ಮಂಡ್ಯದಲ್ಲಿ ಫಲಿತಾಂಶದ ನಂತರವೂ ಚರ್ಚೆ ನಿಂತಿಲ್ಲ...
Recommended Video
ಮಂಡ್ಯ, ಮೇ 27: ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತೆ ಮಂಡ್ಯದಲ್ಲಿ ಚುನಾವಣೆ ನಡೆದು ಫಲಿತಾಂಶ ಹೊರಬಂದಿದ್ದರೂ ಚರ್ಚೆಗಳು ಮಾತ್ರ ನಿಂತಿಲ್ಲ. ಇಷ್ಟಕ್ಕೂ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿತ್ತಲ್ಲದೆ, ಒಕ್ಕಲಿಗರೇ ಬಹು ಸಂಖ್ಯಾತರಾಗಿದ್ದರು. ಅವರು ಜೆಡಿಎಸ್ ಬೆಂಬಲಿಸಿದ್ದರೂ ಕೊನೆ ಗಳಿಗೆಯಲ್ಲಿ ಲಕ್ಷಾಂತರ ಮತದಿಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರು ಹೇಗೆ ಗೆಲುವು ಪಡೆದರು ಎಂಬ ಪ್ರಶ್ನೆಗಳು ಹಲವರನ್ನು ಕಾಡತೊಡಗಿದೆ.
ಹಾಗೆ ನೋಡಿದರೆ ಜೆಡಿಎಸ್ ಗೆ ಒಕ್ಕಲಿಗರ ಮತಗಳೇ ವರದಾನ. ಇದರ ಜೊತೆಗೆ ಒಂದಷ್ಟು ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಬೆಂಬಲವೂ ಇರುವುದರಿಂದಾಗಿ ಜೆಡಿಎಸ್ ಒಂದಷ್ಟು ಗೆಲವನ್ನು ಪಡೆಯಲು ಸಾಧ್ಯವಾಗಿದೆ. ಆದರೆ ಮಂಡ್ಯದ ಚುನಾವಣೆಯಲ್ಲಿ ಇದ್ಯಾವುದೂ ಆಗಲೇ ಇಲ್ಲ. ಇಲ್ಲಿನ ನಾಯಕರು ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದರಲ್ಲದೆ, ಮಂಡ್ಯದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ಬರದಲ್ಲಿ ಇತರೆ ವರ್ಗದವರನ್ನು ಕಡೆಗಣಿಸಲು ಆರಂಭಿಸಿದರು. ಇದು ಒಂದು ರೀತಿ ಜೆಡಿಎಸ್ ಗೆ ವರದಾನವಾಗುವ ಬದಲಿಗೆ ಸುಮಲತಾ ಅವರಿಗೆ ಲಾಭ ತಂದು ಕೊಟ್ಟಿತು ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಸುಮಲತಾ: ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದ ಕರ್ನಾಟಕದ ಮೊದಲ ಮಹಿಳೆ
ಚುನಾವಣೆಯ ಆರಂಭದಿಂದಲೂ ಜೆಡಿಎಸ್ ನವರು ಒಕ್ಕಲಿಗರ ಮತಗಳ ಮೇಲೆ ಕಣ್ಣಿಟ್ಟು ಅವರನ್ನು ತಮ್ಮತ್ತ ಸೆಳೆಯುವ ತಂತ್ರ ಮಾಡಿದರು. ಎದುರಾಳಿಯ ಜಾತಿಯನ್ನು ಎಳೆದು ತಂದರು. ಅದು ಕೆಲಸ ಮಾಡಬಹುದು ಎಂದು ನಂಬಿದರು. ಆದರೆ ಜೆಡಿಎಸ್ ತಂತ್ರ ಎಲ್ಲೋ ಒಂದು ಕಡೆ ಮುಳುವಾಗತೊಡಗಿತು. ಒಕ್ಕಲಿಗರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಗಟ್ಟಿಯಾಗಿ ನಿಲ್ಲುತ್ತಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆಯೇ ಒಕ್ಕಲಿಗರೇತರರು ಸ್ವತಂತ್ರ ಅಭ್ಯರ್ಥಿಯತ್ತ ಒಲವು ತೋರತೊಡಗಿದರು.
ಬಿಜೆಪಿ ಸುಮಲತಾ ಪರ ಬೆಂಬಲ ಸೂಚಿಸುತ್ತಿದ್ದಂತೆಯೇ ಅಲ್ಪಸಂಖ್ಯಾತರು, ಹಿಂದುಳಿದವರು ಮತ ಹಾಕಬೇಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಪ್ರಚಾರ ಮಾಡಿದರು. ಹೀಗೆ ಹತ್ತು ಹಲವು ತಂತ್ರಗಳನ್ನು ಮಾಡಿದ ಜೆಡಿಎಸ್ ನಾಯಕರು ಗೆಲುವು ನಮ್ಮದೇ ಎಂದು ಬೀಗಿದರು. ಆದರೆ ಫಲಿತಾಂಶ ಬಂದಾಗ ಮಾತ್ರ ಎಲ್ಲವೂ ಉಲ್ಟಾ ಆಗಿತ್ತು.
ಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದಿದೆ ಈ '10' ಅಸ್ತ್ರಗಳು
ಇಷ್ಟಕ್ಕೂ ಇಲ್ಲಿ ಆಗಿದ್ದಾದರೂ ಏನು ಎಂಬುದನ್ನು ನೋಡಿದರೆ ಜೆಡಿಎಸ್ ತಂತ್ರವೇ ಮುಳುವಾಯಿತು ಎನ್ನುವುದು ಸ್ಪಷ್ಟವಾಗುತ್ತಿದೆ. ಜೆಡಿಎಸ್ ಗೆ ದೊರೆಯಬೇಕಾಗಿದ್ದ ಮತಗಳ ಪೈಕಿ ಹೆಚ್ಚಿನ ಮತಗಳು ಹಂಚಿಹೋದವು. ಜತೆಗೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸುಮಲತಾ ಅವರತ್ತ ವಾಲಿದ್ದರು.
ಇನ್ನು ಫಲಿತಾಂಶದ ನಂತರ ಸುಮಲತಾ ಅವರು ಬಿಜೆಪಿಗೆ ಸೇರುತ್ತಾರೆಂಬ ರಾಜಕೀಯ ಗಾಸಿಪ್ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ತಡೆಹಿಡಿಯುವಲ್ಲಿ ಯಶಸ್ಸು ಕಂಡರೂ ಬಿಜೆಪಿಯ ವೋಟ್ ಬ್ಯಾಂಕ್ಎಂದೇ ಬಿಂಭಿತವಾಗಿರುವ ಲಿಂಗಾಯತರು, ಬ್ರಾಹ್ಮಣರು, ಜೈನರು ಮತ್ತಿತರ ಮೇಲ್ವರ್ಗದ ಮತದಾರರು ಬಿಜೆಪಿಯ ಅಧಿಕೃತ ಅಭ್ಯರ್ಥಿ ಇಲ್ಲದೇ ಇದ್ದುದ್ದರಿಂದ ಶೇ. 90ರಷ್ಟು ಸುಮಲತಾ ಅವರನ್ನು ಬೆಂಬಲಿಸಿರುವುದು ಎದ್ದು ಕಾಣುತ್ತಿದೆ.
ಮಂಡ್ಯದಲ್ಲಿ ನಾಲ್ವರು ಸುಮಲತಾ ಪಡೆದ ಮತಗಳೆಷ್ಟು?
ಹಿಂದುಳಿದ ಸಮುದಾಯಗಳಾದ ಕುಂಬಾರ, ಮಡಿವಾಳ, ಗಾಣಿಗ, ಸವಿತಾ, ವಿಶ್ವಕರ್ಮ, ಗಂಗಾಮತ, ಉಪ್ಪಾರ, ನೇಕಾರ, ಭಾವಸಾರ ಕ್ಷತ್ರಿಯ ಸೇರಿದಂತೆ ಹಲವು ಸಮುದಾಯಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಮತದಾರರಲ್ಲಿ ಶೇ. 80ರಷ್ಟು ಮಂದಿ ಸುಮಲತಾ ಪರ ಮತಚಲಾಯಿಸಿದ್ದು ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ 5 ಕಾರಣಗಳು
ಇನ್ನು ಬಿಎಸ್ ಪಿ ಅಭ್ಯರ್ಥಿ ಪಡೆದ 12 ಸಾವಿರ ಮತ ಸುಮಲತಾ ಅವರಿಗೆ ಒಳ್ಳೆಯದನ್ನೇ ಮಾಡಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗೇತರ ಶಕ್ತಿಗಳು ಒಗ್ಗೂಡಿ ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ ಎನ್ನುವುದಂತು ಸತ್ಯ.