ಮಂಡ್ಯದಲ್ಲಿ ಕಳಪೆ ಬೆಲ್ಲ ಮಾರಾಟ ತಡೆಗೆ ಡಿಸಿ ಸೂಚನೆ
ರೈತರು ಕಬ್ಬು ಬೆಳೆಸಿ ಅಲೆಮನೆಯಲ್ಲಿ ತಯಾರಿಸುತ್ತಿದ್ದ ಸಾವಯವ ಬೆಲ್ಲ ತನ್ನದೇ ಆದ ರುಚಿ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿತ್ತು. ಹೀಗಾಗಿ ಇದಕ್ಕೆ ಹೆಚ್ಚಿನ ಬೇಡಿಕೆ ಎಲ್ಲೆಡೆಯಿಂದ ಬರುತ್ತಿತ್ತಲ್ಲದೆ, ರಾಸಾಯನಿಕ ರಹಿತವಾಗಿದ್ದರಿಂದ ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿದ್ದರು. ಆದರೆ ಇದೀಗ ಲಾಭ ಪಡೆಯುವ ಸಲುವಾಗಿ ಬೆಲ್ಲ ತಯಾರಕರು ಅಡ್ಡ ದಾರಿ ಹಿಡಿದಿರುವುದು ಬೆಳಕಿಗೆ ಬಂದಿದ್ದು, ಇದರಿಂದ ನೈಜ ಬೆಲ್ಲ ತಯಾರು ಮಾಡಿ ಮಾರಾಟ ಮಾಡುವ ರೈತರಿಗೆ ಸಂಕಷ್ಟ ಎದುರಾಗಿದೆ. ಜತೆಗೆ ಮಂಡ್ಯದ ಬೆಲ್ಲವನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುವಂತಾಗಿದೆ.
ಮಂಡ್ಯ: ಪುಂಡ-ಪೋಕರಿಗಳ ಅಡ್ಡೆಯಾದ ಸುಂದರ ತಾಣ ಹೇಮಗಿರಿ
ಬೆಲ್ಲದಲ್ಲಿ ಮಾರಕ ಕ್ಯಾನ್ಸರ್ ಅಂಶ
ಇತ್ತೀಚಿಗಿನ ವರ್ಷಗಳಲ್ಲಿ ಉತ್ತರ ಭಾರತದಿಂದ ಬಂದಿರುವ ಕೆಲವು ಬೆಲ್ಲ ತಯಾರಕರು ಲಾಭದ ದೃಷ್ಠಿಯಿಂದ ರಾಸಾಯನಿಕ ಮತ್ತು ಸಕ್ಕರೆ ಸೇರಿದಂತೆ ಹಲವು ಪದಾರ್ಥಗಳನ್ನು ಸೇರಿಸಿ ಬೆಲ್ಲ ತಯಾರು ಮಾಡುತ್ತಿದ್ದು, ಇದರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದರಲ್ಲಿ ಮಾರಕ ಕ್ಯಾನ್ಸರ್ ಕಾರಕ ಅಂಶವಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇನ್ನೊಂದೆಡೆ ರಾಸಾಯನಿಕ ಬಳಸಿ ಬೆಲ್ಲ ತಯಾರು ಮಾಡುತ್ತಿರುವುದರಿಂದ ನೈಜವಾಗಿ ಬೆಲ್ಲ ತಯಾರಿಸುವವರಿಗೆ ತೊಂದರೆಯಾಗುತ್ತಿದೆ ಎನ್ನಲಾಗಿದೆ.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ
ಈ ವಿಚಾರ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಅವರ ಗಮನಕ್ಕೆ ಬರುತ್ತಿದ್ದಂತೆಯೇ, ತ್ರೈಮಾಸಿಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ ಅವರು, ಪುಟ್ ಪಾತ್ನಲ್ಲಿ ಆಹಾರ ಮಾರಾಟ ಮಾಡುವವರು ಹೆಚ್ಚು ಬಣ್ಣದ ಪೌಡರ್ ಮತ್ತು ರಾಸಾಯನಿಕ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಬಳಕೆ ಮಾಡುತ್ತಿದ್ದು, ಇದರ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಬೆಲ್ಲದ ಗುಣಮಟ್ಟ ಪರೀಕ್ಷಿಸಿ
