ಮಂಡ್ಯ; ಕೋವಿಡ್ ಮಾರ್ಗಸೂಚಿ, ಹಲವಾರು ನಿರ್ಬಂಧಗಳು
ಮಂಡ್ಯ, ಆಗಸ್ಟ್ 05; ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಹೊಸ ಮಾರ್ಗಸೂಚಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.
ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಣಕ್ಕೆ ತರುವ/ ತಡೆಗಟ್ಟುವ ಸಲುವಾಗಿ ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಎಸ್. 30ಕ್ಕೂ ಹೆಚ್ಚು ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕೇರಳಕ್ಕೆ ಕೊರೊನಾ 3ನೇ ಅಲೆಯ ಎಚ್ಚರಿಕೆ ಕೊಟ್ಟ ಆರೋಗ್ಯ ತಜ್ಞರು
ಕೋವಿಡ್ ಸೋಂಕಿನ 3ನೇ ಅಲೆ ಹಿನ್ನಲೆಯಲ್ಲಿ ಮದುವೆ, ನಿಶ್ಚಿತಾರ್ಥ, ಬೀಗರ ಊಟ, ಅಂತ್ಯ ಸಂಸ್ಕಾರ, ತಿಥಿ, ದೇವಾಲಯಗಳಲ್ಲಿ ದೈನಂದಿನ ಪೂಜಾ ಕೈಂಕರ್ಯ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಎರಡು ಮಿನಿ ಉದ್ಯೋಗ ಮೇಳ
ದೇವಾಲಯಗಳಲ್ಲಿ ದಿನನಿತ್ಯದ ಪೂಜೆ ಹೊರತುಪಡಿಸಿ ವಿಶೇಷ ದಿನಗಳು/ ಧಾರ್ಮಿಕ ಸೇವೆಗಳು, ಉತ್ಸವಗಳು, ಜಾತ್ರೆ, ವಾರಾಂತ್ಯ ಹಾಗೂ ಸಾರ್ವಜನಿಕ ರಜಾ ದಿನಗಳ ಅವಧಿಯಲ್ಲಿ ಸಾರ್ವಜನಿಕರ/ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಸಾಮಾಜಿಕ ಹಾಗೂ ರಾಜಕೀಯ ಸಮಾವೇಶಗಳು, ಗುಂಪು ಸೇರಿ ನಡೆಯುವಂತಹ ಸಭೆ, ಜಾಥಾ, ಧರಣಿ/ ಮುಷ್ಕರಗಳನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ನಿಯಮಗಳು; ಮದುವೆ, ನಿಶ್ಚಿತಾರ್ಥ, ಬೀಗರ ಊಟ, ತಿಥಿ, ಅಂತ್ಯಸಂಸ್ಕಾರ ಕಾರ್ಯಕ್ರಮಗಳಲ್ಲಿ 30 ಜನರಿಗೆ ಮಾತ್ರ ಅವಕಾಶ. ದೇವಾಲಯಗಳಲ್ಲಿ ದೈನಂದಿನ ಪೂಜೆಗಳಿಗೆ ಯಾವುದೇ ಅಡಚಣೆ ಇಲ್ಲ.
ಕೊರೊನಾವೈರಸ್ 3ನೇ ಅಲೆ: ಕೇರಳದ ಕಡೆಗೆ ಬೊಟ್ಟು ಮಾಡುವುದು ಅನ್ಯಾಯ
ವಿಶೇಷ ದಿನ (ಅಮವಾಸೆ, ಹುಣ್ಣಿಮೆ) ಆಚರಣೆ, ಧಾರ್ಮಿಕ ಸೇವೆಗಳು, ಉತ್ಸವ, ಜಾತ್ರೆಗಳಿಗೆ ಅವಕಾಶವಿಲ್ಲ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಮುಜರಾಯಿ ಮತ್ತು ಖಾಸಗಿ ದೇವಾಲಯಗಳಿಗೆ ಭಕ್ತರ ಪ್ರವೇಶ ನಿಷೇಧ.
ಗ್ರಾಮ ದೇವತೆಗಳ ಹಬ್ಬ/ ಸಮುದಾಯ ಭೋಜನ, ಸಮುದಾಯದ ಆಚರಣೆಗಳನ್ನು ನಿರ್ಬಂಧಿಸಲಾಗಿದೆ. ಗುಂಪು ಸೇರಿ ನಡೆಸುವ ಸಭೆ, ಸಮಾರಂಭ, ಧರಣಿ, ಮುಷ್ಕರ, ಮಜರಂಜನಾ ಕಾರ್ಯಕ್ರಮಗಳು ನಿರ್ಬಂಧ.
ಲಸಿಕೆ ನೀಡಲು ಸಹಕರಿಸಿ; ಖಾಸಗಿ ಸಂಘ ಸಂಸ್ಥೆಗಳು ಮೊದಲನೇ ಹಾಗೂ ಎರಡನೇ ಕೋವಿಡ್ ಅಲೆಯಲ್ಲಿ ಜಿಲ್ಲೆಯ ನೆರವಿಗೆ ಸ್ಪಂದಿಸಿದ್ದು, ಮುಂಬರುವ ಮೂರನೇ ಅಲೆಯನ್ನು ಎದುರಿಸಲು ಲಸಿಕೆ ಅವಶ್ಯಕವಿದ್ದು ಈ ಲಸಿಕಾಕರಣಕ್ಕೆ ಖಾಸಗಿಯವರು ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಅಶ್ವತಿ ಕರೆ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ನಮಗೆ ಲಭ್ಯವಾಗುತ್ತಿರುವ ಲಸಿಕೆಯನ್ನು ಶೇ 100 ರಷ್ಟು ಸಂಪೂರ್ಣವಾಗಿ ನೀಡಿದ್ದೇವೆ. ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆಯಿದ್ದು 8.5ಲಕ್ಷ ಜನಸಂಖ್ಯೆಗೆ ಮಾತ್ರ ಲಸಿಕೆ ನೀಡಲಾಗಿದೆ.
ದಿನಕ್ಕೆ 3000-4000 ಲಸಿಕೆ ನೀಡುತ್ತಿದ್ದರೆ ಮೂರನೇ ಅಲೆ ಆರಂಭವಾಗುತ್ತದೆ. ಹಾಗಾಗಿ ದಿನದಲ್ಲಿ ಲಸಿಕೆ ನೀಡುವ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಿದೆ. ಇದಕ್ಕಾಗಿ ಖಾಸಗಿ ಸಂಸ್ಥೆಗಳ ಸಹಕಾರಕ್ಕಾಗಿ ಕೋರುತ್ತಿದ್ದೇವೆ ಎಂದು ಜಿಲ್ಲಾಡಳಿತ ಹೇಳಿದೆ.
18-45 ವರ್ಷದವರಿಗೆ ಸರ್ಕಾರದಿಂದ ದೊರೆಯುತ್ತಿರುವ ಲಸಿಕೆಯನ್ನು ನೀಡುತ್ತಿದ್ದು, ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಕೋವಿಡ್ 3ನೇ ಅಲೆ ಭೀತಿ ಹಿನ್ನಲೆಯಲ್ಲಿ ಪಾಂಡವಪುರ ಮತ್ತು ಕೆ. ಆರ್. ಪೇಟೆ ತಾಲೂಕಿನ ಆಕ್ಸಿಜನ್ ಘಟಕ ಮತ್ತು ಮಂಡ್ಯ, ಮದ್ದೂರು , ಮಳವಳ್ಳಿ ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಆಕ್ಸಿಜನ್ ಘಟಕದ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ.
ಬುಧವಾರದ ಹೆಲ್ತ್ ಬುಲೆಟಿನ್ ಅನ್ವಯ ಮಂಡ್ಯದಲ್ಲಿ 43 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 451. ಜಿಲ್ಲೆಯ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 72253. ಇದುವರೆಗೂ ಜಿಲ್ಲೆಯಲ್ಲಿ 620 ಜನರು ಮೃತಪಟ್ಟಿದ್ದಾರೆ.
Recommended Video
ಮಂಡ್ಯ ಜಿಲ್ಲೆಯ ಅಕ್ಕ-ಪಕ್ಕದ ಜಿಲ್ಲೆಗಳಲ್ಲಿ ಒಂದು ವಾರದಿಂದ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆಯು ಈ ತಿಂಗಳಿನಲ್ಲಿ ಬರಬಹುದೆಂಬ ವರದಿಯಿದೆ ಹಾಗಾಗಿ ನಮ್ಮ ಜಿಲ್ಲಾ ಹಂತದಲ್ಲಿ ಜಿಲ್ಲೆಯನ್ನು ರಕ್ಷಿಸುವಲ್ಲಿ ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.