ರಜೆಯಿದ್ದರೂ ತರಗತಿ ನಡೆಸಿದ ಸಂಸ್ಥೆ ವಿರುದ್ಧ ಆಕ್ರೋಶ
ಮಂಡ್ಯ, ಜನವರಿ 23: ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಸರಕಾರಿ ರಜೆ ಘೋಷಣೆ ಮಾಡಿದ್ದರೂ ಪಟ್ಟಣದ ಕ್ರೈಸ್ತ ದಿ ಕಿಂಗ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯು ಕಾಲೇಜಿಗೆ ರಜೆ ಘೋಷಣೆ ಮಾಡದೇ ಆಂತರಿಕ ಪರೀಕ್ಷೆ ನಡೆಸಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಭಕ್ತಾಧಿಗಳು ಕಾಲೇಜಿನ ಮುಂದೆ ಧರಣಿ ನಡೆಸಿ ಆಡಳಿತ ಮಂಡಳಿಯ ವರ್ತನೆಯನ್ನು ಖಂಡಿಸಿದ ಘಟನೆಯೂ ನಡೆದಿದೆ. ಪ್ರಥಮ ಪಿಯುಸಿ ಮಕ್ಕಳಿಗೆ ಆಂತರಿಕ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾಡುತ್ತಾ ಸರಕಾರಿ ಆದೇಶವನ್ನು ಗಾಳಿಗೆ ತೂರಿರುವ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾನಿರತ ಭಕ್ತಾಧಿಗಳು ನಾಡಿನಾದ್ಯಂತ ಶೋಕಾಚರಣೆ ನಡೆಯುತ್ತಿದ್ದರೂ ಮಕ್ಕಳನ್ನು ಬಲವಂತವಾಗಿ ಬರಮಾಡಿಕೊಂಡು ಪರೀಕ್ಷೆ ನಡೆಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವೈರಲ್ ವಿಡಿಯೋ: ಶ್ರೀಗಳು ನಮ್ಮನ್ನಗಲಿಲ್ಲ,ಇಂಥ ಮಕ್ಕಳಲ್ಲಿದ್ದಾರೆ ನೋಡಿ..!
ಸಿದ್ದಗಂಗಾ ಶ್ರೀಗಳಿಗೆ ಗೌರವಾರ್ಥ ರಜೆ ನೀಡುವಂತೆ ಸರಕಾರ ಆದೇಶ ನೀಡಿದ್ದರೂ ಏಕೆ ಪರೀಕ್ಷೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರು ಯಾರು ಸತ್ತರೆ ನಮಗೇನು ನಮ್ಮ ಶಾಲೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುವ ಹಿತದೃಷ್ಠಿಯಿಂದ ತರಗತಿಗಳನ್ನು ನಡೆಸುತ್ತಿದ್ದೇವೆ. ಕೇಳಲು ನೀವ್ಯಾರು ಎಂದು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದನ್ನು ಅರಿತ ಆಡಳಿತ ಮಂಡಳಿ ಕೊನೆಗೆ ತಮ್ಮ ತಪ್ಪನ್ನು ಒಪ್ಪಿಕೊಂಡು ಪರೀಕ್ಷೆಯನ್ನು ರದ್ದುಪಡಿಸಿ ರಜೆ ಘೋಷಣೆ ಮಾಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ವಾಪಸ್ ಪಡೆದರು.
ಗದ್ದುಗೆಯಲ್ಲಿ ಐಕ್ಯರಾದ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು
ಪ್ರತಿಭಟನೆಯಲ್ಲಿ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಮುಖಂಡ ಕೆ.ಎಸ್.ಸತೀಶ್, ಸಿದ್ದಗಂಗಾ ಶ್ರೀಮಠದ ಭಕ್ತರಾದ ಯೋಗೇಶ್, ನಾಗರಾಜು, ಸಿದ್ದಲಿಂಗಸ್ವಾಮಿ, ಮನು, ಮುರುಗೇಶ್, ಹೆಚ್.ಬಿ.ಮಂಜುನಾಥ್, ಕೆ.ಪಿ.ಮಂಜುನಾಥ್, ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.