ಮಂಡ್ಯ: ಒಡೆದ ಮನೆಯಾಯ್ತಾ ರೈತ ಹಿತರಕ್ಷಣಾ ಸಮಿತಿ?
ಮಂಡ್ಯ, ಜೂನ್ 23: ಕಾವೇರಿ ನೀರು ಬಿಡುಗಡೆ ವಿಚಾರವಿರಲಿ, ರೈತರ ಸಮಸ್ಯೆ ಇರಲಿ ಒಗ್ಗಟ್ಟಿನಿಂದ ರೈತರ ಪರ ಹೋರಾಡುತ್ತಿದ್ದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮೈಷುಗರ್ ವಿಚಾರದಲ್ಲಿ ಒಡೆದ ಮನೆಯಾಗಿರುವುದು ಎದ್ದು ಕಾಣತೊಡಗಿದೆ.
Recommended Video
ಹಾಗೆ ನೋಡಿದರೆ ಮೈಷುಗರ್ ಕಾರ್ಖಾನೆ ನಿರ್ವಹಣೆ ಮತ್ತು ಕಾರ್ಯಾಚರಣೆ ಖಾಸಗಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಗೊಂದಲವಿದೆ. ಹೀಗಾಗಿ ಒಮ್ಮತ್ತಕ್ಕೆ ಬಾರದ ಕಾರಣದಿಂದ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗದೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮೈಷುಗರ್ ಕಳೆದ ಹದಿನೇಳು ವರ್ಷದಿಂದ ರೋಗಗ್ರಸ್ತವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಇಲ್ಲಿನ ಮುಖಂಡರ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ.
ಮೈಶುಗರ್ ಖಾಸಗೀಕರಣ ವಿರೋಧಿಗಳಿಗೆ ಸಂಸದೆ ಸುಮಲತಾ ತಿರುಗೇಟು!
ಯಾವುದೇ ವಿಚಾರ ಬಂದರೂ ತಕ್ಷಣಕ್ಕೆ ಹಿರಿಯ ರೈತ ಮುಖಂಡ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡರು ಪ್ರತಿಕ್ರಿಯೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ನೇತೃತ್ವದಲ್ಲಿಯೇ ಪ್ರತಿಭಟನೆ, ಹೋರಾಟಗಳನ್ನು ನಡೆಸಲಾಗುತ್ತಿತ್ತು. ಮಾದೇಗೌಡರ ಮಾತನ್ನು ಯಾರೂ ಅಲ್ಲಗೆಳೆಯುತ್ತಿರಲಿಲ್ಲ. ಸರ್ಕಾರ ಮಟ್ಟದಲ್ಲಿಯೂ ಅವರ ಮಾತಿಗೆ ತೂಕವಿತ್ತು. ಆದರೆ ಮೈಷುಗರ್ ವಿಚಾರದಲ್ಲಿ ಮಾತ್ರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸರ್ಕಾರದ ತೀರ್ಮಾನವನ್ನು ಒಪ್ಪುತ್ತಿಲ್ಲ.
ರ್ಕಾರದ ಸ್ವಾಮ್ಯದಲ್ಲಿಯೇ ನಡೆಯಬೇಕೆಂದು ಸಮಿತಿ ಪಟ್ಟು
ಸರ್ಕಾರ ಮೈಷುಗರ್ ನ ನಿರ್ವಹಣೆ ಮತ್ತು ಕಾರ್ಯಾಚರಣೆ ಖಾಸಗಿಗೆ ನೀಡುವ ಬಗ್ಗೆ ಪ್ರಸ್ತಾಪಿಸುತ್ತಿದ್ದರೆ, ಇದನ್ನು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವಿರೋಧಿಸುತ್ತಾ ಬಂದಿದ್ದು, ಮೈಷುಗರ್ ಸರ್ಕಾರದ ಸ್ವಾಮ್ಯದಲ್ಲಿಯೇ ನಡೆಯಬೇಕೆಂದು ಪಟ್ಟು ಹಿಡಿದು ಕುಳಿತಿದೆ. ಈ ಸಂಬಂಧ ಇದುವರೆಗೆ ಸರ್ಕಾರ ಮಟ್ಟದಲ್ಲಿ ಸಭೆಗಳು ನಡೆದರೂ ಯಾವುದೇ ರೀತಿಯ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಕಬ್ಬು ಬೆಳೆಗಾರರ ಆಗ್ರಹವೇ ಬೇರೆ
ಜಿಲ್ಲಾ ಹಿತರಕ್ಷಣಾ ಸಮಿತಿ ಪ್ರಕಾರ ಮೈಷುಗರ್ ಗೆ ಸೇರಿದ ಆಸ್ತಿ 250 ಕೋಟಿ ರೂ. ಆಗಿದ್ದು, ಒಂದು ವೇಳೆ ಖಾಸಗಿಯವರಿಗೆ ವಹಿಸಿದರೆ ಆಸ್ತಿ ಕೈಬಿಟ್ಟು ಹೋಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯಲಿ ಎಂಬ ವಾದ ಮಾಡುತ್ತಿದೆ. ಇದು ಕೆಲವು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ ಕಬ್ಬು ಕಟಾವಿಗೆ ಬರುತ್ತಿದ್ದು, ಎಲ್ಲರೂ ಒಮ್ಮತಕ್ಕೆ ಬಂದು ಕಬ್ಬು ಅರೆಯಲು ಅವಕಾಶ ಮಾಡಿಕೊಡಬೇಕು ಎನ್ನುವುದು ಕಬ್ಬು ಬೆಳೆಗಾರರ ಆಗ್ರಹವಾಗಿದೆ.
ಮೈ ಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಯದುವೀರ್ ಒಡೆಯರ್ ಬೆಂಬಲ
ಖಾಸಗಿಗೆ ವಿರೋಧಿಸುತ್ತಿರುವುದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಾತ್ರ
ಇನ್ನು ಮೈಷುಗರ್ ನ್ನು ಖಾಸಗಿಗೆ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಬೆಂಬಲ ನೀಡುತ್ತಿದ್ದರೆ, ಜೆಡಿಎಸ್ ಶಾಸಕರು ಮೌನವಾಗಿದ್ದುಕೊಂಡೇ ಪರೋಕ್ಷವಾಗಿ ಬೆಂಬಲ ನೀಡುತ್ತಿರುವಂತೆ ಗೋಚರವಾಗುತ್ತದೆ. ಆದರೆ ಇಲ್ಲಿ ಬಲವಾಗಿ ವಿರೋಧಿಸುತ್ತಿರುವುದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಾತ್ರ. ಇತ್ತೀಚೆಗೆ ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ, ಜಯಕರ್ನಾಟಕ ಸಂಘಟನೆ, ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ, ರೈತ ಸಂಘ, ಜನಸ್ಪಂದನ ಟ್ರಸ್ಟ್, ಕದಂಬ ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದವರು ಮೈಷುಗರ್ ನ ನಿರ್ವಹಣೆ ಮತ್ತು ಕಾರ್ಯಾಚರಣೆ ಖಾಸಗಿಯವರಿಗೆ ನೀಡಿ ಕಬ್ಬು ಅರೆಯಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಇತ್ತೀಚಿಗೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಕವಲು ದಾರಿಯಲ್ಲಿ ಸಾಗುತ್ತಿದೆಯಾ?
