ಆದಿಚುಂಚನಗಿರಿ ಶ್ರೀಗಳ ಹೇಳಿಕೆಗೆ ಧ್ವನಿಗೂಡಿಸಿದ ಸಿಎಂ ಎಚ್ ಡಿ ಕುಮಾರಸ್ವಾಮಿ
ಮಂಡ್ಯ, ಜ 18: ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದೇನೆ, ನನ್ನ ಕುರ್ಚಿ ಉಳಿಸಿಕೊಳ್ಳಲು ಪೀಠಾಧಿಪತಿಗಳನ್ನು ಬಳಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ಶುಕ್ರವಾರ (ಜ 18) ಆಯೋಜಿಸಲಾಗಿದ್ದ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ರಾಜಕೀಯ ವಿಚಾರಕ್ಕೆ ನಿರ್ಮಲಾನಂದನಾಥ ಶ್ರೀಗಳ ಹೆಸರನ್ನು ಎಳೆಯಬೇಡಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವಥ್ ನಾರಾಯಣ ಅವರ ನೇತೃತ್ವದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ, ಈ ವಿಚಾರದಲ್ಲಿ ನಿರ್ಮಲಾನಂದನಾಥ ಶ್ರೀಗಳು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ರಾಜ್ಯ ರಾಜಕೀಯ: ಆದಿಚುಂಚನಗಿರಿ ಶ್ರೀಗಳ ಮಹತ್ವದ ಹೇಳಿಕೆ
ಈ ವಿಚಾರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರು ಕೂಡಾ ಶುಕ್ರವಾರ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಸದ್ಯದ ರಾಜಕೀಯಕ್ಕೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ, ನಮ್ಮ ಮಠವನ್ನು ಎಳೆಯಬೇಡಿ ಎಂದು ಶ್ರೀಗಳು ಹೇಳಿದ್ದರು.
ನಮ್ಮ ಸರಕಾರದ ಬಗ್ಗೆ ಏನು ಬೇಕಾದರೂ ವರದಿಯನ್ನು ಪ್ರಕಟಿಸಲಿ
ಆದಿಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಮತ್ತು ನಮ್ಮ ಸರಕಾರದ ಬಗ್ಗೆ ಏನು ಬೇಕಾದರೂ ವರದಿಯನ್ನು ಪ್ರಕಟಿಸಲಿ. ಆದರೆ, ಸದ್ಯದ ರಾಜಕೀಯಕ್ಕೆ ಶ್ರೀಮಠವನ್ನು ಮಾತ್ರ ಎಳೆಯಬೇಡಿ, ಇದು ನನ್ನ ಮನವಿ ಎಂದಿದ್ದಾರೆ.
ಬುಡುಬುಡಿಕೆಯವ ದೇವೇಗೌಡ್ರ ಬಗ್ಗೆ ಹೇಳಿದ ಶಾಸ್ತ್ರ ನಿಜವಾಯ್ತು!
ರಾಜ್ಯದ ಜನರ ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದೆ
ಕೆಲವು ಮಾಧ್ಯಮಗಳು ಮಠದ ಬಗ್ಗೆ ಊಹಾಪೋಹದ ಸುದ್ದಿಗಳನ್ನು ಬಿತ್ತರಿಸಿ, ರಾಜ್ಯದ ಜನರ ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಇದರಿಂದ ಮಠದ ಭಕ್ತರಿಗೆ ತೀವ್ರ ನೋವಾಗಿದೆ. ಸದ್ಯದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ಶ್ರೀ ಮಠಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ - ನಿರ್ಮಲಾನಂದನಾಥ ಸ್ವಾಮೀಜಿ.
ಸಮಾಜಕ್ಕೆ ಆದಿಚುಂಚನಗಿರಿ ಮಠ ನೀಡಿದ ಕೊಡುಗೆ
ಸಮಾಜಕ್ಕೆ ಆದಿಚುಂಚನಗಿರಿ ಮಠ ನೀಡಿದ ಕೊಡುಗೆಯನ್ನು ನಾನು ವಿಶೇಷವಾಗಿ ಮತ್ತೆ ವಿವರಿಸಬೇಕಿಲ್ಲ. ಮಾಧ್ಯಮಗಳು ತಪ್ಪು ಮಾಹಿತಿ ನೀಡಿದರೆ, ಮಠಕ್ಕೆ ಕೆಟ್ಟ ಹೆಸರು ಬರುತ್ತದೆ, ಜೊತೆಗೆ ಮಠದ ಭಕ್ತರಿಗೂ ಬೇಸರವಾಗುತ್ತದೆ. ನಿರ್ಮಲಾನಂದನಾಥ ಶ್ರೀಗಳ ಹೆಸರನ್ನು ಯಾರೂ ಬಳಸಬಾರದು ಎಂದು ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.
ಆದಿಚುಂಚನಗಿರಿ ಮಠ ಮತ್ತು ಶ್ರೀಗಳ ಹೆಸರನ್ನು ಎಳೆದು ತರುವುದು ಎಷ್ಟು ಸರಿ
ನಾನೇನೂ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಗಟ್ಟಿಯಾಗಿ ಕೂರಬೇಕು ಎನ್ನುವ ಆಸೆಯನ್ನು ಹೊಂದಿಲ್ಲ. ದೇವರು ಎಷ್ಟು ದಿನ ಈ ಸೀಟಿನಲ್ಲಿ ಇರಬೇಕು ಎಂದು ಬರೆದಿರುತ್ತಾನೋ, ಅಷ್ಟು ದಿನ ಮಾತ್ರ ಇರಬಲ್ಲೆ. ನಮ್ಮ ರಾಜಕೀಯಕ್ಕಾಗಿ ಆದಿಚುಂಚನಗಿರಿ ಮಠ ಮತ್ತು ಶ್ರೀಗಳ ಹೆಸರನ್ನು ಎಳೆದು ತರುವುದು ಎಷ್ಟು ಸರಿ - ಸಿಎಂ ಕುಮಾರಸ್ವಾಮಿ.
ನಮ್ಮ ಸಮುದಾಯದವರೇ ಮುಖ್ಯಮಂತ್ರಿಯಾಗಿದ್ದಾರೆ
ಒಕ್ಕಲಿಗ ಸಮುದಾಯದವರಾಗಿ, ನಮ್ಮ ಸಮುದಾಯದವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸರಕಾರ ಬೀಳಿಸುವ ಕೆಲಸಕ್ಕೆ ನೀವು ಮುಂದಾಗಿದ್ದು ಸರಿಯಲ್ಲ ಎಂದು ನಿರ್ಮಲಾನಂದನಾಥ ಶ್ರೀಗಳು, ಶಾಸಕ ಅಶ್ವಥ್ ನಾರಾಯಣಗೆ ಕರೆ ಮಾಡಿದ್ದರು. ಇದಾದ ನಂತರ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೂ ಸರಕಾರಕ್ಕೆ ಏನೂ ತೊಂದರೆಯಿಲ್ಲ ಎನ್ನುವ ಅಭಯವನ್ನು ನೀಡಿದ್ದರು ಎಂದು ವರದಿಯಾಗಿತ್ತು. ಅದಕ್ಕೆ ಶ್ರೀಮಠ ಸ್ಪಷ್ಟನೆ ನೀಡಿದೆ.