ಜೆಡಿಎಸ್ನ ಇನ್ನೂ 20 ಶಾಸಕರು ರಾಜೀನಾಮೆ: ಅನರ್ಹ ಶಾಸಕ ಬಾಂಬ್
ಕೆಆರ್ ಪೇಟೆ, ಸೆಪ್ಟೆಂಬರ್ 14: ಕೆಆರ್ ಪೇಟೆಯ ಅನರ್ಹ ಶಾಸಕ ನಾರಾಯಣ ಗೌಡ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಕೆಆರ್ ಪೇಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಗೌಡರೇ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.
ದೇವೇಗೌಡ ಅವರು ಕುಟುಂಬದ ಪ್ರೇಮ ಬಿಟ್ಟು ಮೊದಲು ದೇಶಪ್ರೇಮಿಯಾಗಲಿ ಎಂದು ಸಲಹೆ ನೀಡಿದರು. ದೇವೇಗೌಡರು ನನ್ನ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ದೇವೇಗೌಡರೇ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಸಿದರು.
ಕಳೆದ ಐದು ವರ್ಷಗಳಿಂದ ದೇವೇಗೌಡರ ಕುಟುಂಬದಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಅವರ ಹೆಣ್ಣುಮಕ್ಕಳಿಂದಲೂ ಮಾನಸಿಕ ಹಿಂದೆ ಎದುರಿಸಿದ್ದೇನೆ. ಇದು ಇಡೀ ರಾಜ್ಯಕ್ಕೆ ಗೊತ್ತು ಎಂದು ನಾರಾಯಣ ಗೌಡ ಆರೋಪಿಸಿದರು. ಕುಟುಂಬ, ನಿಮ್ಮ ಮಕ್ಕಳಿಗಾಗಿ ದೇಶ, ರಾಜ್ಯ ಹಾಳು ಮಾಡಬೇಡಿ. ನಿಮಗೆ ಎಲ್ಲೋ ಒಂದು ಕಡೆ ಒಳ್ಳೆ ಹೆಸರು ಇದೆ. ಅದನ್ನೂ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತೇವೆ. ಏಕೆಂದರೆ ಸಮುದಾಯ ಮನಸಿಗೆ ಬರುತ್ತದೆ ಎಂದರು.
ದೇವೇಗೌಡ, ಎಚ್ಡಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದ ಜೆಡಿಎಸ್ ಶಾಸಕ
ಮಂಡ್ಯದಲ್ಲಿ ಎರಡು ದಿನಗಳ ಹಿಂದೆ ಮಾತನಾಡಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ನಾರಾಯಣಗೌಡ ವಿರುದ್ಧ ಹರಿಹಾಯ್ದಿದ್ದರು. ದೇವೇಗೌಡರ ಮನೆಗೆ ಹೋದರೆ ಟೀ ಕೂಡ ಕೊಡುವುದಿಲ್ಲ ಎಂದು ನಾರಾಯಣ ಗೌಡ ಆರೋಪಿಸಿದ್ದಾರೆ. ಆದರೆ ಅವರು ಟೀ ಕುಡಿಯುವವರಲ್ಲ. ಮೇವು ತಿನ್ನುವವರು. ಅದಕ್ಕೆ ಎಲ್ಲಿಗೆ ಬೇಕೆಂದರೂ ಅಲ್ಲಿಗೆ ಹೋಗುತ್ತಾರೆ ಎಂದು ಟೀಕಿಸಿದ್ದರು.
