ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್ ನಿರ್ಮಾಣ ಅಸಾಧ್ಯ! ಏಕೆಂದರೆ...

|
Google Oneindia Kannada News

ಮಂಡ್ಯ, ಜನವರಿ 05 : ಯಾರು ಯಾವುದೇ ರೀತಿಯ ವಿರೋಧ ಮಾಡಿದರೂ ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್ ಮಾಡಿಯೇ ಮಾಡುತ್ತೇವೆ ಎಂದು ಹೊರಟ ರಾಜ್ಯದ ಮೈತ್ರಿ ಸರ್ಕಾರಕ್ಕೆ ಈಗ ಮತ್ತೊಂದು ತಲೆನೋವು ಬಂದಿದ್ದು, ಈ ಯೋಜನೆಗೆ ಕಂಟಕ ಎದುರಾಗುವ ಎಲ್ಲ ಸಾಧ್ಯತೆಯೂ ಇದೆ.

ಈಗಾಗಲೇ ಕೆ.ಆರ್.ಎಸ್.ನಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ರಾಜ್ಯ ಸರ್ಕಾರವು 1500 ಕೋಟಿ ರೂ. ವೆಚ್ಚದಲ್ಲಿ ಡಿಸ್ನಿಲ್ಯಾಂಡ್ ಹಾಗೂ 125 ಅಡಿಯ ಕಾವೇರಿ ಪ್ರತಿಮೆಯನ್ನು ನಿರ್ಮಿಸಲುದ್ದೇಶಿಸಿ ಇದಕ್ಕಾಗಿ ನೀಲನಕ್ಷೆಯನ್ನು ತಯಾರಿಸಿ, ಸ್ಥಳವನ್ನೂ ಕೂಡ ಪರಿಶೀಲನೆ ಮಾಡಲಾಗಿತ್ತು.

ಯಾವಾಗ ಸರ್ಕಾರ ಡಿಸ್ನಿಲ್ಯಾಂಡ್ ಹಾಗೂ ಕಾವೇರಿ ಪ್ರತಿಮೆಯನ್ನು ಕೆಆರ್‌ಎಸ್ ಬಳಿ ನಿರ್ಮಿಸುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಘೋಷಣೆ ಮಾಡುತ್ತಿದ್ದಂತೆಯೇ ಕೆ.ಆರ್.ಎಸ್.ಗೆ ಧಕ್ಕೆ ಉಂಟಾಗುತ್ತದೆ ಎಂದು ಪರಿಸರವಾದಿಗಳು, ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ವಿರೋಧಿಸಿದ್ದವು. ಆದರೆ ಇದಕ್ಕೆ ಸೊಪ್ಪು ಹಾಕದ ಸರ್ಕಾರ ಮಾಡಿಯೇ ಮಾಡುತ್ತೇವೆ ಎಂಬ ಹಠ ಹಿಡಿದು ಕುಳಿತಿತು.

Disneyland near KRS in Mandya is impossible

ರಾಜ್ಯ ಸರ್ಕಾರವು ನಿರ್ಮಿಸಲು ಹೊರಟಿರುವ ಡಿಸ್ನಿಲ್ಯಾಂಡ್ ಪ್ರದೇಶವು ವನ್ಯಜೀವಿ, ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಡುತ್ತದೆ ಎಂಬುದು 2017ರ ನವೆಂಬರ್ 9ರಲ್ಲೇ ಕೇಂದ್ರ ಸರ್ಕಾರವು ನೋಟಿಫಿಕೇಷನ್ ಹೊರಡಿಸಿತ್ತು. ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ ಈ ಸಂಗತಿ ಬಹಿರಂಗವಾಗಿದ್ದು, ಇದನ್ನು ಗಮನಿಸಿದರೆ ಯಾಕೋ ಡಿಸ್ನಿಲ್ಯಾಂಡ್ ನಿರ್ಮಾಣ ಕಷ್ಟಸಾಧ್ಯ ಎಂಬುದು ಗೊತ್ತಾಗುತ್ತಿದೆ.

ಡಿಸ್ನಿಲ್ಯಾಂಡ್ ಯೋಜನೆಗೆ ಬೇಕಾಗಿರುವ ಜಮೀನು ದೇವರಾಜ ಅಣೆಕಟ್ಟೆ, ಯಡತಿಟ್ಟು, ಪುಟ್ಟಿಕೊಪ್ಪಲು ಪಕ್ಷಿಧಾಮದ ವನ್ಯಜೀವಿ ವಲಯ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯ ಬರುವ ಪ್ರದೇಶವಾಗಿರುತ್ತದೆ. ಗೆಜೆಟ್‌ ನೋಟಿಫಿಕೇಷನ್ ಪ್ರಕಾರ ರಂಗನತಿಟ್ಟು ಪಕ್ಷಿಧಾಮದ ಜೊತೆಯಲ್ಲಿ ದೇವರಾಜ, ಯಡತಿಟ್ಟು, ಪುಟ್ಟಯ್ಯನಕೊಪ್ಪಲು, ಗೆಂಡೆಹೊಸಹಳ್ಳಿ ಮತ್ತು ಅರಕೆರೆ ಐಲ್ಯಾಂಡ್ ಸೇರಿದಂತೆ ಈ ಪಕ್ಷಿಧಾಮದ ವ್ಯಾಪ್ತಿಯ 26 ಗ್ರಾಮಗಳ 2804.61 ಹೆಕ್ಟೇರ್ ಪ್ರದೇಶ ವನ್ಯಜೀವಿ ವಲಯ ವ್ಯಾಪ್ತಿಗೆ ಸೇರಿರುತ್ತದೆ.

