ನಡೆಯಲಿದ್ದು, ಸ್ಥಳೀಯ ರೈತರಲ್ಲದೆ, ಅಕ್ಕಪಕ್ಕದ ಜಿಲ್ಲೆಗಳ ಕೆಲವೇ ಕೆಲವು ರೈತರಷ್ಟೆ ತಮ್ಮ ರಾಸುಗಳೊಂದಿಗೆ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. [ಬೆಟ್ಟದಪುರ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ತಪ್ಪದೇ ಬನ್ನಿ]
ಈ ಜಾತ್ರೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ತಮ್ಮ ರಾಸುಗಳೊಂದಿಗೆ ಆಗಮಿಸಿ ಅವುಗಳನ್ನು ಪ್ರದರ್ಶಿಸಿ, ಒಂದಷ್ಟು ಒಳ್ಳೆಯ ಬೆಲೆಗೆ ಮಾರಾಟ ಮಾಡಬಹುದೆಂದು ನಂಬಿ ಬಂದ ರೈತಾಪಿ ವ್ಯಾಪಾರಿಗಳು ಪೆಚ್ಚು ಮೋರೆ ಹಾಕಿ ಕುಳಿತಿದ್ದಾರೆ. ಇನ್ನು ಜಾತ್ರೆಯಲ್ಲಿ ರಾಸುಗಳಿಗೆ ಮೇವು, ನೀರು, ನೆರಳಿನ ಕೊರತೆಯೂ ಎದ್ದು ಕಾಣುತ್ತಿದೆ.
ಸುಮಾರು 25 ಸಾವಿರದಿಂದ ಲಕ್ಷ ಬೆಲೆಬಾಳುವ ರಾಸುಗಳು ಇಲ್ಲಿ ಇವೆ. ಆದರೆ ವ್ಯಾಪಾರ ಮಾತ್ರ ಸಂಪೂರ್ಣವಾಗಿ ಕ್ಷೀಣಿಸಿದೆ. ಇದರ ನಡುವೆ ದನಗಳ ಜಾತ್ರೆಯಲ್ಲಿ ಮೇಕೆಗಳು ಕಾಣ ಸಿಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿವೆ.