ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದತ್ತ ತಿರುಗಿ ನೋಡದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್

|
Google Oneindia Kannada News

ಮಂಡ್ಯ, ಏಪ್ರಿಲ್ 02: ಕೊರೊನಾ ವೈರಸ್‌ನಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ಹೀಗಿರುವಾಗ ಆಯಾಯ ಜಿಲ್ಲೆಯ ಉಸ್ತುವಾರಿ ಸಚಿವರ ಪಾತ್ರಗಳು ಹೆಚ್ಚಾಗಿರುತ್ತವೆ. ಜತೆಗೆ ಜನರ ಜತೆಯಲ್ಲಿದ್ದು, ಸಚಿವರು ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

ಆದರೆ ಮಂಡ್ಯದಲ್ಲಿ ಈ ಕೆಲಸವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಆರ್.ಅಶೋಕ್ ಇದುವರೆಗೂ ಜಿಲ್ಲೆಗೆ ಆಗಮಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಗೆ ಆಗಮಿಸಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಮಾಹಿತಿ ಕಲೆ ಹಾಕಿ ಆಗಬೇಕಾಗಿರುವ ಅಗತ್ಯ ಕೆಲಸಗಳತ್ತ ಗಮನಹರಿಸಬೇಕಾಗಿತ್ತು. ಆದರೆ ಅದ್ಯಾವುದೂ ಆಗುತ್ತಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿ ವರ್ಗಗಳು ಮಾಡಬೇಕಾದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದರಿಂದ ಉಸ್ತುವಾರಿ ಸಚಿವರು ಹಗುರವಾಗಿದ್ದಾರೆ ಎಂದರೂ ತಪ್ಪಾಗಲ್ಲ.

ಕರ್ನಾಟಕದಲ್ಲಿ ಕೊರೊನಾ ವೈರಸ್; ಮಂಡ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?ಕರ್ನಾಟಕದಲ್ಲಿ ಕೊರೊನಾ ವೈರಸ್; ಮಂಡ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?

 ಮೂರು ತಿಂಗಳ ಹಿಂದೆ ಬಂದವರು ಮತ್ತೆ ಕಾಣಿಸಲಿಲ್ಲ

ಮೂರು ತಿಂಗಳ ಹಿಂದೆ ಬಂದವರು ಮತ್ತೆ ಕಾಣಿಸಲಿಲ್ಲ

ಮೂರು ತಿಂಗಳ ಹಿಂದೆ ಗಗನಚುಕ್ಕಿ ಜಲಪಾತೋತ್ಸವಕ್ಕೆ ಬಂದು ಹೋದವರು ಮತ್ತೆ ಇದುವರೆಗೂ ಜಿಲ್ಲೆಯತ್ತ ಮುಖ ಮಾಡಿಲ್ಲ. ಬಹುಶಃ ಇದಕ್ಕೆ ಕಾರಣವೂ ಇದೆ. ವಿಧಾನಸಭಾ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಶಾಸಕ ಕೆ.ಸಿ.ನಾರಾಯಣಗೌಡರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಚಿವರಾಗಿದ್ದು, ಸದ್ಯ ಅಶೋಕ್ ಅವರು ತಮ್ಮ ಜವಾಬ್ದಾರಿಯನ್ನು ನಾರಾಯಣಗೌಡರಿಗೆ ನೀಡಿದ್ದಾರಾ ಎಂಬ ಅನುಮಾನವೂ ಜನವಲಯದಲ್ಲಿ ವ್ಯಕ್ತವಾಗುತ್ತಿದೆ.

ಜನರು ಎಲ್ಲವನ್ನು ಅವಲೋಕಿಸುತ್ತಿದ್ದಾರೆ. ಕಷ್ಟದ ಸಮಯದಲ್ಲಿ ತಮ್ಮೊಂದಿಗೆ ಯಾರು ಇರುತ್ತಾರೋ ಅವರನ್ನು ಬಹುಬೇಗ ತಮ್ಮ ನಾಯಕರನ್ನಾಗಿ ಒಪ್ಪಿಕೊಳ್ಳುತ್ತಾರೆ. ಇದರ ಅರಿವು ಉಸ್ತುವಾರಿ ಸಚಿವರಾದ ಆರ್.ಅಶೋಕ್ ಅವರಿಗೆ ಇಲ್ಲವಾಗಿದೆ.
 ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಿದ್ದ ಉಸ್ತುವಾರಿ ಸಚಿವರು ಎಲ್ಲಿ?

ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಿದ್ದ ಉಸ್ತುವಾರಿ ಸಚಿವರು ಎಲ್ಲಿ?

ಮಂಡ್ಯದಲ್ಲಿ ಕೊರೊನಾ ವೈರಸ್ ಕುರಿತಂತೆ ಹಲವು ಸಮಸ್ಯೆ ಎದುರಾಗಿವೆ. ಆದರೆ ಈ ವೇಳೆ ಜಿಲ್ಲೆಯಲ್ಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಉಸ್ತುವಾರಿ ಸಚಿವ ಆರ್.ಅಶೋಕ್ ಬೆಂಗಳೂರಿನಲ್ಲಿದ್ದು, ತಮಗೆ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ ಎಂಬುದು ಕೆಲವರ ಆರೋಪವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಸಕ್ಕರೆ ಕಾರ್ಖಾನೆಗಳ ಖಾಸಗೀಕರಣ, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಯಾವುದೇ ರೀತಿಯ ಗಮನ ಹರಿಸದೆ ಇರುವುದರಿಂದ ಇವತ್ತು ಜಿಲ್ಲೆಯೊಳಗೆ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಪರಿತಪಿಸುತ್ತಿದ್ದಾರೆ. ಬೆಳೆಗಳನ್ನೆಲ್ಲಾ ತಿಪ್ಪೆ, ಕೆರೆಗೆ ಸುರಿದು ಹಾಳು ಮಾಡುತ್ತಿದ್ದಾರೆ. ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಮಾರುಕಟ್ಟೆ ಸೃಷ್ಟಿಗೆ ಪೂರಕವಾಗುವಂತೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ ರೈತರಿಗೆ ಅನುಕೂಲ ಕಲ್ಪಿಸುವ, ಅವರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಪ್ರಯತ್ನವನ್ನು ಜಿಲ್ಲಾ ಸಚಿವರಾಗಿ ಮಾಡಬಹುದಿತ್ತು. ಆದರೆ ಏಕೆ ಮಾಡುತ್ತಿಲ್ಲ ಎಂಬುದೇ ಪ್ರಜ್ಞಾವಂತರ ಪ್ರಶ್ನೆಯಾಗಿದೆ.

 ಅಧಿಕಾರಿಗಳ ಸಭೆ ನಡೆಸುತ್ತಿರುವ ನಾರಾಯಣಗೌಡ

ಅಧಿಕಾರಿಗಳ ಸಭೆ ನಡೆಸುತ್ತಿರುವ ನಾರಾಯಣಗೌಡ

ನಾರಾಯಣ ಗೌಡರು ಗೆದ್ದು ಸಚಿವರಾದಾಗ ಅವರಿಗೆ ಉಸ್ತುವಾರಿ ಪಟ್ಟ ಕೊಡಲಾಗುತ್ತದೆ ಎಂದು ಜನ ಮಾತನಾಡಿಕೊಂಡಿದ್ದರು. ಆದರೆ ಈಗ ಅವರು ಉಸ್ತುವಾರಿ ಅಲ್ಲದಿದ್ದರೂ ಉಸ್ತುವಾರಿ ಹೊತ್ತುಕೊಂಡು ಓಡಾಡುತ್ತಿರುವುದು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಆದರೆ ಇದು ಹೀಗೇ ಮುಂದುವರೆದರೆ ಅಶೋಕ್ ಅವರು ಮಂಡ್ಯ ಜನತೆಯಿಂದ ದೂರ ಸರಿದರೂ ಅಚ್ಚರಿಪಡಬೇಕಾಗಿಲ್ಲ.

ಸದ್ಯ ಜಿಲ್ಲಾ ಉಸ್ತುವಾರಿ ಅಲ್ಲದ ಕೆ.ಸಿ.ನಾರಾಯಣಗೌಡರು ಉಸ್ತುವಾರಿ ಸಚಿವರಂತೆ ಆಗಾಗ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸುವುದರೊಂದಿಗೆ ಉಸ್ತುವಾರಿ ಸಚಿವರ ಜವಾಬ್ದಾರಿ ವಹಿಸಿಕೊಂಡಂತೆ ಕೆಲಸ ಮಾಡುತ್ತಿರುವುದು ಸಮಾಧಾನ ತಂದಿದೆ.

 ಒಮ್ಮೆಯೂ ಜಿಲ್ಲೆ ಬಗ್ಗೆ ವಿಚಾರಿಸಿಲ್ಲ ಎಂಬ ಆರೋಪ

ಒಮ್ಮೆಯೂ ಜಿಲ್ಲೆ ಬಗ್ಗೆ ವಿಚಾರಿಸಿಲ್ಲ ಎಂಬ ಆರೋಪ

ಜನ ಮಾತ್ರ ಉಸ್ತುವಾರಿ ಸಚಿವ ಅಶೋಕ್ ಅವರ ಎದುರು ಪ್ರಶ್ನೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಕೊರೊನಾ ಭೀತಿ ಸೃಷ್ಟಿಯಾಗಿ ಒಂದೂವರೆ ತಿಂಗಳಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು, ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡರು ಜಿಲ್ಲೆಗೆ ಆಗಮಿಸಿ ಜಿಲ್ಲೆಯ ಪರಿಸ್ಥಿತಿಯ ಅವಲೋಕನ ನಡೆಸಿ ಹೋಗಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಈವರೆಗೆ ಒಮ್ಮೆಯೂ ಬಂದು ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳೇನು, ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಮಾಡಿಕೊಂಡಿರುವ ವ್ಯವಸ್ಥೆಗಳೇನು, ವೈದ್ಯಕೀಯ ಸೌಲಭ್ಯಗಳು ಯಾವ ರೀತಿಯಲ್ಲಿವೆ ಎಂಬುದು ಸೇರಿದಂತೆ ತಾಲೂಕು ವ್ಯಾಪ್ತಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅರಿವು, ತಿಳಿವಳಿಕೆ ಮೂಡಿಸಲು ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂಬ ಬಗ್ಗೆ ಕಿಂಚಿತ್ತು ಏಕೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಉಸ್ತುವಾರಿ ಸಚಿವ ಆರ್.ಅಶೋಕ್ ಏನು ಉತ್ತರ ಕೊಡುತ್ತಾರೆ ಎಂಬುದನ್ನು ಕಾದು ನೋಡೋಣ...

English summary
There is an allege that Mandya district incharge minister R Ashok didnt visit district till now in this corona crisis situation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X