ಮಹಿಳೆ ಹೊಟ್ಟೆಯಿಂದ 4 ಕೆ.ಜಿ ಗಡ್ಡೆ ತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು
ಮಂಡ್ಯ, ಜುಲೈ 3: ಮಹಿಳೆಯ ಹೊಟ್ಟೆಯಿಂದ ಸುಮಾರು 4 ಕೆ.ಜಿ ತೂಕದ ಗಡ್ಡೆಯನ್ನು ಹೊರತೆಗೆಯುವ ಮೂಲಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಹಂಪಾಪುರ ಗ್ರಾಮದ ತುಳಸಿ ಎಂಬ ಮಹಿಳೆ ಹೊಟ್ಟೆ ನೋವೆಂದು ಸರ್ಕಾರಿ ತಾಲ್ಲೂಕು ಆಸ್ಪತ್ರೆ ಬಂದಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ. ಕೂಡಲೇ ಡಾ. ಮಾರುತಿ ನೇತೃತ್ವದಲ್ಲಿ ಡಾ ಮಹೇಶ್, ಡಾ. ಕುಮಾರ್ ಅವರನ್ನೊಳಗೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ 4 ಕೆ.ಜಿ ಗಡ್ಡೆಯನ್ನು ತೆಗೆದಿದ್ದಾರೆ.
ಮಹಿಳೆ ಹೊಟ್ಟೇಲಿದ್ದ 12 ಕೇಜಿ ದುರ್ಮಾಂಸ ಹೊರತೆಗೆದ ಮೈಸೂರು ವೈದ್ಯರು
ಮಹಿಳೆಯು ಎಲ್ಲಾ ರೀತಿಯ ಸ್ಕ್ಯಾನಿಂಗ್ ಮಾಡಿಸಿಕೊಂಡು, ಬೇರೆ ಆಸ್ಪತ್ರೆಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ. ಇಂಥ ಪ್ರಕರಣಗಳನ್ನು ಬೇರೆಡೆ ಕಳುಹಿಸಲು ಸಾಧ್ಯವಿಲ್ಲ, ನಾವೇ ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದು ವೈದ್ಯರು ಹೇಳಿದಾಗ ಮಹಿಳೆಯ ಕುಟುಂಬಸ್ಥರು ಒಪ್ಪಿದ್ದಾರೆ. ಏನೇ ಆದರೂ ನಾವೇ ಜವಾಬ್ದಾರರು ಎಂದು ಭರವಸೆ ನೀಡಿದ ನಂತರ ಇರುವ ಸೌಲಭ್ಯವನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಸೌಲಭ್ಯವನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಿ ರೋಗಿಯನ್ನು ಕಾಪಾಡಿದ ವೈದ್ಯರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.