ಬೆಲ್ಲದ ತಯಾರಿಕೆಯಲ್ಲಿ ಸಕ್ಕರೆಯ ಬಳಕೆಯಾಗುತ್ತಿದ್ದು, ಲಾಭಕ್ಕಾಗಿ ಸಕ್ಕರೆ ಉಪಯೋಗಿಸುವುದರಿಂದ ಬೆಲ್ಲದ ಗುಣಮಟ್ಟ ಕಳಪೆಯಾಗಿದೆ. ಸಕ್ಕರೆಯನ್ನು ಹೊರತುಪಡಿಸಿ ಇತರೆ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತಿದೆ, ಇದನ್ನು ಕೂಡಲೆ ಪರಿಶೀಲಿಸಿ, ಗುಣಮಟ್ಟ ಪರೀಕ್ಷಿಸಿ, ಕಳಪೆ ಗುಣಮಟ್ಟ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಲ್ಲ ತಯಾರಕರಿಗೆ ಇದರ ಕುರಿತು ಜಾಗೃತಿ ಮೂಡಿಸಿ, ಕಲಬೆರಕೆ ಮಾಡುವುದರಿಂದ ಬಳಕೆದಾರರ ಆರೋಗ್ಯದಲ್ಲಿ ಅನಾನುಕೂಲವುಂಟಾಗುತ್ತದೆ, ಪ್ರಧಾನಮಂತ್ರಿ ಯೋಜನೆಯಡಿ ಬೆಲ್ಲ ತಯಾರಿಕೆ ಜಾರಿಗೊಳಿಸಿರುವ ಕಾರಣ ಇದು ಬಹಳ ಗಂಭೀರವಾದ ವಿಷಯ, ಕೂಡಲೇ ಕ್ರಮ ಕೈಗೊಳುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಭಾರತದಲ್ಲೇ 262 ಮಿಲಿಯನ್ ಜಾಕ್ ಪಾಟ್ ಗೆಲ್ಲಲು ಅವಕಾಶ!
Recommended Video
ಆಹಾರ ಪದಾರ್ಥಗಳ ಮೇಲೆ ನಿಗಾವಹಿಸಿ
ಇನ್ನು ಈ ಸಭೆಯಲ್ಲಿ ಮೀನು, ಬೇಕರಿ ತಿನಿಸುಗಳೂ, ಫಾಸ್ಟ್ ಫುಡ್ ಆಹಾರಗಳು, ಪ್ಯಾಕೇಜ್ಡ್ ಕುಡಿಯುವ ನೀರು, ಆಡುಗೆ ಎಣ್ಣೆ ಹಾಗೂ ಇನ್ನಿತರ ಆಹಾರ ಪದಾರ್ಥಗಳ ಗುಣಮಟ್ಟದ ಮೇಲೆ ನಿಗಾವಹಿಸಿ, ಕಳಪೆ ಗುಣಮಟ್ಟ, ಅಥವಾ ಯಾವುದೇ ಆರೋಗ್ಯ ಹಾನಿ ಉಂಟುಮಾಡುವ ಪದಾರ್ಥಗಳ ಕಂಡುಬಂದಲ್ಲಿ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ವ್ಯಾಪಾರಸ್ಥರ ಪರವಾನಿಗೆಯ ಕುರಿತು ಮಾತನಾಡಿದ ಅವರು, ದಿನಕ್ಕೆ 3500 ರೂ. ಗಿಂತಲೂ ಹೆಚ್ಚು ಆದಾಯವುಳ್ಳ ಪ್ರತಿಯೊಬ್ಬರೂ ಪರವಾನಿಗೆಯನ್ನು ಹೊಂದಿರಬೇಕು/ ಇಲ್ಲದಿದ್ದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ವೇಳೆ ಆಹಾರ, ನಾಗರಿಕ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಕುಮುದಾ ಶರತ್, ಎ.ಪಿ.ಎಂ.ಸಿ ಉಪ ನಿರ್ದೇಶಕರು ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು.