ಶಿಂಷಾನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
ಮಳವಳ್ಳಿ, ಜುಲೈ 29: ಸಮೀಪದ ತೊರೆಕಾಡನಹಳ್ಳಿ ಗ್ರಾಮದ ಬಳಿ ಹರಿಯುವ ಶಿಂಷಾ ನದಿಯ ಕೊಟ್ಲೆ ಬಳಿ ಭಾರಿ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷಗೊಂಡಿದ್ದು, ಇದನ್ನು ಕಂಡ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಮೊಸಳೆ ಆಹಾರ ಅರಸಿಕೊಂಡು ಬಂದಿರಬಹುದು ಎಂದು ಸಂಶಯಿಸಲಾಗಿದೆ. ಕಾವೇರಿ ನದಿಯ ಮೇಲ್ಭಾಗದಲ್ಲಿರುವ ಭೀಮಾನದಿ, ಶಿಂಷಾ ನದಿ ಹಾಗೂ ಬೆಂಗಳೂರು ನೀರು ಸರಬರಾಜು ಜಲಮಂಡಳಿಯ ಸಿಬ್ಬಂದಿ ಶುದ್ಧೀಕರಿಸಿದ ನೀರಿನ ನಂತರದ ಕೊಳಚೆ ನೀರು, ಈ ಮೂರೂ ಕಡೆಯ ನೀರು ಒಂದೇ ಕಡೆ ಸೇರುವುದರಿಂದ ಆ ಸ್ಥಳವನ್ನು ಕೂಟ್ಲೆ ಸಂಗಮ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದೀಗ ಈ ಸ್ಥಳದ ದಡದಲ್ಲಿ ಮೊಸಳೆ ಕಾಣಿಸಿಕೊಂಡಿರುವುದರಿಂದ ಜನ ಭಯಗೊಂಡಿದ್ದಾರೆ.
ಕೊಪ್ಪಳದಲ್ಲಿ ಭಾರಿ ಗಾತ್ರದ ಮೊಸಳೆಯ ಜೀವ ತೆಗೆದ ಕುರಿ!
ಮೊಸಳೆ ಕಾಣಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಉಪ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನು ಹಿಡಿಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜನರಲ್ಲಿ ಆತಂಕ ಮುಂದುವರೆದಿದೆ.
ಉಪವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದರಿಂದ ದನಕರುಗಳನ್ನು ನದಿ ನೀರಿನಲ್ಲಿ ಮೈ ತೊಳೆಯುವುದಕ್ಕೆ ಅಥವಾ ಈಜಲು ಹೋಗದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.
ದಂಡೊಲೆ ಗ್ರಾಮದ ಖಾಲಿ ಬಾವಿಯೊಂದರಲ್ಲಿ ಮೊಸಳೆ ಪತ್ತೆ
ತೊರೆಕಾಡನಹಳ್ಳಿ ಗ್ರಾಮದ ರಾಜು ಮಾತನಾಡಿ, "ನಮ್ಮ ದನಕರುಗಳಿಗೆ ನೀರು ಕುಡಿಸಲು ಈ ನದಿಯೇ ಆಸರೆಯಾಗಿದೆ. ಅರಣ್ಯ ಸಿಬ್ಬಂದಿ ಮೊಸಳೆಯನ್ನು ಹಿಡಿದು ಕಾವೇರಿ ನದಿಗೆ ಬಿಡಬೇಕು. ಇಲ್ಲದೆ ಹೋದರೆ ರೈತರಿಗೆ ತೊಂದರೆಯಾಗುತ್ತದೆ" ಎಂದು ಕೋರಿಕೊಂಡಿದ್ದಾರೆ.