ಮಂಡ್ಯದಲ್ಲಿ ಹೊರ ರಾಜ್ಯದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
ಮಂಡ್ಯ, ಫೆಬ್ರವರಿ 22: ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿಯೂ ಎರಡನೇ ಹಂತದ ಅಲೆ ಪ್ರಾರಂಭವಾಗಬಹುದೆಂಬ ನಿಟ್ಟಿನಲ್ಲಿ, ಮಂಡ್ಯ ಜಿಲ್ಲೆಯಲ್ಲಿನ ವಸತಿ ನಿಲಯಗಳಿಗೆ ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಮತ್ತು ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಆರ್.ಟಿ-ಪಿಸಿಆರ್ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ವಿಡಿಯೋ ಸಂವಾದದ ನಂತರ ಮಾತನಾಡಿದ ಅವರು, ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಭೇಟಿ ನೀಡುವವರು 72 ಗಂಟೆಯ ಮೊದಲೇ ಆರ್.ಟಿ-ಪಿಸಿಆರ್ ಕೋವಿಡ್ ಪರೀಕ್ಷೆ ಇದ್ದರೆ ಮಾತ್ರ ಒಳಗಡೆ ಬಿಡಬೇಕು ಎಂಬ ಆರೋಗ್ಯ ಸಚಿವ ಡಾ.ಸುಧಾಕರ್ ರವರ ಆದೇಶವನ್ನು ತಿಳಿಸಿದರು.
ಎಲ್ಲರೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು, ಆಗಾಗ ಸ್ಯಾನಿಟೈಸರ್ ಬಳಸಬೇಕು, ಹೆಚ್ಚಾಗಿ ಹೋಟೆಲ್ ಇತರ ಸಮಾರಂಭಗಳಲ್ಲಿ ಎಚ್ಚರಿಕೆಯಿಂದ ಇದ್ದರೆ ಎರಡನೇ ಹಂತದ ಕೋವಿಡ್-19 ಅಲೆ ತಡೆಗಟ್ಟಬಹುದು ಎಂಬ ಆರೋಗ್ಯ ಸಚಿವರ ಸಲಹೆಯಂತೆ ಈ ವಿಚಾರವನ್ನು ಎಲ್ಲರ ಗಮನಕ್ಕೆ ತರಲು ಮಂಡ್ಯ ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ರಾಜ್ಯ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ: ಬೆಳಗಾವಿ ಜಿಲ್ಲಾಧಿಕಾರಿ
ಈ ವೇಳೆ ಪಾಂಡವಪುರ ಉಪವಿಭಾಗಧಿಕಾರಿ ಶಿವನಂದಮೂರ್ತಿ ಮಾತನಾಡಿ ಮೊದಲನೇ ಹಂತದ ಲಸಿಕೆ ಪಡೆದ ಕೋವಿಡ್-19 ಫಲಾನುಭವಿಗಳ ಜಿಲ್ಲಾವಾರು ಪ್ರಗತಿಯಲ್ಲಿ, ಮಂಡ್ಯ ಜಿಲ್ಲೆಯು ಶೇ.74ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿ 4ನೇ ಸ್ಥಾನದಲ್ಲಿತ್ತು. ಎರಡನೇ ಹಂತದ ಕೋವಿಡ್-19 ಲಸಿಕೆ ಪಡೆದ ಫಲಾನುಭವಿಗಳ ಪ್ರಗತಿಯಲ್ಲಿ ಮಂಡ್ಯ ಜಿಲ್ಲೆಯು ಶೇ.100ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.
Recommended Video
ವಿಡಿಯೋ ಸಂವಾದದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಂಜಯ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.