ಸಾಲಗಾರರ ಕಾಟಕ್ಕೆ ಹೆದರಿ ಮಂಡ್ಯದಲ್ಲಿ ರೈತ ಆತ್ಮಹತ್ಯೆ
ಚಿಕ್ಕಸೋಮನಹಳ್ಳಿ ಗ್ರಾಮದ ನಿವಾಸಿ ಈರೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಅಘಲಯ ಗ್ರಾಮದ ವಿ.ಎಸ್.ಎಸ್.ಎನ್. ಬ್ಯಾಂಕಿನಿಂದ 2ಲಕ್ಷ ಹಾಗೂ ಎಸ್ಬಿಐ ನಲ್ಲಿ 2 ಲಕ್ಷ ಸಾಲ ಮಾಡಿದ್ದರು.
ಕೆ.ಆರ್.ಪೇಟೆ, ಮೇ 16: ಬರದಿಂದ ಬೆಳೆಬೆ ಳೆಯಲಾಗದೆ ಸಾಲ ಮಾಡಿಕೊಂಡಿದ್ದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಚಿಕ್ಕಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಸೋಮನಹಳ್ಳಿ ಗ್ರಾಮದ ನಿವಾಸಿ ಈರೇಗೌಡ (50) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಅಘಲಯ ಗ್ರಾಮದಲ್ಲಿರುವ ವಿ.ಎಸ್.ಎಸ್.ಎನ್. ಬ್ಯಾಂಕಿನಲ್ಲಿ ಎರಡು ಲಕ್ಷ ರೂ. ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಎರಡು ಲಕ್ಷ ರೂ.ಗಳನ್ನು ಸಾಲ ಮಾಡಿದ್ದರು. ಅಲ್ಲದೆ, ಕೈಸಾಲವನ್ನು ಕೂಡ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.[ಮಂಡ್ಯದಲ್ಲಿ ವಿಷವುಣಿಸಿ, ಉಸಿರುಗಟ್ಟಿಸಿ ವಿದ್ಯಾರ್ಥಿಯ ಕೊಲೆ]
ಒಂದು ಎಕರೆ ಜಮೀನು ಹೊಂದಿದ್ದು ಮಳೆಯಾಗದ ಹಿನ್ನೆಲೆಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಮಾಡಿದ ಸಾಲದ ಬಡ್ಡಿ ದಿನದಿಂದ ದಿನಕ್ಕೆ ಹೆಚ್ಚಾಗಿತ್ತಲ್ಲದೆ, ಕೈ ಸಾಲ ನೀಡಿದವರು ಹಿಂತಿರುಗಿಸುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಇದರಿಂದ ಬೇಸತ್ತ ಅವರು ತಮ್ಮ ಜಮೀನಿನ ಬಳಿಯ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೃತರ ಪತ್ನಿ ನಾಗಮ್ಮ ಪಟ್ಟಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೃತ ರೈತನಿಗೆ ಒಬ್ಬ ಪುತ್ರ ಮತ್ತು ಪುತ್ರಿಯಿದ್ದಾರೆ. ಸಬ್ಇನ್ಸ್ ಪೆಕ್ಟರ್ ಅರುಣ್ಕುಮಾರ್ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.