ಡಿಕೆ ಶಿವಕುಮಾರ್ ಬಂಧನಕ್ಕೆ ಕಾರಣ
ಡಿಕೆ ಶಿವಕುಮಾರ್ ಅವರ ಬಂಧನಕ್ಕೆ ದೇವೇಗೌಡರ ಕುಟುಂಬದವರೇ ಕಾರಣ ಎಂದು ಅವರು ಪರೋಕ್ಷವಾಗಿ ಆರೋಪಿಸಿದರು. ಇದಕ್ಕೆ ಬಿಜೆಪಿಯವರು ಕಾರಣರಲ್ಲ. ಸ್ವಲ್ಪ ದಿನದಲ್ಲಿ ಡಿಕೆ ಶಿವಕುಮಾರ್ ಅವರು ಹೊರಬರುತ್ತಾರೆ. ಇದರ ಬಗ್ಗೆ ಸತ್ಯವನ್ನು ಅವರೇ ಬಿಚ್ಚಿಡುತ್ತಾರೆ. ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗುವುದರಲ್ಲಿ ಸಿಸ್ದರಾಮಯ್ಯ ಪಾತ್ರವಿಲ್ಲ. ಡಿಕೆಶಿ ಪರ ದೇವೇಗೌಡರ ಏಕೆ ನಿಲ್ಲುತ್ತಿಲ್ಲ? ನೀವು ನಮ್ಮನ್ನು ತುಳಿದರೆ ಭಗವಂತ ನಿಮ್ಮನ್ನು ತುಳಿಯುತ್ತಾನೆ ಎಂದು ನಾರಾಯಣಗೌಡ ಹೇಳಿದರು.
ಮಾಧ್ಯಮದವರಿಗೆ ಹೋಳಿಗೆ ಊಟ ಹಾಕಿಸುತ್ತೇನೆ ಎಂದ ದೇವೇಗೌಡರು
ರೇವಣ್ಣ ಹೋಟೆಲ್ ಉದ್ಯಮ ಮಾಡಿಲ್ಲವೇ?
ದೋಸ್ತಿ ಸರ್ಕಾರ ಬೀಳಲು ರೇವಣ್ಣ ಕಾರಣ. ನನ್ನನ್ನು ಚಂಗಲು ಎಂಜಲು ಎಂದು ರೇವಣ್ಣ ಟೀಕಿಸಿದ್ದಾರೆ. ನನ್ನ ಹೋಟೆಲ್ ಉದ್ಯಮವನ್ನು ಅವರು ವ್ಯಂಗ್ಯವಾಡಿದ್ದಾರೆ, ಅವರಿಗೆ ನಾಚಿಕೆ ಆಗಬೇಕು. ಮುಂಬೈನಲ್ಲಿ ನನ್ನ ಹೋಟೆಲ್ ವ್ಯವಹಾರಗಳನ್ನು ನೋಡಿ ಹಾಸನದಲ್ಲಿ ಅವರೂ ಹೋಟೆಲ್ ಓಪನ್ ಮಾಡಲು ಬಳಸಿಕೊಂಡಿದ್ದಾರೆ. ಪ್ರಾಜೆಕ್ಟ್ಗೆ ನಾನೇ ಇನ್ಚಾರ್ಜ್ ಆಗಿದ್ದೆ. ಅದು ಮುಗಿಯುವವರೆಗೂ ನಾನೇ ನೋಡಿಕೊಂಡೆ. ಹೋಟೆಲ್ ಎಂಜಲು ಎಂದರೆ ಅರ್ಥವೇನು. ಬೆಂಗಳೂರಿನಲ್ಲಿಯೂ ಇವರು ಹೋಟೆಲ್ ಇದೆಯಲ್ಲ. ಅವರು ಹೋಟೆಲ್ ಉದ್ಯಮ ಮಾಡೊಲ್ಲವಾ? ಎಂದು ಪ್ರಶ್ನಿಸಿದರು.
ಜೆಡಿಎಸ್ನ 20 ಶಾಸಕರ ರಾಜೀನಾಮೆ
ಸುಪ್ರೀಂಕೋರ್ಟ್ ನಮ್ಮನ್ನು ಹಾಕಿಕೊಂಡು ಅರೀತಿದೆ. ನಮ್ಮ ಹಣವೆಲ್ಲ ಸುಪ್ರೀಂಕೋರ್ಟ್ನಲ್ಲಿನ ವಿಚಾರಣೆಗೆ ಖರ್ಚಾಗುತ್ತಿದೆ. ಬಿಜೆಪಿ ಅವರು ಖರ್ಚಿಗೆ ಹಣ ಕೊಡುತ್ತಿಲ್ಲ ಎಂದು ಹೇಳಿದರು. ಜೆಡಿಎಸ್ನ 20 ಶಾಸಕರು ರಾಜೀನಾಮೆ ನೀಡುತ್ತಾರೆ. ರೇವಣ್ಣ ಅವರೇ ಆ ಶಾಸಕರನ್ನು ಹಿಡಿದಿಟ್ಟುಕೊಳ್ಳಿ. ಮಂಡ್ಯದಲ್ಲಿ ಸ್ಪೀಕರ್ ಕೃಷ್ಣ ಅವರನ್ನು ಕೆಳಗಿಳಿಸಿ ಹೊರಗೆ ಕಳಿಸಲು ನನಗೆ ಟಿಕೆಟ್ ನೀಡಿದರು. ರೇವಣ್ಣ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು.
ಬೆಳೆದ ಮೇಲೆ ಮೇವು ಸಿಕ್ಕಲ್ಲಿಗೆ ಹೋಗುತ್ತಾರೆ: ಅನರ್ಹ ಶಾಸಕರ ವಿರುದ್ಧ ರೇವಣ್ಣ ಕಿಡಿ
ಸಮುದಾಯದ ಮೇಲೆ ಗೌರವವಿಡಿ
ನಿಮ್ಮ ಮೇಲೆ ಈಗಲೂ ಗೌರವವಿದೆ. ಒಂದು ಸಮುದಾಯದಿಂದ ಬಡಕುಟುಂಬದ ರೈತನ ಮಗನಾಗಿ, ಸಿಎಂ ಆಗಿ ಬಳಿಕ ಪ್ರಧಾನಿಯಾದವರು ಎಂಬ ಕಾರಣಕ್ಕೆ. ನಿಮ್ಮನ್ನು ಬೆಳೆಸಿದವರು ಯಾರು? ಆದರೆ, ನಾನು ಒಕ್ಕಲಿಗ ಜಾತಿಯಲ್ಲಿ ಹುಟ್ಟಿದ್ದೇ ತಪ್ಪಾಯ್ತು, ಮುಸ್ಲಿಂ ಆಗಿ ಹುಟ್ಟಬೇಕಿತ್ತು ಎಂದಿದ್ದಿರಲ್ಲ. ಕರಳು ಕಿತ್ತುಬರುತ್ತದೆ. ಒಕ್ಕಲಿಗರ ಹೊಟ್ಟೆಯಲ್ಲಿ ಹುಟ್ಟಿದ್ದೇ ತಪ್ಪಾಯ್ತು ಎನ್ನುತ್ತೀರಿ. ಒಕ್ಕಲಿಗರೇ ನಿಮ್ಮನ್ನು ಆ ಸ್ಥಾನಕ್ಕೆ ಬೆಳೆಸಿರುವುದು. ಸಮುದಾಯದ ಮೇಲೆ ಗೌರವ ಇರಲಿ ಎಂದು ದೇವೇಗೌಡರ ಮೇಲೆ ಕಿಡಿಕಾರಿದರು.
