ಮಂಡ್ಯ : ನಾಲೆಗಳಿಗೆ ನೀರು ಹರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಮಂಡ್ಯ, ಜುಲೈ 04 : ಮಂಡ್ಯ ಜಿಲ್ಲೆಯಲ್ಲಿ ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಸಿ.ಟಿ.ಮಂಜುನಾಥ್ ಒತ್ತಾಯಿಸಿದ್ದಾರೆ. ನೀರು ಹರಿಸದಿದ್ದರೆ ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನರೇಂದ್ರ ಮೋದಿ ವಿಚಾರ್ ಮಂಚ್ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ, ಜನರು ಕೃಷಿಯನ್ನೇ ನಂಬಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ಮಕ್ಕಳ ಮದುವೆ, ವಿದ್ಯಾಭ್ಯಾಸ, ಜೀವನ ನಿರ್ವಹಣೆ ಎಲ್ಲದರ ಮೂಲವೇ ವ್ಯವಸಾಯವಾಗಿದೆ. ಈಗಾಗಲೇ ರೈತರು ಸಾಲ-ಸೋಲ ಮಾಡಿ ಕಬ್ಬು, ಭತ್ತ ಬೆಳೆದಿದ್ದಾರೆ ಎಂದು ಹೇಳಿದ್ದಾರೆ.
ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ಮುಂದಾದ ನೂರಾರು ರೈತರ ಬಂಧನ
ರೈತರು ಬೆಳೆದಿರುವ ಕಬ್ಬು, ಭತ್ತ ಅವರ ಕೈ ಸೇರಬೇಕು ಎಂದರೆ ಕೂಡಲೇ ರಾಜ್ಯಸರ್ಕಾರ ಬೆಳೆ ರಕ್ಷಣೆಗೆ ಒಂದು ಕಟ್ಟು ನೀರು ಹರಿಸಬೇಕು. ಕಳೆದ ಲೋಕಸಭಾ ಚುನಾವಣಾ ವೇಳೆಯಲ್ಲಿ ಮಂಡ್ಯ ಭಾಗದ ನಾಲೆಗಳಿಗೆ ಮೂರು ಬಾರಿ ನೀರು ಹರಿಸಲಾಗಿದೆ ಎಂದು ಹೇಳಿದ್ದಾರೆ.
ಗಂಭೀರ ಸ್ವರೂಪ ಪಡೆದ ಮಂಡ್ಯ ರೈತರ ಪ್ರತಿಭಟನೆ: ಕೆಆರ್ಎಸ್ಗೆ ಮುತ್ತಿಗೆ
ಮುಖ್ಯ ಮಂತ್ರಿಗಳು ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ Cauvery Water Management Authority (CWMA) ಮೇಲೆ ಗೂಬೆ ಕೂರಿಸುವಂತಕ ಕೆಲಸ ಮಾಡುತ್ತಿದ್ದಾರೆ. ಹಿಂದೆ ನೀರು ಬಿಡುವಾಗ ಯಾರ ಅನುಮತಿ ಪಡೆದು ನೀರು ಹರಿಸಿದ್ದರು? ಎಂದು ಸಿ.ಟಿ.ಮಂಜುನಾಥ್ ಪ್ರಶ್ನಿಸಿದ್ದಾರೆ.
ಕಳೆದುಹೋಗಿದ್ದಾರೆ ಮಂಡ್ಯ ಶಾಸಕರು, ಹುಡುಕಿಕೊಟ್ಟವರಿಗೆ ಬಹುಮಾನ
ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಮತದಾರರು ತಮ್ಮ ಪುತ್ರನ ಕೈ ಹಿಡಿಯಲಿಲ್ಲ ಎನ್ನುವ ಕಾರಣಕ್ಕೆ ಮಂಡ್ಯದ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿಯಾದ ಕೆಲಸ ಎಂದು ಆರೋಪಿಸಿದ್ದಾರೆ.
ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ಗರ್ಭಿಣಿಯರಿಗೆ ಹಾಗೂ ವಯಸ್ಸಾದವರಿಗೆ ಮಾಶಾಸನ ಭರವಸೆ ಎಲ್ಲದರಲ್ಲೂ ಮತದಾರರಿಗೆ ಮೋಸ ಮಾಡಿದ್ದು, ಈಗ ನಾಲೆಗಳಿಗೆ ನೀರು ಬಿಡದೆ ಪರೋಕ್ಷವಾಗಿ ಅನ್ನದಾತರ ಆತ್ಮ ಹತ್ಯೆಗೆ ಕಾರಣವಾಗುತ್ತಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಜಿಲ್ಲೆಯಲ್ಲಿಯೇ 225 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬೆಳೆದಿರುವ 60 ಲಕ್ಷ ಟನ್ ಕಬ್ಬನ್ನು ನಾಲೆಗಳಿಗೆ ನೀರು ಹರಿಸುವ ಮೂಲಕ ಉಳಿಸಿಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿ ಎಕರೆಗೆ 60 ಟನ್ ನಂತೆ ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ನಿಗದಿಮಾಡಿರುವ ಹಣವನ್ನು ಈ ಕೂಡಲೇ ರೈತರಿಗೆ ಪರಿಹಾರದ ರೂಪದಲ್ಲಿ ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆದು ಕೇಂದ್ರ ಸರ್ಕಾರ ಬೆಂಬಲ ಬೆಲೆ ಜೊತೆ ರಾಜ್ಯ ಸರ್ಕಾರವು ಕೇರಳ ಮತ್ತು ತಮಿಳುನಾಡು ಮಾದರಿಯಲ್ಲಿ ರೈತರಿಗೆ ಕ್ವಿಂಟಲ್ ಭತ್ತಕ್ಕೆ ಹೆಚ್ಚುವರಿ 400 ರೂ. ನೀಡಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಬಾಕಿ ಹಣವನ್ನು ಕೂಡಲೇ ಕೊಡಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ರೈತರೊಟ್ಟಿಗೆ ಜಿಲ್ಲೆಯ ಎಲ್ಲ ಚುನಾಯಿತ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಿ.ಟಿ.ಮಂಜುನಾಥ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.