ಮೇಲುಕೋಟೆ; ಸಲಾಂ ಆರತಿ ಹೆಸರು ಬದಲಿಸಲು ವಿರೋಧ
ಮಂಡ್ಯ, ಮೇ 20: ಇತಿಹಾಸ ಪ್ರಸಿದ್ಧ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ ನಡೆಯುವ ದೀವಟಿಗೆ ಸಲಾಂ (ಸಲಾಂ ಆರತಿ) ಆಚರಣೆಯನ್ನು ಸಂಧ್ಯಾ ಆರತಿ ಎಂದು ಬದಲಾಯಿಸಲು ಮಂಡ್ಯ ಜಿಲ್ಲಾಧಿಕಾರಿ ಶಿಫಾರಸ್ಸು ಮಾಡಿರುವುದಕ್ಕೆ ಸಿಪಿಐಎಂ ವಿರೋಧ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿ ಎಸ್.ಅಶ್ವಥಿ ಸಲಾಂ ಆರತಿ ಹೆಸರನ್ನು ಸಂಧ್ಯಾ ಆರತಿ ಎಂದು ಬದಲಾಯಿಸುವಂತೆ ಧಾರ್ಮಿಕ ದತ್ತಿ ಆಯುಕ್ತರಿಗೆ ಶಿಫಾರಸ್ಸು ಮಾಡಿ ಪತ್ರ ಬರೆದಿದ್ದಾರೆ. ಅಶ್ವಥಿ ನಡೆಗೆ ವಿರೋಧ ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮಂಡ್ಯ ಜಿಲ್ಲಾ ಸಮಿತಿ ಶಿಫಾರಸ್ಸು ವಾಪಸ್ಸು ಪಡೆಯುವಂತೆ ಒತ್ತಾಯಿಸಿದೆ.
ಮೇಲುಕೋಟೆ ದೇವಾಲಯ; ಸಲಾಂ ಆರತಿ ಹೆಸರು ಬದಲು!
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ನಾಯಕ ಕೃಷ್ಣೇಗೌಡ ಟಿ. ಎಲ್. "ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ಇತರರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. ಯಾವ ಕಾನೂನು ಹಾಗೂ ನಿಯಮದ ಅಡಿಯಲ್ಲಿ ಈ ಶಿಫಾರಸ್ಸು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
ಕೊಲ್ಲೂರು ಸಲಾಂ ಮಂಗಳಾರತಿ ನಿಲ್ಲಿಸಿ; ಕಲ್ಲಡ್ಕ ಪ್ರಭಾಕರ್ ಭಟ್
"ಜಿಲ್ಲಾಧಿಕಾರಿಗಳ ಈ ಶಿಫಾರಸ್ಸು ಕೋಮುವಾದಿ ಶಕ್ತಿಗಳಿಗೆ ಹೊಸ ಆಯುಧವೊಂದನ್ನು ಕೊಟ್ಟಂತಾಗುತ್ತದೆ. ಭಾರತದ ವೈವಿಧ್ಯಮಯ ಧಾರ್ಮಿಕ ಆಚರಣೆಗಳನ್ನು ನಾಶಗೊಳಿಸಿ ಏಕರೀತಿಯ ಆಚರಣೆಗಳನ್ನು ಹೇರುವ ಸಂಕುಚಿತ ಮನೋಭಾವದಿಂದ ಕೂಡಿದೆ. ಜಿಲ್ಲಾಧಿಕಾರಿಗಳ ಈ ಶಿಫಾರಸ್ಸನ್ನು ಧಾರ್ಮಿಕ ಇಲಾಖೆಯ ಆಯುಕ್ತರು ಪರಿಗಣಿಸಬಾರದು" ಎಂದು ಆಗ್ರಹಿಸಿದರು.
ಕೊಲ್ಲೂರು: ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ನಿಲ್ಲಿಸಲು ವಿಎಚ್ಪಿ ಆಗ್ರಹ
ಸಲಾಂ ಆರತಿಯನ್ನೇನೋ ಸಂಧ್ಯಾ ಆರತಿ ಮಾಡುತ್ತೀರಿ, ಆದರೆ ಚಲುವರಾಯಸ್ವಾಮಿಯ ಪ್ರೀತಿಯ ಮಡದಿ ಬೀಬಿ ನಾಚ್ಚಿಯಾರ್ (ವರನಂದಿ ಬಾನು) ವಿಚ್ಚೇದನ ಕೊಡಿಸುತ್ತೀರಾ ಎಂದು ಜಿಲ್ಲಾಧಿಕಾರಿಗೆ ಪಕ್ಷ ಪ್ರಶ್ನೆ ಮಾಡಿದೆ.
ಚಲುವರಾಯಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಟಿಪ್ಪು ನೀಡಿದ ಕೊಡುಗೆಗಳ ನೆನಪಿಗಾಗಿ ಟಿಪ್ಪು ಕಾಲದಿಂದಲೂ ಸಲಾಂ ಆರತಿ ಆಚರಣೆಯಲ್ಲಿದೆ. ಈಗ ಎಲ್ಲವನ್ನೂ ಬದಲಾಯಿಸುವ ಬಿಜೆಪಿ ಸರ್ಕಾರದ ರಾಜಕೀಯ ಅಜೆಂಡಾವನ್ನು ಜಾರಿ ಮಾಡಲು ಜಿಲ್ಲಾಧಿಕಾರಿಗಳು ಪ್ರಯತ್ನಿಸುವುದು ಸರಿಯಲ್ಲ ಎಂದು ಹೇಳಿದೆ.
ಕಾಯ್ದೆ ಬಗ್ಗೆ ತಿಳಿಯಲಿ; ರಾಜಕೀಯ ಅಜೆಂಡಾಗಳ ಜಾರಿಯನ್ನು ತಡೆಯಲೆಂದೇ 1991ರ ಪೂಜಾ ಸ್ಥಳಗಳ ಕಾಯ್ದೆ ತರಲಾಗಿದೆ. ಈ ಕಾಯ್ದೆ ಉದ್ದೇಶವೇ 1947ರ ಪೂರ್ವದಲ್ಲಿ ಈ ದೇಶದ ಇತಿಹಾಸದಲ್ಲಿ ನಡೆದುಹೋದ ಸಂಗತಿಗಳು ಪುನರಾವರ್ತನೆಯಾಗಬಾರದು ಎಂಬುದು ಹಾಗೂ 1947ರ ನಂತರ ಭಾರತೀಯರು ಸಾಂವಿಧಾನಿಕವಾಗಿ ಮಾಡಿಕೊಂಡಿರುವ ಕೂಡಿಬಾಳುವ - ಸಹಬಾಳ್ವೆಯ ಒಪ್ಪಂದವನ್ನು ಸ್ವಾತಂತ್ಯ್ರಪೂರ್ವದ ಘಟನೆಗಳು ಹಾಳುಮಾಡಬಾರದೆಂಬುದುದಾಗಿದೆ ಎಂದು ಪಕ್ಷ ತಿಳಿಸಿದೆ.
ಪೂಜಾ ಸ್ಥಳ ಕಾಯ್ದೆ 1991 ರ ಪ್ರಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ಯಾವುದೇ ಪರಂಪರಾಗತ ಆಚರಣೆಗಳನ್ನು ಪೂಜಾ ವಿಧಾನಗಳನ್ನು ಬದಲಿಸುವಂತಿಲ್ಲ. ದಾನ, ದತ್ತಿ, ಭಕ್ತಿ ಮುಂತಾದ ಹಲವು ಕಾರಣಗಳಿಂದ ಧಾರ್ಮಿಕ ಸಾಮರಸ್ಯ ಹಾಗೂ ಸೌಹಾರ್ಧತೆಯ ಪರಂಪರೆ ಎಲ್ಲಾ ಭಾರತೀಯ ಧಾರ್ಮಿಕ ಪರಂಪರೆಯ ಮೂಲಭೂತ ಲಕ್ಷಣವಾಗಿದೆ. ಇದೇ ಭಾರತದ ವೈಶಿಷ್ಟ್ಯ ಇಂತಹ ವೈವಿಧ್ಯಮಯ ವಿಶಿಷ್ಠತೆಯ ನಾಶ ಪರಂಪರೆ ಮತ್ತು ಇತಿಹಾಸಕ್ಕೆ ಮಾಡುವ ದ್ರೋಹ ಎಂದು ಹೇಳಿದೆ.
Recommended Video
ಜಿಲ್ಲಾಧಿಕಾರಿಗಳು ಈ ಕಾಯ್ದೆಯನ್ನು ಓದಿಕೊಳ್ಳಬೇಕು ಮತ್ತು ಜಿಲ್ಲೆಯ ಸೌಹಾರ್ದ, ಸಹಬಾಳ್ವೆ ಮತ್ತು ಬಹುತ್ವದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಕೆಲಸ ಮಾಡಬೇಕು ಹಾಗೂ ಇಂತಹ ದ್ರೋಹವೆಸಗುವ ಯಾವುದೇ ಪ್ರಯತ್ನಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಬೆಂಬಲಿಸದೇ ತಿರಸ್ಕರಿಸಬೇಕೆ ಎಂದು ಪಕ್ಷ ಒತ್ತಾಯಿಸಿದೆ.