ಹೆಣ್ಣುಮಕ್ಕಳ ನಿಯಂತ್ರಣದಲ್ಲಿ ದೇವೇಗೌಡ
ಕಳೆದ ಸಲವೇ ನಿಲ್ಲುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೆ. ಬಿಫಾರ್ಮ್ ಕೊಡಲು ತುಂಬಾ ನೋವು ಉಂಟುಮಾಡುತ್ತಾರೆ. ನಮ್ಮ ಮೇಲೆ ವಾಗ್ದಾಳಿ ಮಾಡಿದರೆ ಅವರೇ ಅನುಭವಿಸಬೇಕಾಗುತ್ತದೆ. ಅವರನ್ನು ದೇವರ ಸಮಾಜ ಎಂದು ಪೂಜಿಸುತ್ತಿದ್ದೆವು, ಅದನ್ನು ಅವರೇ ಕಳೆದುಕೊಂಡಿದ್ದಾರೆ. ನಾವು ಕಳೆದುಕೊಂಡಿಲ್ಲ. ಅವರು ಟೀ ಕೂಡ ಕೊಟ್ಟಿಲ್ಲ ಎಂದು ನಾನು ಹೇಳಿಲ್ಲ. ಅವರ ಮನೆಯಲ್ಲಿ ಅನ್ನ ಹಾಕಿದ್ದಾರೆ. ಒಂದೇ ತಟ್ಟೆಯಲ್ಲಿ ಚಪಾತಿ ಹಂಚಿಕೊಂಡಿದ್ದಾರೆ. ಆದರೆ ಬಿ ಫಾರ್ಮ್ಗೆ ಹೋದಾಗ ಒಳಗೆ ಕೂರಿಸುತ್ತಿರಲಿಲ್ಲ. ಅವರು ತಮ್ಮ ಹೆಣ್ಣುಮಕ್ಕಳ ನಿಯಂತ್ರಣದಲ್ಲಿದ್ದಾರೆ. ಹೆಣ್ಣುಮಕ್ಕಳು ಮನೆಯಲ್ಲಿದ್ದಾಗ ನಮ್ಮನ್ನು ಒಳಗೆ ಬಿಡುತ್ತಿರಲಿಲ್ಲ. ಬಿಫಾರ್ಮ್ ಕೊಡುವಾಗ ನಮ್ಮ ಊರಿನ ಹುಡುಗನಿಗೆ ಅವರ ಮಗಳು ಹೊಡೆದಿದ್ದರು ಎಂದು ಆರೋಪಿಸಿದರು.
224 ಸೀಟು ಗೆಲ್ಲಬೇಕಿತ್ತಲ್ಲವೇ?
ಅವರ ಕುಟುಂಬದ್ದೇ ಸರ್ಕಾರ ಆಗಿತ್ತು, ಅದಕ್ಕಾಗಿ ಸರ್ಕಾರ ಬಿತ್ತು. ದೇವೇಗೌಡರು ಕುಟುಂಬವನ್ನಷ್ಟೇ ನೋಡಿಕೊಂಡರು. ಅದಕ್ಕಾಗಿ ಜೆಡಿಎಸ್ನ ಇತರೆ ಶಾಸಕರಿಗೂ ಅಸಮಾಧಾನವಿದೆ. ನೋವಿನಿಂದ ಇದ್ದಾರೆ. ಅವರಿಗೂ ಅನುದಾನ ಸಿಕ್ಕಿರಲಿಲ್ಲ. ಬಿಫಾರ್ಮ್ ಕೊಟ್ಟವರು ನಾವು, ಗೆಲ್ಲಿಸಿದವರು ನಾವು ಎಂದು ನಮ್ಮ ಬಗ್ಗೆ ಹೇಳಿದ್ದರು. ಹಾಗಾದರೆ ಜೆಡಿಎಸ್ನವರು ಎಲ್ಲ 224 ಸೀಟು ಗೆಲ್ಲಬೇಕಿತ್ತಲ್ಲವೇ? 38 ಸೀಟು ಮಾತ್ರ ಏಕೆ ಗೆದ್ದರು? ಹಾಗೆ ಗೆದ್ದಿದ್ದರೆ ಆಗ ಕುಟುಂಬದ ಶಕ್ತಿ ಎಂದು ತಲೆಬಾಗುತ್ತಿದ್ದೆವು ಎಂದರು.