ಸುಮಲತಾ ಅಂಬರೀಷ್ ಪಡೆದ ಮೊಟ್ಟ ಮೊದಲ ಮತವೇ ಅಸಿಂಧು
ಮಂಡ್ಯ, ಮೇ 10: ಮಂಡ್ಯ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಮತ ಚಲಾಯಿಸಿದ್ದೇನೆ ಎಂದು ಮಂಡ್ಯ ಮೂಲದ ಸಿಆರ್ ಪಿಎಫ್ ಯೋಧ ರಾಜಾ ನಾಯಕ್ ಬಹಿರಂಗ ಪಡಿಸಿದ್ದರು.
ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ್ದರಿಂದ ಯೋಧ ಆರ್ ಸಿ ನಾಯಕ್ ಅವರು ಹಾಕಿದ್ದ ಮತವನ್ನು ಅಸಿಂಧು ಎಂದು ಪರಿಗಣಿಸಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಅಂಚೆ ಮೂಲಕ ಮತದಾನ ಮಾಡಿದ್ದ ಯೋಧ ಆರ್.ಸಿ ನಾಯಕ್ ಅವರು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಸುಮಲತಾಗೆ ಮತ ಚಲಾಯಿಸಿ ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಬ್ಯಾಲೆಟ್ಪೇಪರ್ನ ಫೋಟೋ ಕೂಡಾ ಹಂಚಿಕೊಂಡಿದ್ದರು. ಯೋಧನ ಫೇಸ್ ಬುಕ್ ಪೋಸ್ಟ್ಗೆ ಅಭ್ಯರ್ಥಿ ಸುಮಲತಾ ಅವರು ಧನ್ಯವಾದ ಅರ್ಪಿಸಿ ನಿಮಗೆ ಚಿರಋಣಿ ಎಂದಿದ್ದಾರು.
ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿರುವುದು, ಅಭ್ಯರ್ಥಿ ಪರ ಕಾನೂನು ಬಾಹಿರವಾಗಿ ಪ್ರಚಾರ ಮಾಡಿರುವುದನ್ನು ಉಲ್ಲೇಖಿಸಿ ಯೋಧನ ವಿರುದ್ಧ ಅಡ್ವೊಕೇಟ್ ಕಿರಣ್ ಎಂಬುವರು ನ್ಯಾಯಾಲಯಕ್ಕೆ ಪಿಟಿಷನ್ ಹಾಕಿದ್ದರು.
ಈ ಬಗ್ಗೆ ಚುನಾವಣಾ ಆಯೋಗದ ನಿರ್ಧಾರವೇ ಅಂತಿಮ ಎಂದು ನ್ಯಾಯಾಲಯ ಸೂಚಿಸಿತ್ತು. ಆರ್ ಸಿ ನಾಯಕ್ ಅವರ ಒಂದು ಮತವನ್ನು ಮೇ 23ರಂದು ಮತ ಎಣಿಕೆ ಸಂದರ್ಭದಲ್ಲಿ ಪರಿಗಣಿಸದಂತೆ ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯೋಗ ಮಂಡ್ಯ ಡಿಸಿಗೆ ನೋಟಿಸ್ ಜಾರಿಯಾಗಿಸಿ, ಕೇಂದ್ರ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.