ಆದರೆ ಇದೀಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಬಲ ಕುಗ್ಗಿದಂತೆ ಗೋಚರವಾಗುತ್ತಿದೆ. ಇವರ ಹೋರಾಟವು ಕವಲು ದಾರಿ ಹಿಡಿಯಿತಾ ಎಂಬ ಪ್ರಶ್ನೆ ಮೂಡತೊಡಗಿದೆ. ಇದಕ್ಕೆ ಕಾರಣವೂ ಇದೆ ಅದು ಏನೆಂದರೆ? ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಲ್ಲಿದ್ದ ಮಾಜಿ ಶಾಸಕರು, ಹಿರಿಯ ನಾಯಕರಾದ ಎಚ್.ಡಿ ಚೌಡಯ್ಯ ಹಾಗೂ ಮಾಜಿ ಸಚಿವರಾದ ಆತ್ಮಾನಂದ ಅವರು ಹೊರ ಬಂದಿದ್ದಾರೆ. ಅಷ್ಟೇ ಅಲ್ಲ ಮೈಷುಗರ್ ನ ನಿರ್ವಹಣೆ ಮತ್ತು ಕಾರ್ಯಾಚರಣೆ ಖಾಸಗಿಯವರ ಮೂಲಕವೇ ನಡೆಯಲಿ ಎಂದು ಬೆಂಬಲಿಸುವವರ ನಡುವೆ ಕಾಣಿಸಿಕೊಂಡಿದ್ದಾರೆ. ಇದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಖಾಸಗಿಗೆ ಬೆಂಬಲ
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಮಿತಿಯಲ್ಲಿದ್ದ ಮಾಜಿ ಸಚಿವ ಎಂ.ಎಸ್ ಆತ್ಮಾನಂದ ಹಾಗೂ ಮಾಜಿ ಶಾಸಕರಾದ ಎಚ್.ಡಿ ಚೌಡಯ್ಯ, ಜಿ.ಬಿ ಶಿವಕುಮಾರ್ ಅವರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದರು. ಜತೆಗೆ ಇದೇ ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಅವರು ಕಾಣಿಸಿಕೊಂಡಿದ್ದರು. ಮೈಷುಗರ್ ನ ನಿರ್ವಹಣೆ ಮತ್ತು ಕಾರ್ಯಾಚರಣೆ ಖಾಸಗಿಗೆ ನೀಡುವುದನ್ನು ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಎಸ್.ಕೃಷ್ಣ, ಯೋಗಣ್ಣ, ಎಸ್.ಸಿ ಮಧುಚಂದನ್, ಬೇಕರಿ ರಮೇಶ್, ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ನಾಗರತ್ನ ಮೊದಲಾದವರು ಬೆಂಬಲಿಸುತ್ತಿದ್ದಾರೆ.
ಶೀಘ್ರವೇ ಕಬ್ಬು ಅರೆಯಲು ಆರಂಭಿಸಿ
ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಅವಧಿಗೆ ಪೂರಕವಾಗಿ ನುರಿಸಲು ತತ್ ಕ್ಷಣ ಕಾರ್ಖಾನೆಯನ್ನು ಒ ಅಂಡ್ ಎಂ ಸೂತ್ರದಡಿ ಆರಂಭಿಸಲು ಕ್ರಮ ವಹಿಸಬೇಕು. ಕಬ್ಬು ಕಟಾವು ಮಾಡಲು ಗ್ಯಾಂಗ್ ಮನ್ ಗಳನ್ನು ತಂದು ಕಬ್ಬು ಕಟಾವಿಗೆ ಕ್ರಮ ವಹಿಸುವುದು. ಮೈಷುಗರ್ ಅಭಿವೃದ್ಧಿಗೆ 2003 ರಿಂದ 2019 ರ ವರೆಗೆ ನೀಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸುವುದು. ಮೈಷುಗರ್ ಆಸ್ತಿ ಸಂರಕ್ಷಣೆಗೆ ಕಾರ್ಖಾನೆ ವ್ಯಾಪ್ತಿಯ ಷೇರು ಕಬ್ಬು ಬೆಳೆಗಾರರು ಮತ್ತು ಜನಪ್ರತಿನಿಧಿಗಳು, ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳನ್ನೊಳಗೊಂಡಂತೆ ಶೋಧನಾ ಸಮಿತಿ ರಚಿಸಬೇಕು. ಈವರೆಗೆ ಮೈಷುಗರ್ ನಲ್ಲಿ ನಡೆದಿರುವ ಭ್ರಷ್ಟಾಚಾರ ಲೋಕಾಯುಕ್ತ ತನಿಖೆಯಲ್ಲಿದ್ದು, ಶೀಘ್ರ ತನಿಖೆ ನಡೆಸಿ ನ್ಯಾಯ ದೊರಕಿಸಲು ಕ್ರಮ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಒಂದು ಕಾಲದಲ್ಲಿ ತನ್ನ ಹೋರಾಟದ ಮೂಲಕ ಗಮನಸೆಳೆದಿದ್ದ, ಸರ್ಕಾರವನ್ನೇ ನಡುಗಿಸಿದ್ದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕವಲು ದಾರಿಯಲ್ಲಿ ಸಾಗುತ್ತಿದೆಯಾ ಎಂಬ ಸಂಶಯ ಮೂಡುತ್ತಿದೆ.