ಕೆ.ಆರ್.ಎಸ್. ಬೃಂದಾವನ ಗಾರ್ಡನ್‌ಗೆ ಹೊಂದಿಕೊಂಡಂತಿರುವ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಗ್ರಾಮಗಳಾದ ಪುಟ್ಟಿಕೊಪ್ಪಲು, ಚೆಲುವರಿಸಿನಕೊಪ್ಪಲು, ಅಗ್ರಹಾರ, ಅರಳಕುಪ್ಪೆ, ಕರಿಮಂಟಿ, ಪಾಲಹಳ್ಳಿ, ಬೆಳಗೊಳ, ಕಾರೇಪುರ (ಕಾರೇಕುರ), ಕೆಂಪಲಿಂಗಾಪುರ, ಚಿಕ್ಕಯಾರಹಳ್ಳಿ, ಕಟ್ಟೇರಿ ನಾಡ, ಹೊಂಗಳ್ಳಿ, ಯಡತಿಟ್ಟು, ಬಲಮುರಿ, ದುದ್ದ ಘಟ್ಟ ಪ್ರದೇಶವು ವನ್ಯಜೀವಿ ವಲಯಕ್ಕೆ ಸೇರಿಸಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ.

Disneyland near KRS in Mandya is impossible

ಇದನ್ನು ನೋಡಿದರೆ ಈಗಿನ ರಾಜ್ಯ ಸರ್ಕಾರ ರಂಗನತಿಟ್ಟು ಪಕ್ಷಿಧಾಮ ವ್ಯಾಪ್ತಿಯ ದೇವರಾಜ, ಯಡತಿಟ್ಟು ಮತ್ತು ಪುಟ್ಟಯ್ಯನಕೊಪ್ಪಲು ಪಕ್ಷಿಧಾಮದ ವನ್ಯಜೀವಿ ವಲಯ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಹಮ್ಮಿಕೊಂಡಿರುವುದು ಗೆಜೆಟ್ ನೋಟಿಫಿಕೇಷನ್‌ನಂತೆ ನಿಯಮಗಳನ್ನು ಪಾಲಿಸದೇ ಉಲ್ಲಂಘಿಸಿರುವುದು ಕಂಡುಬಂದಿದೆ. ಅಲ್ಲದೆ, ಉದ್ದೇಶಿತ ಡಿಸ್ನಿಲ್ಯಾಂಡ್ ಯೋಜನೆಯಿಂದ ದೇವರಾಜ ಪಕ್ಷಿಧಾಮ ಸಂಪೂರ್ಣ ನಾಶವಾಗಲಿದೆ. ಇದು ಸುಪ್ರೀಂಕೋರ್ಟ್‌ನ ಆದೇಶಕ್ಕೆ ವ್ಯತಿರಿಕ್ತವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದಾಗಿರುತ್ತದೆ.

ಗೆಜೆಟ್ ನೋಟಿಫಿಕೇಷನ್‌ನಂತೆ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿ ಬರುವ ರಂಗನತಿಟ್ಟು ಪಕ್ಷಿಧಾಮ, ದೇವರಾಜ, ಯಡತಿಟ್ಟು, ಪುಟ್ಟಯ್ಯನಕೊಪ್ಪಲು, ಗೆಂಡೆಹೊಸಹಳ್ಳಿ, ಅರಕೆರೆ ದ್ವೀಪಗಳ 26 ಗ್ರಾಮಗಳ ವ್ಯಾಪ್ತಿಯ 2804 ಹೆಕ್ಟೇರ್ ಪ್ರದೇಶ ಜಮೀನು (6,142 ಎಕರೆ) ಅರಣ್ಯ ಸಂರಕ್ಷಣಾ ಕಾಯ್ದೆ 1980, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಪರಿಸರ ಸಂರಕ್ಷಣಾ ಕಾಯ್ದೆ 1986, ಜಲ ಸಂರಕ್ಷಣಾ ಕಾಯ್ದೆ ಮತ್ತು ಇತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಯ್ದೆ, ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಒಳಪಡುವುದರಿಂದ ಉದ್ಧೇಶಿತ ಡಿಸ್ನಿಲ್ಯಾಂಡ್ ಮಾದರಿ ಯೋಜನೆಯನ್ನು ಕೈಬಿಡುವಂತೆ ಕೆ.ಆರ್. ರವೀಂದ್ರ ಅವರು ದೂರಿನಲ್ಲಿ ಒತ್ತಾಯಪೂರ್ವಕ ಮನವಿ ಮಾಡಿದ್ದಾರೆ.

Disneyland near KRS in Mandya is impossible

ಇದೆಲ್ಲವನ್ನು ಗಮನಿಸಿ ಹೇಳುವುದಾದರೆ ವನ್ಯಜೀವಿ ವಲಯ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಅಸಾಧ್ಯ ಎಂಬುದು ಸ್ಪಷ್ಟವಾಗುತ್ತಿದೆ. ಮುಂದೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
English summary
Disneyland near KRS in Mandya is impossible as it comes under environmentally sensitive area covering 26 villages and world famous Ranganahittu bird sanctuary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X